'ಅತ್ಯಾಚಾರಿಗಳ ಪೈಕಿ ಹೆಚ್ಚು ಸಂತೋಷ ಕೊಟ್ಟವರು ಯಾರು?'
ಬೆಂಗಳೂರು, ನವೆಂಬರ್ 3: 'ಅವರಲ್ಲಿ ನಿಮಗೆ ಹೆಚ್ಚು ಸಂತೋಷ ಕೊಟ್ಟವರು ಯಾರು?'-ಇದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳಿಗೆ ಕೇರಳದ ಪೊಲೀಸರು ಕೇಳಿರುವ ಪ್ರಶ್ನೆ. ಇಂಥ ಅಮಾನವೀಯ ಪ್ರಶ್ನೆ ಎದುರಿಸಿದ ಆಕೆ ಕಡೆಗೆ ತನ್ನ ದೂರನ್ನೇ ವಾಪಸ್ ತೆಗೆದುಕೊಂಡಿದ್ದಾರೆ. ವಿಪರ್ಯಾಸ ಏನೆಂದರೆ, ಆಕೆ ಮೇಲೆ ದೌರ್ಜನ್ಯ ನಡೆಸಿದವರು ಗಂಡನ ಸ್ನೇಹಿತರು.
ಪೊಲೀಸರ ಬೆದರಿಕೆ ಹಾಗೂ ಅಮಾನವೀಯ ವರ್ತನೆ ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು 32 ವರ್ಷದ ಆ ಮಹಿಳೆ ತಿರುವನಂತಪುರದಲ್ಲಿ ಹೇಳಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ಪತಿ ಮಾಧ್ಯಮದವರ ಎದುರು ಈ ಸಂಗತಿ ಹೊರಹಾಕಿದ್ದು, ಅವರಿಬ್ಬರ ಗುರುತು ಸಿಗದಿರಲಿ ಎಂಬ ಕಾರಣಕ್ಕೆ ಮುಖಕ್ಕೆ ಬಟ್ಟೆ ಹಾಕಿ ಮುಚ್ಚಲಾಗಿತ್ತು.[ಮೋನಿಕಾ ಹತ್ಯೆಗೆ ಮುನ್ನ ಅಶ್ಲೀಲ ವಿಡಿಯೋ ತೋರಿಸಿದ್ದ ರಾಜ್]
ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವವರು ಅಲ್ಲಿನ ಕಂಠದಾನ ಕಲಾವಿದೆ ಭಾಗ್ಯಲಕ್ಷ್ಮಿ. ಅ ನಂತರ ಅದು ಸಂಚಲನಕ್ಕೆ ಕಾರಣವಾಗಿದೆ. ಭಾಗ್ಯಲಕ್ಷ್ಮಿ ಅವರ ಬಳಿ ಸಂತ್ರಸ್ತೆಯೇ ತಾನು ಎದುರಿಸಿದ ಸನ್ನಿವೇಶ ವಿವರಿಸಿದ್ದಾರೆ. ಕೇರಳದಲ್ಲಿ ಅತ್ಯಾಚಾರಕ್ಕೀಡಾಗಿ ಆ ನಂತರ ಸಾವನ್ನಪ್ಪಿದ ಜೀಶಾ ಹಾಗೂ ಸೌಮ್ಯಾ ಬಗ್ಗೆ ಪ್ರಸ್ತಾಪಿಸಿರುವ ಲಕ್ಷ್ಮಿ, ಒಂದು ವೇಳೆ ಅವರು ಬದುಕಿದ್ದರೆ ಪೊಲೀಸರಿಂದ ಹೇಗೆಲ್ಲ ದೌರ್ಜನ್ಯ ನಡೀತ್ತಿತ್ತೋ ಎಂದು ಬರೆದಿರುವ ಸಾಲು ಮನ ಕಲಕುವಂತಿದೆ.
'ತ್ರಿಸ್ಸೂರ್ ನಲ್ಲಿ ನಮ್ಮ ಮನೆ. ನಾನು ಒಬ್ಬಳೇ ಮನೆಯಲ್ಲಿದ್ದೆ. ಆಗ ನನ್ನ ಗಂಡನ ನಾಲ್ವರು ಸ್ನೇಹಿತರು ಬಂದರು. ನನ್ನ ಗಂಡ ಆಸ್ಪತ್ರೆಯಲ್ಲಿದ್ದಾರೆ ಎಂದರು. ಎಲ್ಲಿಗೋ ಕರೆದುಕೊಂಡು ಹೋದವರು ನನ್ನ ಮೇಲೆ ಅತ್ಯಾಚಾರ ಮಾಡಿದರು' ಎಂದು ಅ ಮಹಿಳೆ ಹೇಳಿದ್ದಾರೆ. ಎರಡು ವರ್ಷದ ನಂತರ ಆ ವಿಚಾರವನ್ನು ಆಕೆ ಹೇಳಿಕೊಂಡ ನಂತರ, ದೂರು ದಾಖಲಿಸುವಂತೆ ಆ ಮಹಿಳೆಯ ಪತಿ ಹೇಳಿದ್ದಾರೆ.[ಕೇರಳ ಆಘಾತ : 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ]
ದೂರು ನೀಡಲು ತೆರಳಿದಾಗ ಗಂಟೆಗಟ್ಟಲೆ ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡು, ಅವಮಾನಿಸಿದರು ಎಂದು ಮಹಿಳೆ ಅರೋಪಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಮತ್ತು ಪೊಲೀಸರು ಗುರುವಾರ ಸಂತ್ರಸ್ತೆಯನ್ನು ಭೇಟಿ ಮಾಡುವ ಸಾಧ್ಯತೆ ಇದೆ.