ಮಾಂಸಾಹಾರಿಗಳೇ ಎಚ್ಚರ: ಇಷ್ಟಪಟ್ಟು ತಿನ್ನುವ ಕೋಳಿ ಮಾಂಸ ಅದೆಷ್ಟು ಸುರಕ್ಷಿತ ಎನ್ನುವುದನ್ನು ಒಮ್ಮೆ ಚಿಂತಿಸಿ
ಇಷ್ಟಪಟ್ಟು ತಿನ್ನುವ ಕೋಳಿ ಮಾಂಸ ಫ್ರೆಶ್ ಆಗಿದೆಯೇ ಎಂಬುದನ್ನು ತಿಳಿಯಬೇಕು. ಇಲ್ಲದಿದ್ದರೇ ಜೀವಕ್ಕೇ ಅಪಾಯ. ಏಕೆಂದರೆ ನಾವು ತಿನ್ನುವ ಪದಾರ್ಥ ಕೊಳೆತ ಕೋಳಿ ಮಾಂಸದಿಂದಲೂ ಮಾಡಿರಬಹುದು. ವಿವರಗಳಿಗೆ ಮುಂದೆ ಓದಿ.
ತಿರುವನಂತಪುರಂ, ಜನವರಿ. 24: ಮಾಂಸಾಹಾರಿಗಳು ಇಷ್ಟ ಪಟ್ಟು ತಿನ್ನುವ ತಿನಿಸುಗಳಲ್ಲಿ ಚಿಕನ್ಗೆ ಮೊದಲ ಸ್ಥಾನ. ಆದರೆ, ನಾವು ತಿನ್ನುವ ಈ ಕೋಳಿ ಮಾಂಸ ನಿಜಕ್ಕೂ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಪದೇ ಪದೇ ಕೇಳಿಕೊಳ್ಳಬೇಕಾಗುತ್ತದೆ. ಎಷ್ಟೇ ಸಮಾಧಾನ ಮಾಡಿಕೊಂಡರು, ಕೆಲವೊಂದು ಘಟನೆಗಳು ಮತ್ತೆ ನಮ್ಮ ನಂಬಿಕೆಯನ್ನು ಹಾಳು ಮಾಡುತ್ತವೆ.
ಇಂತಹ ಘಟನೆ ಕೇರಳದಲ್ಲಿ ನಡೆದಿದೆ. ಹೋಟೆಲ್ಗಳು ಮತ್ತು ಬೇಕರಿಗಳಿಗೆ ಸರಬರಾಜು ಮಾಡಲು ವ್ಯಕ್ತಿಯೊಬ್ಬ 500 ಕೆಜಿ ಕೊಳೆತ ಕೋಳಿ ಮಾಂಸವನ್ನು ಸಂಗ್ರಹಿಸಿಟ್ಟಿದ್ದ ಘಟನೆ ವರದಿಯಾಗಿದೆ.
ಕಲಮಸ್ಸೆರಿ ಪುರಸಭೆಯ ಆರೋಗ್ಯ ವಿಭಾಗವು ಕೈಪಡಮುಗಲ್ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಸರಬರಾಜು ಘಟಕದಿಂದ 500 ಕೆಜಿ ಕೊಳೆತು ಗಬ್ಬು ನಾರುವ ಕೋಳಿ ಮಾಂಸವನ್ನು ವಶಪಡಿಸಿಕೊಂಡಿದೆ. ಈ ಘಟಕವನ್ನು ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂನ ಪೊನ್ನಾನಿ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜುನೈಸ್ ಎಂಬುವವರು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೋಟೆಲ್ ಮತ್ತು ಬೇಕರಿಗಳಿಗೆ ಸರಬರಾಜು ಮಾಡಲು ಆರೋಪಿ ತಮಿಳುನಾಡಿನಿಂದ ಕೊಳೆತ ಮಾಂಸವನ್ನು ತಂದಿದ್ದರು. ಈ ಆರೋಪಿ ಕಳೆದ ಎರಡು ವರ್ಷಗಳಿಂದ ಈ ಕೋಳಿ ಸರಬರಾಜು ಘಟಕ ನಡೆಸುತ್ತಿದ್ದ. ಹೆಚ್ಚಿನ ಮಾಹಿತಿಗಾಗಿ ಇದೀಗ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಲಮಸ್ಸೆರಿ ಪುರಸಭೆಯು ಈ ಹಿಂದೆ ನೀಡಿದ ಹೇಳಿಕೆಗಳ ಪ್ರಕಾರ, ಕೋಳಿ ಮಾಂಸವನ್ನು ಫ್ರೀಜರ್ಗಳಲ್ಲಿ ಇರಿಸಲಾಗುತ್ತಿರುವ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಹಲವಾರು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಜನವರಿ 12 ರಂದು, ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ಸಮಯದಲ್ಲಿ ಎರಡು ಫ್ರೀಜರ್ಗಳಿಂದ ಚಿಕನ್ ಜೊತೆಗೆ ಮಸಾಲೆ ಪದಾರ್ಥಗಳು ಮತ್ತು ಚಿಕನ್ ಶವರ್ಮಾ ಮಾಡುವ ಅಡುಗೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಆರೋಪಿ ಜುನೈಸ್ ತಲೆಮರೆಸಿಕೊಂಡಿದ್ದರು.
ಆರೋಪಿಯು ಎರ್ನಾಕುಲಂನಲ್ಲಿರುವ ರೆಸ್ಟೋರೆಂಟ್ಗಳು ಮತ್ತು ಬೇಕರಿಗಳಿಗೆ ಸರಬರಾಜು ಮಾಡಲು ಕೋಳಿ ಮಾಂಸವನ್ನು ಅಲ್ಲಿ ಸಂಗ್ರಹಿಸಿದ್ದರು ಎಂದು ಪುರಸಭೆಯ ಅಧಿಕಾರಿಗಳು ಹೇಳಿದ್ದಾರೆ. ಜುನೈಸ್ ಪರವಾನಗಿ ಇಲ್ಲದೆ ಕೋಳಿ ಸರಬರಾಜು ಘಟಕ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 269 (ಕಾನೂನುಬಾಹಿರವಾಗಿ ಅಥವಾ ನಿರ್ಲಕ್ಷ್ಯದಿಂದ ಯಾವುದೇ ಕೃತ್ಯವನ್ನು ಮಾಡುವುದು, ಜೀವಕ್ಕೆ ಅಪಾಯಕಾರಿಯಾದ ಯಾವುದೇ ಕಾಯಿಲೆಯ ಸೋಂಕನ್ನು ಹರಡುವ ಸಾಧ್ಯತೆಯಿರುವ ಕೃತ್ಯ ಮಾಡುವುದು) ಮತ್ತು 273 (ಹಾನಿಕಾರಕವಾದ ಆಹಾರ ಅಥವಾ ಪಾನೀಯವಾಗಿ ನೀಡುವುದು) ರ ಅಡಿಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದಲ್ಲದೆ, ಕೊಟ್ಟಾಯಂ ಜಿಲ್ಲೆಯ ದಾದಿಯೊಬ್ಬರು ಹತ್ತಿರದ ರೆಸ್ಟೋರೆಂಟ್ನಿಂದ ಮಾಂಸಾಹಾರಿ ಖಾದ್ಯವನ್ನು ಸೇವಿಸಿ ನಂತರ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳದ ಹೋಟೆಲ್, ರೆಸ್ಟೋರೆಮಟ್, ಬೇಕರಿಗಳ ಮೇಲೆ ರಾಜ್ಯ ಸರ್ಕಾತರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.