ಚುನಾವಣೆ ಸಮೀಪದಲ್ಲಿಯೇ ಪಕ್ಷಕ್ಕೆ ಗುಡ್ಬೈ ಹೇಳಿದ ಚಾಕೋ: ಕಾಂಗ್ರೆಸ್ಗೆ ಮುಜುಗರ
ನವದೆಹಲಿ, ಮಾರ್ಚ್ 10: ಕೇರಳದಲ್ಲಿ ಚುನಾವಣೆ ಸಮೀಪದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಆಘಾತ ಎದುರಾಗಿದೆ. ಕಾಂಗ್ರೆಸ್ನಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ ಮತ್ತು ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ ಎಂದು ಆರೋಪಿಸಿ ಹಿರಿಯ ನಾಯಕ ಪಿ.ಸಿ. ಚಾಕೋ ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ತಿಂಗಳು ಕೇರಳದಲ್ಲಿ ನಡೆಯಲಿರುವ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪಕ್ಷದ ಹಿರಿಯ ನಾಯಕ ಚಾಕೋ ನಿರ್ಗಮನ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯುಂಟುಮಾಡಿದೆ.
ತಾವು ಕಾಂಗ್ರೆಸ್ ತ್ಯಜಿಸಿದ್ದು, ರಾಜೀನಾಮೆ ಪತ್ರವನ್ನು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳಹಿಸಿರುವುದಾಗಿ ಚಾಕೋ ಅವರು ಬುಧವಾರ ಮಧ್ಯಾಹ್ನ ಪ್ರಕಟಿಸಿದರು. 74 ವರ್ಷದ ಚಾಕೋ, ಕಾಂಗ್ರೆಸ್ನ ಹಿರಿಯ ಮುಖಗಳಲ್ಲಿ ಒಬ್ಬರಾಗಿದ್ದು, ಪಕ್ಷದ ವಕ್ತಾರರೂ ಆಗಿದ್ದರು. ಅವರು ಕೇರಳದ ತ್ರಿಶ್ಶೂರ್ನ ಮಾಜಿ ಸಂಸದರಾಗಿದ್ದಾರೆ.
ಕೇರಳದಲ್ಲಿ ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ರಾಜ್ಯದ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಮಿತಿ ಜತೆ ಚರ್ಚಿಸಿಯೇ ಇಲ್ಲ
'ಕಾಂಗ್ರೆಸ್ನಲ್ಲಿ ಯಾವ ಪ್ರಜಾಪ್ರಭುತ್ವವೂ ಉಳಿದಿಲ್ಲ. ಅಭ್ಯರ್ಥಿಗಳ ಪಟ್ಟಿಯ ಕುರಿತು ರಾಜ್ಯ ಕಾಂಗ್ರೆಸ್ ಸಮಿತಿ ಜತೆ ಚರ್ಚಿಸಿಯೇ ಇಲ್ಲ. ಅಭ್ಯರ್ಥಿಗಳ ಗೆಲುವಿನ ಸಾಮರ್ಥ್ಯ, ಚುನಾವಣೆಯ ಕುರಿತು ಚರ್ಚಿಸಲು ಯಾವ ಸಮಿತಿಗಳೂ ಇಲ್ಲ. ಪಕ್ಷಗಳಲ್ಲಿ ಯಾವಾಗಲೂ ಬಣಗಳಿರುತ್ತವೆ, ಕಾಂಗ್ರೆಸ್ನಲ್ಲಿಯೂ ಇದೆ. ಆದರೆ ಅದಕ್ಕೆ ಯಾವ ಕೊನೆಯೂ ಇಲ್ಲ. ನಾನು ನನ್ನ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದೇನೆ' ಎಂದು ಚಾಕೋ ತಿಳಿಸಿದ್ದಾರೆ.

ಮತ ಎಣಿಕೆ ಹೇಗೆ ಮಾಡುತ್ತಾರೆ?
ಕೇರಳ ಕಾಂಗ್ರೆಸ್ ಘಟಕದಲ್ಲಿ ಗುಂಪುಗಾರಿಕೆ ಇರುವುದರ ಬಗ್ಗೆ ಒತ್ತಿ ಹೇಳಿರುವ ಅವರು, ಕಾಂಗ್ರೆಸ್ ಪರ ಹಾಕುವ ಮತಗಳನ್ನು, ಅವು ಕಾಂಗ್ರೆಸ್ (ಐ) ಅಥವಾ ಕಾಂಗ್ರೆಸ್ (ಎ) ಎಂದು ಲೆಕ್ಕಹಾಕಲಾಗುತ್ತದೆಯೇ ಅಥವಾ ಹಾಗೆ ಪ್ರಕಟಿಸಲಾಗುತ್ತದೆಯೇ ಎಂದು ಅಚ್ಚರಿಯಾಗುತ್ತಿದೆ ಎಂದಿದ್ದಾರೆ.

ಬಣದಲ್ಲಿದ್ದರೆ ಮಾತ್ರ ಉಳಿವು
'ಕೇರಳದಲ್ಲಿ ಕಾಂಗ್ರೆಸ್ಸಿಗನಾಗಿ ಇರುವುದು ಬಹಳ ಕಷ್ಟ. ನೀವು ಕಾಂಗ್ರೆಸ್ನಲ್ಲಿ ಕೆಲವು ಬಣಕ್ಕೆ ಸೇರಿಕೊಂಡಿದ್ದರೆ ಮಾತ್ರವೇ ಉಳಿಯಲು ಸಾಧ್ಯ. ಕಾಂಗ್ರೆಸ್ನ ನಾಯಕತ್ವ ಅಷ್ಟೇನೂ ಸಕ್ರಿಯವಾಗಿಲ್ಲ' ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ನ ಪ್ರಮುಖ ನಾಯಕ ರಾಹುಲ್ ಗಾಂಧಿ ಸಂಸದರಾಗಿರುವ ರಾಜ್ಯದಲ್ಲಿ ಕಾಂಗ್ರೆಸ್ಗೆ ಇದು ತೀವ್ರ ಮುಜುಗರ ಉಂಟುಮಾಡಿದೆ.

ಗಾಂಧಿ ಕುಟುಂಬದ ನಿಷ್ಠರು
ಕಾಂಗ್ರೆಸ್ನಲ್ಲಿ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿ ಇದ್ದವರಲ್ಲಿ ಚಾಕೋ ಕೂಡ ಒಬ್ಬರು. ಕಳೆದ ವರ್ಷ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಿದ್ದ 23 ಭಿನ್ನಮತೀಯರನ್ನು 'ಜಿ-23' ಎಂದು ಕರೆಯುವ ಮೂಲಕ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಇರುವವರು ಈ ಪತ್ರ ಬರೆದಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಈಗ ಅವರ ಹೇಳಿಕೆ ಮತ್ತು ರಾಜೀನಾಮೆ ಅಚ್ಚರಿ ಮೂಡಿಸಿದೆ.












Click it and Unblock the Notifications