ಪೊಲೀಸ್ ಠಾಣೆ ಧ್ವಂಸ: 3000 ಮಂದಿ ವಿರುದ್ಧ ಕೇಸ್ ಹಾಕಿದ ಕೇರಳ ಪೊಲೀಸ್!
ನವದೆಹಲಿ, ನವೆಂಬರ್ 28: ಕೇರಳದಲ್ಲಿ ನಿರ್ಮಾಣ ಹಂತದಲ್ಲಿರುವ ಅದಾನಿ ಬಂದರಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಭಾನುವಾರ ರಾತ್ರಿ ವಿಝಿಂಜಮ್ ಪೊಲೀಸ್ ಠಾಣೆಯ ಪೊಲೀಸರ ಮೇಲೆ ನಡೆದ ಹಿಂಸಾತ್ಮಕ ದಾಳಿಗೆ ಸಂಬಂಧಿಸಿದಂತೆ ಸೋಮವಾರ 3,000ಕ್ಕೂ ಹೆಚ್ಚು ಜನರ ವಿರುದ್ಧ ಕಾನೂನುಬಾಹಿರ ಸಭೆ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ, ಠಾಣೆಯನ್ನು ಧ್ವಂಸಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಕ್ಕಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 3,000ಕ್ಕೂ ಹೆಚ್ಚು ಗುರುತಿಸಬಹುದಾದ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಹಿಂಸಾಚಾರದಲ್ಲಿ ಸುಮಾರು 40 ಪೊಲೀಸ್ ಸಿಬ್ಬಂದಿ ಮತ್ತು ಹಲವಾರು ಸ್ಥಳೀಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅದಾನಿ ಯೋಜಿತ ವಿಝಿಂಜಮ್ ಮೆಗಾ ಬಂದರಿಗೆ ವಿರೋಧ ಏಕೆ?
ಕಳೆದ ಶನಿವಾರ ದಾಖಲಾದ ಪ್ರಕರಣದಲ್ಲಿ ಒಬ್ಬ ಆರೋಪಿ ಮತ್ತು ಬಂಧನದಲ್ಲಿರುವ ಇತರ ಶಂಕಿತರಾದ ಲಿಯೋ ಸ್ಟಾನ್ಲಿ, ಮುತ್ತಪ್ಪನ್, ಪುಷ್ಪರಾಜ್ ಮತ್ತು ಶಂಕಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸುಮಾರು 3,000 ಜನರು ವಿಝಿಂಜಮ್ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದರು.
ಪೊಲೀಸರು ದಾಖಲಿಸಿದ ಎಫ್ಐಆರ್ ಏನು ಹೇಳುತ್ತೆ?
"ಕಬ್ಬಿಣದ ರಾಡುಗಳು, ದೊಣ್ಣೆಗಳು, ಕಲ್ಲುಗಳು ಮತ್ತು ಇಟ್ಟಿಗೆಗಳೊಂದಿಗೆ ಸಂಜೆ 6 ಗಂಟೆಗೆ ಪೊಲೀಸ್ ಠಾಣೆಗೆ ತಲುಪಿದ ಗುಂಪು ಪೊಲೀಸ್ ಠಾಣೆಯೊಳಗೆ ಒತ್ತೆಯಾಳು ಪರಿಸ್ಥಿತಿಯನ್ನು ಸೃಷ್ಟಿಸಿತು. ಜೈಲಿನಲ್ಲಿದ್ದ ಆರೋಪಿಗಳನ್ನು ಬಿಡುಗಡೆ ಮಾಡದಿದ್ದರೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದರು. ಐದು ಪೊಲೀಸ್ ವಾಹನಗಳನ್ನು ಹಾನಿಗೊಳಿಸಿದರು. ಪೊಲೀಸ್ ಠಾಣೆಯೊಳಗಿನ ಕಚೇರಿ ಉಪಕರಣಗಳನ್ನು ನಾಶಪಡಿಸಿದೆ ಎಂದು ಎಫ್ಐಆರ್ ತಿಳಿಸಿದೆ. ಈ ದಾಳಿಯಿಂದ ಸುಮಾರು 85 ಲಕ್ಷ ರೂಪಾಯಿ ನಷ್ಟವಾಗಿದೆ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.
ಯಾವ ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ
143ರಡಿ ಕಾನೂನುಬಾಹಿರ ಸಭೆ, 147ರಡಿ ಗಲಭೆ, 120-ಬಿ ಅಡಿ ಕ್ರಿಮಿನಲ್ ಪಿತೂರಿ, 447ರಡಿ ಕ್ರಿಮಿನಲ್ ಅತಿಕ್ರಮಣ ಮತ್ತು 353ರಡಿ ಸಾರ್ವಜನಿಕ ಸೇವಕನ ಮೇಲೆ ಹಲ್ಲೆಗೆ ಸೇರಿದಂತೆ ಐಪಿಸಿಯ ಸೆಕ್ಷನ್ಗಳನ್ನು ಅನ್ವಯಿಸಲಾಗಿದೆ. ಈ ಸಂಬಂಧ ತಿರುವನಂತಪುರಂ ನಗರ ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
"ನಾವು ಈಗಾಗಲೇ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಪೊಲೀಸ್ ಠಾಣೆಯ ಮೇಲಿನ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಜನರು ಐಪಿಸಿಯ ಸೆಕ್ಷನ್ 307 ರ ಅಡಿಯಲ್ಲಿ ಆರೋಪ ಹೊರಿಸಲಾದ ಒಬ್ಬ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಠಾಣೆಯನ್ನು ತಲುಪಿದರು," ಎಂದು ಕಮಿಷನರ್ ಹೇಳಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಸೋಮವಾರ ಸರ್ವಪಕ್ಷ ಸಭೆ ಕರೆದಿದೆ. ಇದರ ಮಧ್ಯೆ ಬಂಧಿತ ನಾಲ್ವರು ಬಂಧನವನ್ನು ದಾಖಲಿಸಿದ ನಂತರ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಸುಮಾರು 36 ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ದಾಖಲು
ಭಾನುವಾರ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ ಗುಂಪಿನ ದಾಳಿಯಲ್ಲಿ ಸುಮಾರು 36 ಪೊಲೀಸ್ ಅಧಿಕಾರಿಗಳನ್ನು ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂಆರ್ ಅಜಿತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಸಂಜೆ ಪೊಲೀಸ್ ಠಾಣೆಯಲ್ಲಿ ಗುಂಪು ಜಮಾಯಿಸಿ ಮತ್ತೊಂದು ಪ್ರಕರಣದಲ್ಲಿ ಬಂಧಿತರಾದ ಕೆಲವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಅವರು ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದರು ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು. ಅವರು ಇಟ್ಟಿಗೆಯಿಂದ ಹೊಡೆದಂತೆ ತೋರುತ್ತಿದ್ದು, ಎಸ್ಐ ಕಾಲಿನ ಮೂಳೆ ಮುರಿತವಾಗಿದೆ," ಎಂದು ಕುಮಾರ್ ತಿಳಿಸಿದರು.
ದೊಣ್ಣೆ, ಇಟ್ಟಿಗೆಗಳನ್ನು ಬಳಸಿ ಪೊಲೀಸರ ಮೇಲೆ ಹಲ್ಲೆ
ಕಳೆದ ನವೆಂಬರ್ 26ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಯಿತು. ಇನ್ನೂ ಕೆಲವರನ್ನು ವಶಕ್ಕೆ ತೆಗೆದುಕೊಂಡ ನಂತರ ಜನಸಮೂಹವು ದೊಣ್ಣೆ ಮತ್ತು ಇಟ್ಟಿಗೆಗಳನ್ನು ಬಳಸಿ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿತು. ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಪರಿಗಣಿಸಿ, ಕೇರಳ ಸರ್ಕಾರವು ಇತರ ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದೆ. ಇದೇ ಸ್ಥಳದಲ್ಲಿದ್ದ ಮಾಧ್ಯಮದವರ ಮೇಲೂ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಸ್ಥಳೀಯ ಚಾನೆಲ್ನ ಕ್ಯಾಮೆರಾಪರ್ಸನ್ ಶೆರಿಫ್ ಎಂ ಜಾನ್ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದರು, ಅವರ ಕ್ಯಾಮೆರಾವನ್ನು ಹಾನಿಗೊಳಿಸಿದರು ಮತ್ತು ಅವರ ಸೆಲ್ಫೋನ್ ಅನ್ನು ಕಸಿದುಕೊಂಡರು. ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಠಾಣೆಗೆ ಜನ ನುಗ್ಗಿದ್ದು ಏಕೆ?
ಶನಿವಾರ ವಿಝಿಂಜಾಂನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮೆಟ್ರೋಪಾಲಿಟನ್ ಆರ್ಚ್ಬಿಷಪ್ ಥಾಮಸ್ ಜೆ ನೆಟ್ಟೊ ಮತ್ತು ಪೆರೇರಾ ಸೇರಿದಂತೆ ಕನಿಷ್ಠ 15 ಲ್ಯಾಟಿನ್ ಕ್ಯಾಥೋಲಿಕ್ ಪಾದ್ರಿಗಳ ವಿರುದ್ಧ ರಾಜ್ಯ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಗುಂಪು ಗುಂಪೊಂದು ಭಾನುವಾರ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತ್ತು.