ಪ್ರಧಾನಿ ವಿರುದ್ಧ ಕೇಜ್ರಿವಾಲ್ ಕಿಡಿ; ದೆಹಲಿ ಗ್ಯಾಸ್ ಚೇಂಬರ್ ಎಂದ ಸಚಿವ!
ನವದೆಹಲಿ, ನ.02: ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಬುಧವಾರ ರಾಷ್ಟ್ರ ರಾಜಧಾನಿಯನ್ನು "ಗ್ಯಾಸ್ ಚೇಂಬರ್" ಎಂದು ಕರೆದು ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಆಘಾತಕಾರಿ ಮಟ್ಟದ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ ಬೆನ್ನಲ್ಲೆ ಕೇಂದ್ರ ಪರಿಸರ ಸಚಿವರು ತೀವ್ರ ಟೀಕೆ ಮಾಡಿದ್ದಾರೆ.
ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (ಎಎಪಿ) ಮೇಲೆ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಭೂಪೇಂದರ್ ಯಾದವ್, ರಾಜಧಾನಿಯನ್ನು ಆಮ್ ಆದ್ಮಿ ಪಕ್ಷ "ಗ್ಯಾಸ್ ಚೇಂಬರ್" ಆಗಿ ಪರಿವರ್ತಿಸಿದೆ ಎಂದಿದ್ದು, ಎಎಪಿ ಸರ್ಕಾರ ಹಗರಣಗಳನ್ನು ನಡೆಸಿದೆ ಎಂದು ಆರೋಪಿಸಿದ್ದಾರೆ.
"ಆಪ್ ಸರ್ಕಾರವಿರುವ ರಾಜ್ಯವಾದ ಪಂಜಾಬ್, 2021 ರಿಂದ 19% ಕ್ಕಿಂತ ಹೆಚ್ಚು ಕೃಷಿ ತ್ಯಾಜ್ಯ ಸುಡುವಿಕೆ (farm fires) ಕಂಡಿದೆ. ಹರಿಯಾಣದಲ್ಲಿ 30.6% ಇಳಿಕೆ ಕಂಡುಬಂದಿದೆ. ಇಂದೇ, ಪಂಜಾಬ್ 3,634 ಕೃಷಿ ತ್ಯಾಜ್ಯ ಸುಡುವಿಕೆಯನ್ನು ಕಂಡಿದೆ. ಹೀಗಾಗಿ ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದವರು ಯಾರು ಎಂಬುದರಲ್ಲಿ ಅನುಮಾನವಿಲ್ಲ" ಎಂದು ಸಚಿವ ಯಾದವ್ ಟ್ವೀಟ್ ಮಾಡಿದ್ದಾರೆ.

ಎಎಪಿ ಎಲ್ಲಿದೆಯೋ ಅಲ್ಲಿ ಹಗರಣ; ಆರೋಪ
"ಎಎಪಿ ಎಲ್ಲಿದೆಯೋ ಅಲ್ಲಿ ಹಗರಣಗಳಿವೆ. ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಪಂಜಾಬ್ಗೆ ಬೆಳೆ ತ್ಯಾಜ್ಯ ನಿರ್ವಹಣೆ ಯಂತ್ರಗಳಿಗಾಗಿ 1,347 ಕೋಟಿ ರೂಪಾಯಿ ನೀಡಿದೆ. ರಾಜ್ಯವು 1,20,000 ಯಂತ್ರಗಳನ್ನು ಖರೀದಿಸಿದೆ. ಅವುಗಳಲ್ಲಿ 11,275 ಯಂತ್ರಗಳು ನಾಪತ್ತೆಯಾಗಿವೆ. ಹಣದ ಬಳಕೆಯು ಸರಿಯಾಗಿ ಬಳಕೆಯಾಗಿಲ್ಲ ಎಂಬುದು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಸಚಿವ ಆರೋಪಿಸಿದ್ದಾರೆ.
ಮುಂದುವರಿದು, "ಕಳೆದ ವರ್ಷ 212 ಕೋಟಿ ರೂಪಾಯಿ ಖರ್ಚಾಗದೆ ಉಳಿದಿತ್ತು. ಈ ವರ್ಷ ಕೇಂದ್ರ ಸರ್ಕಾರ ಪಂಜಾಬ್ಗೆ 280 ಕೋಟಿ ರೂಪಾಯಿ ಬೆಳೆ ತ್ಯಾಜ್ಯ ನಿರ್ವಹಣೆ ಯಂತ್ರಗಳಿಗೆ ನೀಡಿದೆ. ಹೀಗಾಗಿ 492 ಕೋಟಿ ರೂಪಾಯಿ ಲಭ್ಯವಿದ್ದರೂ ರಾಜ್ಯ ಸರ್ಕಾರ ಅಸಹಾಯಕ ರೈತರನ್ನು ಕೃಷಿ ತ್ಯಾಜ್ಯ ಸುಡುವ ಕೆಲಸಕ್ಕೆ ನೂಕುತ್ತಿದೆ" ಎಂದು ಕಿಡಿಕಾರಿದ್ದಾರೆ.
|
ಸ್ವಕ್ಷೇತ್ರದ ರೈತರಿಗೆ ಪರಿಹಾರ ಒದಗಿಸದ ಸಿಎಂ ಭಗವಂತ್ ಮಾನ್
"ಪಂಜಾಬ್ನ ಮುಖ್ಯಮಂತ್ರಿಗಳು ಸಂಗ್ರೂರ್ನ ಸ್ವಂತ ಕ್ಷೇತ್ರದ ರೈತರಿಗೆ ಪರಿಹಾರವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 15 ರಿಂದ ನವೆಂಬರ್ 2ರ ವರೆಗೆ ಸಂಗ್ರೂರ್ನಲ್ಲಿ 1,266 ಕೃಷಿ ಬೆಂಕಿ ಕಾಣಿಸಿಕೊಂಡಿದೆ. ಈ ವರ್ಷ ಅವು 139% ಯಿಂದ 3,025 ಕ್ಕೆ ಏರಿಕೆಯಾಗಿದೆ" ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
|
ಮಾಲಿನ್ಯ ಹೆಚ್ಚಳದ ಬಗಗೆ ಪ್ರಧಾನಿಗೆ ಕೇಜ್ರಿವಾಲ್ ಪ್ರಶ್ನೆ
ಹೆಚ್ಚುತ್ತಿರುವ ಮಾಲಿನ್ಯದ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಯವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ಪರಿಸರ ಸಚಿವರು ಉತ್ತರ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, "ಮಾಲಿನ್ಯವು ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಸೇರಿ ಇಡೀ ಉತ್ತರ ಭಾರತದ ಸಮಸ್ಯೆಯಾಗಿದೆ. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಎಲ್ಲೆಡೆ ಬಹುತೇಕ ಸಮಾನವಾಗಿದೆ. ದೆಹಲಿ-ಪಂಜಾಬ್ ದೇಶಾದ್ಯಂತ ಮಾಲಿನ್ಯವನ್ನು ಹರಡಿದೆಯೇ..? ಈ ಬಗ್ಗೆ ಪ್ರಧಾನಿ ಏಕೆ ಎಲ್ಲಾ ರಾಜ್ಯಗಳ ಸಭೆ ಕರೆಯುತ್ತಿಲ್ಲ...?" ಎಂದು ಪ್ರಶ್ನಿಸಿದ್ದರು.
"ಕೇಂದ್ರ ಸರ್ಕಾರವು ರೈತರಿಗೆ ಸಹಾಯ ಮಾಡುತ್ತಿಲ್ಲ, ರೈತರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸುತ್ತಿದೆ. ಈ ಬಗ್ಗೆ ಕೇವಲ ರಾಜಕೀಯ ನಡೆಯುತ್ತಿದೆ, ಯಾರೂ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಕೃಷಿ ತ್ಯಾಜ್ಯಾ ಸುಡುವಿಕೆಯು ಗಂಭೀರ ಕಳವಳಕಾರಿ; ಆಯೋಗ
ಕೃಷಿ ತ್ಯಾಜ್ಯಾ ಸುಡುವಿಕೆಯಿಂದ ಉಂಟಾಗುವ ಹೊಗೆಯು ಗಾಳಿಯಲ್ಲಿ ಶ್ವಾಸಕೋಶದ ಹಾನಿಕಾರಕ ಮಾಲಿನ್ಯಕಾರಕಗಳ PM 2.5ನ ಶೇಕಡಾ 32 ರಷ್ಟು ಕೊಡುಗೆ ನೀಡುತ್ತವೆ. ಇದು ಅಕ್ಟೋಬರ್ ಮಧ್ಯದಿಂದ ನವೆಂಬರ್ ಆರಂಭದ ಅವಧಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಮಾಹಿತಿ ತಿಳಿಸಿದೆ.
PM 2.5 ಮಾಲಿನ್ಯಕಾರಕವು 2.5 ಮೈಕ್ರಾನ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಸೂಕ್ಷ್ಮ ಕಣಗಳಾಗಿವೆ. ಇವು ಉಸಿರಾಟಕ್ಕೆ ತೊಂದರೆ ಮಾಡುತ್ತವೆ.
ಈ ವರ್ಷ ಪಂಜಾಬ್ನಲ್ಲಿ ಹೆಚ್ಚಿದ ಕೃಷಿ ತ್ಯಾಜ್ಯಾ ಸುಡುವ ಘಟನೆಗಳು "ಗಂಭೀರ ಕಳವಳಕಾರಿ" ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಕಳೆದ ವಾರ ಹೇಳಿತ್ತು. ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳ ಜೊತೆಗೆ, ಪಕ್ಕದ ರಾಜ್ಯಗಳಲ್ಲಿ ಭತ್ತದ ಒಣಹುಲ್ಲಿನ ಸುಡುವಿಕೆಯು ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ದೆಹಲಿಯ ವಾಯು ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.












Click it and Unblock the Notifications