ಬಿಎಸ್ವೈ ಇನ್ನೂ ನಿಮ್ಮ ಸಿಎಂ ಅಭ್ಯರ್ಥಿಯೇ? ಮೋದಿ ಕೆಣಕಿದ ಸಿಎಂ
ಪ್ರಧಾನಿ ನರೇಂದ್ರ ಮೋದಿ ನಾಳೆಯಿಂದ ಅಂದರೆ ಮಂಗಳವಾರದಿಂದ ಅಧಿಕೃತವಾಗಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಚಾಮರಾಜನಗರದ ಸಂತೇಮಾರನಹಳ್ಳಿಯಲ್ಲಿ ಅವರು ಮೊದಲ ಚುನಾವಣಾ ಭಾಷಣ ಮಾಡಲಿದ್ದಾರೆ.
ಎಂದಿನಂತೆ ಈ ಬಾರಿಯೂ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ. "ಪ್ರಿಯ ನರೇಂದ್ರ ಮೋದಿಯವರೇ, ನೀವು ನಮ್ಮ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಕೇಳಿದ್ದೇನೆ. ನಾವು ನಿಮ್ಮನ್ನು ರಾಜ್ಯಕ್ಕೆ ಸ್ವಾಗತಿಸುತ್ತೇವೆ. ನೀವು ಇಲ್ಲಿರುವುದರಿಂದ ಕನ್ನಡಿಗರಾದ ನಾವುಗಳು, ನೀವು ಕೆಲವು ವಿಚಾರಗಳ ಬಗ್ಗೆ ಮಾತನಾಡಬೇಕೆಂದು ಬಯಸುತ್ತೇವೆ. ದಯವಿಟ್ಟು ಉತ್ತರ ಕೊಡಿ ಮೋದಿಯವರೆ," ಎಂದು ಟ್ಟೀಟ್ ಮಾಡಿದ್ದಾರೆ.
ಒಟ್ಟು ಐದು ಪ್ರಶ್ನೆಗಳನ್ನು ಸಿದ್ದರಾಮಯ್ಯ ಮೋದಿಯವರಿಗೆ ಕೇಳಿದ್ದಾರೆ. ಆ ಪ್ರಶ್ನೆಗಳು ಈ ಕೆಳಗಿನಂತಿವೆ.
ಕನ್ನಡಿಗರು ತಮ್ಮ ಕಿವಿಗಳಲ್ಲಿ ಕಮಲ ಇಟ್ಟುಕೊಂಡಿಲ್ಲ
"ಜಿ. ಜನಾರ್ದನ ರೆಡ್ಡಿ ಇಲ್ಲಿ ನಿಮ್ಮ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಾರಾ? ನೀವು 10-15 ಸ್ಥಾನಗಳಲ್ಲಿ ಬಿಜೆಪಿಗೆ ಸಹಾಯವಾಗಲಿದೆ ಎಂದು ಅವರ ಕುಟುಂಬದವರಿಗೆ ಮತ್ತು ಗೆಳೆಯರಿಗೆ 8 ಸ್ಥಾನಗಳನ್ನು ನೀಡಿದ್ದೀರಿ.
ತದನಂತರ, ಭ್ರಷ್ಟಾಚಾರದ ಬಗ್ಗೆ ನೀವು ನಮಗೆ ಉಪನ್ಯಾಸ ಮಾಡುತ್ತೀರಿ.
ದಯವಿಟ್ಟು ಈ ಬೂಟಾಟಿಕೆ ನಿಲ್ಲಿಸಿ. ಕನ್ನಡಿಗರು ತಮ್ಮ ಕಿವಿಗಳಲ್ಲಿ ಕಮಲ ಇಟ್ಟುಕೊಂಡಿಲ್ಲ," ಎಂದು ಸಿದ್ದರಾಮಯ್ಯನವರು ಮೋದಿಯವರ ಮೇಲೆ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಇನ್ನೂ ನಿಮ್ಮ ಅಭ್ಯರ್ಥಿಯೇ?
"ಕಳಂಕಿತ ಬಿಎಸ್ ಯಡಿಯೂರಪ್ಪನವರನ್ನು ನೀವು ಕರ್ನಾಟಕದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೀರಿ. ನಂತರ ಸಮಾವೇಶದ ವೇದಿಕೆಗಳಲ್ಲಿ ನೀವು ಅವರ ಜೊತೆ ವೇದಿಕೆ ಹಂಚಿಕೊಳ್ಳಲು ಬಯಸುತ್ತಿಲ್ಲವೆಂದು ಮಾಧ್ಯಮಗಳು ವರದಿ ಮಾಡಿದೆ!
ಯಡಿಯೂರಪ್ಪ ಇನ್ನೂ ನಿಮ್ಮ ಮುಖ್ಯ ಅಭ್ಯರ್ಥಿಯಾಗಿದ್ದಾರೆಯೇ? ಕರ್ನಾಟಕ ತಿಳಿಯಲು ಬಯಸುತ್ತಿದೆ," ಎಂದು ಮೋದಿಯವರನ್ನು ಸಿಎಂ ಕುಟುಕಿದ್ದಾರೆ.
ಅಶ್ಲೀಲ ವಿಡಿಯೋ ವೀಕ್ಷಿಸಿದವರಿಗೆ, ಅತ್ಯಾಚಾರ ಆರೋಪ ಹೊತ್ತವರಿಗೆ ಟಿಕೆಟ್
"ಕರ್ನಾಟಕದ ಕಲಾಪದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ, ಅತ್ಯಾಚಾರ ಆರೋಪ ಹೊತ್ತವರಿಗೆ ನೀವು ಟಿಕೆಟ್ ನೀಡುತ್ತೀರಿ. ಉತ್ತರ ಪ್ರದೇಶದಲ್ಲಿ16 ವರ್ಷ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಬಿಜೆಪಿ ಶಾಸಕನನ್ನು ಸಿಎಂ ಆದಿತ್ಯನಾಥ್ ರಕ್ಷಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರದ ನಿಮ್ಮ ಶಾಸಕರು ಮಗುವಿನ ಮೇಲೆ ಅತ್ಯಾಚಾರ ಎಸಗಿದವರ ಪರ ವಹಿಸುತ್ತಾರೆ.
ಈಗ ನಿಮ್ಮದೇ ಪಕ್ಷ ಅತ್ಯಾಚಾರ ವಿಚಾರದಲ್ಲಿ ರಾಜಕೀಯ ಮಾಡುವ ಜಾಹೀರಾತುಗಳನ್ನು ಕರ್ನಾಟಕದಲ್ಲಿ ಪ್ರಕಟಿಸುತ್ತಿದೆ?" ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಿಜವಾದ ಅಭಿವೃದ್ಧಿಯನ್ನು ಲಾಲಿಪಾಪ್ ಎಂದು ಕರೆಯುತ್ತೀರಾ?
"ಮೊದಲಿಗೆ ನೀವು ಜನರಿಗೆ 15 ಲಕ್ಷ ರೂ. ನೀಡುವ ಭರವಸೆ ನೀಡಿದ್ರಿ, ನಂತರ ಶಾ ಇದನ್ನು ಚುನಾವಣಾ ಸುಳ್ಳು ಎಂದು ಕರೆಯುತ್ತಾರೆ. ನೀವು ಉದ್ಯೋಗದ ಭರವಸೆ ನೀಡಿದ್ರಿ, ಆದರೆ ನಂತರ ಯುವಕರನ್ನು ಪಕೋಡಗಳನ್ನು ಮಾರಾಟ ಮಾಡಲು ಸಲಹೆ ನೀಡಿದ್ದೀರಿ. ನೀವು ಅಪನಗದೀಕರಣ ಕಪ್ಪು ಹಣವನ್ನು ಅಂತ್ಯಗೊಳಿಸಲಿದೆ ಎಂದ್ರಿ, ಆದರೆ ಇದು ಜನರಿಗೆ ದುಃಖವನ್ನಷ್ಟೇ ತಂದೊಡ್ಡಿತು.
ತದನಂತರ ನೀವು ಇಲ್ಲಿಗೆ ಬಂದು ನಿಜವಾದ ಅಭಿವೃದ್ಧಿಯನ್ನು ಲಾಲಿಪಾಪ್ ಎಂದು ಕರೆಯುತ್ತೀರಾ?," ಎಂದು ವಾಗ್ದಾಳಿ ನಡೆಸಿದ್ದಾರೆ.
|
ನಿಮಗೆ ರೈತರ ಬಗ್ಗೆ ಗಂಭೀರ ಕಾಳಜಿ ಇದೆಯೇ?
"ನಿಮ್ಮ ಮಂತ್ರ = ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಆದರೆ ನಿಮ್ಮ ಸರ್ಕಾರವು ಬಡವರನ್ನು ಕೈಬಿಟ್ಟಿದೆ. ಬ್ಯಾಂಕುಗಳು 2.71 ಲಕ್ಷ ಕೋಟಿ ಕಾರ್ಪೊರೇಟ್ ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡುತ್ತವೆ, ಆದರೆ ರೈತರಿಗೆ ಭಾಷಣಗಳು ಮಾತ್ರ ದೊರೆಯುತ್ತವೆ. ರೈತರಿಗೆ ಮಿನಿಮ್ ಸಪೋರ್ಟ್ ಪ್ರೈಸ್ ಹೆಚ್ಚಾಗಲಿಲ್ಲ, ಆದರೆ ಅವರಿಗೆ 2022 ರ ಹೊತ್ತಿಗೆ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡುತ್ತೀರಿ. ನಿಮಗೆ ರೈತರ ಬಗ್ಗೆ ಗಂಭೀರ ಕಾಳಜಿ ಇದೆಯೇ?" ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ, ಉತ್ತರ ಕೊಡಿ ಮೋದಿಯವರೇ ಎಂದು ಆಗ್ರಹಿಸಿದ್ದಾರೆ.