ಮುಂದಿನ 2 ದಿನ ಈ ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆ
ನವದೆಹಲಿ, ಸೆಪ್ಟೆಂಬರ್ 6: ದೇಶದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಗಾರು ಬಿರುಸು ಪಡೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸೆಪ್ಟೆಂಬರ್ 6 ಹಾಗೂ 7ರಂದು ದಕ್ಷಿಣ ಭಾರತದಲ್ಲಿ ಅಧಿಕ ಮಳೆಯಾಗಲಿರುವುದಾಗಿ ಸೂಚನೆ ನೀಡಿದೆ.
ದಕ್ಷಿಣ ಭಾರತದಲ್ಲಿ ಈ ವಾರವಿಡೀ ಗುಡುಗು ಮಿಶ್ರಿತ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗುವುದಾಗಿ ತಿಳಿಸಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಪಶ್ಚಿಮ, ವಾಯವ್ಯ ದಿಕ್ಕಿಗೆ ಮಾರುತಗಳು ಚಲಿಸಲಿದ್ದು, ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾರತದಲ್ಲಿ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದೆ.
ಈ ಅವಧಿಯಲ್ಲಿ ಅರಬ್ಬೀ ಸಮುದ್ರದಿಂದ ಬೀಸುವ ಆರ್ದ್ರ ಮಾರುತಗಳು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಲಿದೆ ಎಂದು ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿಇದರ ಪ್ರಭಾವದಿಂದ ಮಳೆ ಚಟುವಟಿಕೆ ಹೆಚ್ಚಲಿದೆ. ಮುಂದೆ ಓದಿ...

ದಕ್ಷಿಣ ಭಾರತದಲ್ಲಿ ಮುಂದಿನ 48 ಗಂಟೆ ಅಧಿಕ ಮಳೆ
ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗಲಿದೆ. ಆನಂತರ ಮಳೆ ತೀವ್ರತೆ ಕಡಿಮೆಯಾಗಲಿದೆ. ಈ ಹವಾಮಾನದ ಕಾರಣವಾಗಿ ಮುಂದಿನ ಎರಡು ದಿನಗಳವರೆಗೆ ಕೇರಳ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ತೆಲಂಗಾಣ ಮತ್ತು ಕರಾವಳಿ, ಕರ್ನಾಟಕದ ಉತ್ತರ ಒಳನಾಡಿನಲ್ಲಿ ಸೋಮವಾರ ಹಾಗೂ ಮಂಗಳವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ವೈಪರೀತ್ಯಕ್ಕೆ ಸಜ್ಜಾಗುವಂತೆ ಎಚ್ಚರಿಕೆ ನೀಡಲಾಗಿದೆ. ಬುಧವಾರ ಕರಾವಳಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮಾತ್ರ ಹಳದಿ ಅಲರ್ಟ್ ಘೋಷಿಸಲಾಗಿದೆ.

ಈ ನಗರಗಳಲ್ಲಿ ಮೂರ್ನಾಲ್ಕು ದಿನಗಳವರೆಗೆ ಮಳೆ
ದಕ್ಷಿಣ ಭಾರತದ ಕೆಲವು ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ನಲ್ಲಿ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಸಾಮಾನ್ಯ ಮಳೆಯಾಗಲಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗು ಮಿಶ್ರಿತ ಮಳೆಯಾಗಲಿದೆ ಎಂದು ತಿಳಿಸಿದೆ. ಕೇರಳದಲ್ಲಿ ಅತಿ ಹೆಚ್ಚಿನ ಮಳೆ ಮುನ್ಸೂಚನೆ ನೀಡಲಾಗಿದ್ದು, ಒಂಬತ್ತು ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.

ಕೇರಳದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆ
ನೈಋತ್ಯ ಮುಂಗಾರು ಹಂಗಾಮಿನಲ್ಲಿ ಕೇರಳ ಮಳೆ ಕೊರತೆ ಅನುಭವಿಸಿದ ಏಕೈಕ ದಕ್ಷಿಣ ರಾಜ್ಯವಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 5ರ ನಡುವೆ ಕೇರಳದಲ್ಲಿ 1449.1 ಮಿ.ಮೀ. ಮಳೆಯಾಗಿದ್ದು, ಈ ಅವಧಿಯ ದೀರ್ಘಾವಧಿ ಸರಾಸರಿಗಿಂತ 21% ಕಡಿಮೆ ಮಳೆ ದಾಖಲಾಗಿದೆ. ಆಂಧ್ರ ಪ್ರದೇಶದಲ್ಲಿ (473.1ಮಿ.ಮೀ), ತೆಲಂಗಾಣ (815.3 ಮಿ.ಮೀ) ಹಾಗೂ ತಮಿಳುನಾಡಿನಲ್ಲಿ (307.9 ಮಿ.ಮೀ) ಮಳೆ ಪಡೆದಿವೆ. ಎಲ್ಲಾ ರಾಜ್ಯಗಳಲ್ಲಿ ದೀರ್ಘಾವಧಿ ಸರಾಸರಿ ಅಂಕಿ ಅಂಶಗಳಿಗೆ ಹೋಲಿಸಿದರೆ ಅಧಿಕ ಮಳೆ ದಾಖಲಾಗಿದ್ದು, ಕರ್ನಾಟಕದಲ್ಲಿ 739.2 ಮಿ.ಮೀ ಮಳೆಯಾಗಿದೆ.
Recommended Video

ಈ ರಾಜ್ಯಗಳಲ್ಲಿ ಇನ್ನೂ ಕೆಲವು ದಿನ ಮಳೆ ಮುಂದುವರಿಕೆ
ನೈಋತ್ಯ ಮುಂಗಾರು ಚುರುಕು ಪಡೆದಿದ್ದು, ದಕ್ಷಿಣ, ಪಶ್ಚಿಮ ಹಾಗೂ ಉತ್ತರ ಭಾರತದಲ್ಲಿ ವ್ಯಾಪಕ ಮಳೆಯಾಗುವುದಾಗಿ ತಿಳಿಸಿದೆ. ಒಡಿಶಾ, ವಿದರ್ಭಾ, ಛತ್ತೀಸ್ಗಡದಲ್ಲಿಯೂ ಅಧಿಕ ಮಳೆಯಾಗುವುದಾಗಿ ತಿಳಿಸಿದೆ. ಮಹಾರಾಷ್ಟ್ರ, ಕೊಂಕಣ, ಗುಜರಾತ್ನಲ್ಲಿಯೂ ಸೋಮವಾರದಿಂದ ಬುಧವಾರದವರೆಗೆ ಹೆಚ್ಚಿನ ಮಳೆಯಾಗುವುದಾಗಿ ಮಾಹಿತಿ ನೀಡಿದೆ. ಸೆಪ್ಟೆಂಬರ್ 7ರಿಂದ ದೇಶದ ಹಲವು ಭಾಗಗಳಲ್ಲಿ ಮಳೆ ಚುರುಕು ಪಡೆಯಲಿರುವುದಾಗಿ ಇಲಾಖೆ ತಿಳಿಸಿದೆ.












Click it and Unblock the Notifications