ಐಎಸ್ಐಎಸ್ ಪರ ಪ್ರಚಾರ : ಕಲಬುರಗಿ ಮೂಲದ ವ್ಯಕ್ತಿ ಬಂಧನ
ಜೈಪುರ, ಡಿಸೆಂಬರ್ 11 : ಐಎಸ್ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಕಲಬುರಗಿ ಮೂಲದ ವ್ಯಕ್ತಿಯನ್ನು ರಾಜಸ್ಥಾನದ ಜೈಪುರದಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಭಾರತೀಯ ತೈಲ ನಿಗಮದದಲ್ಲಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಬಂಧಿತರನ್ನು ಕಲಬುರಗಿ ಮೂಲದ ಮೊಹಮದ್ ಸಿರಾಜುದ್ದೀನ್ ಎಂದು ಗುರುತಿಸಲಾಗಿದೆ. ವಿಶೇಷ ಕಾರ್ಯಪಡೆ (ಎಸ್ಒಜಿ) ಮತ್ತು ರಾಜಸ್ಥಾನ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಿರಾಜುದ್ದೀನ್ ಅವರನ್ನು ಬಂಧಿಸಿದ್ದು, ಜೈಪುರದಲ್ಲಿ ಅವರ ವಿಚಾರಣೆ ಮುಂದುವರೆದಿದೆ. [ಬಿಜಾಪುರದ ಅಬ್ದುಲ್ ISIS ಸೇರಿಲ್ಲ]

ಸಿರಾಜುದ್ದೀನ್ ಭಾರತೀಯ ತೈಲ ನಿಗಮದ (ಐಒಸಿ)ಯಲ್ಲಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. 'ಸಿರಾಜುದ್ದೀನ್ ಅವರನ್ನು ಅಕ್ರಮ ಚಟುವಟಿಕೆ (ತಡೆ) ಕಾಯ್ದೆ ಅನ್ವಯ ಬಂಧಿಸಲಾಗಿದೆ' ಎಂದು ಎಟಿಎಸ್ ಹೆಚ್ಚುವರಿ ಡಿಜಿಪಿ ಅಲೋಕ್ ತ್ರಿಪಾಠಿ ಹೇಳಿದ್ದಾರೆ.
'ಸಿರಾಜುದ್ದೀನ್ ಐಎಸ್ಐಎಸ್ ಉಗ್ರ ಸಂಘಟನೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಮತ್ತು ಭಾರತದಿಂದ ಉಗ್ರರನ್ನು ನೇಮಿಸಲು ಸಹಕರಿಸುತ್ತಿದ್ದರು. ಅವರ ಫೇಸ್ಬುಕ್, ವಾಟ್ಸಪ್ ಖಾತೆ ಪರಿಶೀಲಿಸಿದ ಬಳಿಕ ಬಂಧಿಸಲಾಗಿದೆ' ಎಂದು ಅಲೋಕ್ ತ್ರಿಪಾಠಿ ತಿಳಿಸಿದ್ದಾರೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]
ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸಂಪರ್ಕಿಸುತ್ತಿದ್ದ ಸಿರಾಜುದ್ದೀನ್, ಇಸ್ಲಾಮಿಕ್ ಸ್ಟೇಟ್ ಆಫ್-ಇರಾಕ್ ಮತ್ತು ಸಿರಿಯಾ (ಐಎಸ್ಐಎಸ್) ಸೇರುವಂತೆ ಅವರನ್ನು ಪ್ರೇರೆಪಿಸುತ್ತಿದ್ದರು ಎಂಬ ಆರೋಪವಿದೆ. ಬಂಧಿತರ ವಿಚಾರಣೆ ಮುಂದುವರೆದಿದೆ.












Click it and Unblock the Notifications