Rain Alert: ಚಂಡಮಾರುತ ಸೃಷ್ಟಿ, ಪೂರ್ವ ಮುಂಗಾರು ಮಳೆ ಪ್ರವೇಶ, ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಮಾರ್ಚ್ 09: ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದೇಶದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕದಾದ್ಯಂತ ಬಿಸಿಲಿನ ಧಗೆ ಹೆಚ್ಚಾಗಿದ್ದು, ಎಲ್ಲೆಡೆ ಬಿಸಿಲು ರಾರಾಜಿಸುತ್ತಿದೆ. ಈ ಮಧ್ಯೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಹಿಂದೂ ಮಹಾಸಾಗರದಲ್ಲಿ ಉಂಟಾಗಿದ್ದ ವೈಪರಿತ್ಯ ಕೊನೆಗೊಂಡಿದೆ. ಇದೀಗ ತಮಿಳುನಾಡು ಕರಾವಳಿ ಸಮೀಪ ಸಮುದ್ರಮಟ್ಟಕ್ಕಿಂತ 0.9 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತದ ಗಾಳಿ ಬೀಸುತ್ತಿದೆ. ಇದು ಪೂರ್ವ ಮುಂಗಾರು ಮಳೆ (Pre Monsoon Rain 2025) ಆರಂಭದ ಮುನ್ಸೂಚನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪರಿಚಲನೆಯು ತಮಿಳುನಾಡಿನ ಒಳಭಾಗ ಮತ್ತು ನೆರೆಹೊರೆಯಲ್ಲಿದೆ. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿದೆ. ಇದು ಮತ್ತಷ್ಟು ತೀವ್ರಗೊಂಡಲ್ಲಿ, ಅದರ ತೀವ್ರತೆಯಿಂದ ಇದೇ ಮಾರ್ಚ್ 12 ರಿಂದ ಆರಂಭವಾಗಲಿದೆ ಎನ್ನಲಾದ ಪೂರ್ವ ಮುಂಗಾರು ಮಳೆ ಭಾರೀ ಮಳೆಯೊಂದಿಗೆ ಭಾರತ ಪ್ರವೇಶಿಸಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕ ಸೇರಿದಂತೆ ವಿವಿಧೆಡೆ ಉಷ್ಣವಲಯದ ಮಟ್ಟದಲ್ಲಿ ಏರಿಕೆ ಆಗಿತ್ತು. ಅದೀಗ ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ. ಬಿಸಿ ಗಾಳಿ ಮೇಲುಗೈ ಸಾಧಿಸಿದ್ದರ ನಡುವೆ ಹವಾಮಾನ ವೈಪರಿತ್ಯದ ಕಾರಣದಿಂದ ಕರ್ನಾಟಕ ಹಾಗೂ ಇತರ ದಕ್ಷಿಣ ರಾಜ್ಯಗಳಲ್ಲಿ ಪೂರ್ವ ಮುಂಗಾರು ಮಳೆ ಆರಂಭದಲ್ಲೇ ಚುರುಕು ಪಡೆಯುವ ನಿರೀಕ್ಷೆಗಳು ದಟ್ಟವಾಗಿವೆ.
ಮೂರು ತಿಂಗಳು ಪೂರ್ವ ಮಳೆ ಅಬ್ಬರ!
ತೀವ್ರ ಬಿಸಿಲಿನ ತಾಪದಿಂದ ಮಳೆ ಮಾರುತಗಳು ಚುರುಕುಗೊಂಡಿವೆ. ಪೂರ್ವ ಮುಂಗಾರು ಮಳೆ, ಬಿಸಿಲ ಮಧ್ಯೆಯೆ ಆಗಾಗ ಸುರಿಯುತ್ತದೆ. ಗುಡುಗು, ಮಿಂಚಿನೊಂದಿಗೆ, ಆರ್ಭಟಿಸುವ ಮಳೆ ಮಾರ್ಚ್ 12ರಿಂದ ಕರ್ನಾಟಕದಲ್ಲಿ ಸುರಿಯಲಿದೆ. ದಕ್ಷಿಣ ಭಾಗದ ತಮಿಳುನಾಡು, ಆಂಧ್ರ ಪ್ರದೇಶ, ಓಡಿಶಾ, ಕೇರಳದ ಮೇಲೂ ಇದರ ಪ್ರಭಾವ ಕಂಡು ಬರಲಿದೆ. ಕ್ರಮೇಣ ಪೂರ್ವ ಮುಂಗಾರು ಮಳೆ ದೇಶವ್ಯಾಪಿ ವಿಸ್ತರಣೆಗೊಳ್ಳಲಿದೆ.
ಹವಾಮಾನ ಇಲಾಖೆ ಹೇಳುವಂತೆ, ಮಾರ್ಚ್ ಮಧ್ಯಭಾಗಕ್ಕೆ ಆರಂಭವಾಗುವ ಪೂರ್ವ ಮುಂಗಾರು ಮಳೆ, ಏಪ್ರಿಲ್ ಮತ್ತು ಮೇ ಅಂತ್ಯದವರೆಗೆ ಕಂಡು ಬರುತ್ತದೆ. ಜೂನ್ ಆರಂಭಕ್ಕೆ ಈ ಮಾರುತಗಳ ಸಕ್ರಿಯತೆ ಕೊನೆಯಾಗಿ ಮುಂಗಾರು ಮಾರುತುಗಳು ಕೇರಳ ಮಾರ್ಗವಾಗಿ ಕರ್ನಾಟಕ ಪ್ರವೇಶಿಸುತ್ತವೆ. ಉತ್ತರ ಭಾರತದತ್ತ ಸಾಗುತ್ತದೆ. ಜೂನ್ ನಿಂದ ಸೆಪ್ಟಂಬರ್ ವರೆಗೆ 2025ರ ಮುಂಗಾರು ಮಳೆ ಸುರಿಯಲಿದೆ.

ಕರ್ನಾಟಕಕ್ಕೆ ಗುಡ್ ನ್ಯೂಸ್; ತಾಪಮಾನ ಇಳಿಕೆ ನಿರೀಕ್ಷೆ
ಪೂರ್ವ ಮುಂಗಾರು ಮಳೆ ಕಾರಣಕ್ಕೆ ಮುಂದಿನ ಒಂದು ವಾರದಲ್ಲಿ ತಾಪಮಾನ ಕೊಂಚ ಇಳಿಕೆ ಆಗುವ ನಿರೀಕ್ಷೆಗಳು ಇವೆ. ಈಗಾಗಲೇ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಬಿಸಿಲ ತಾಪ ಇಳಿಕೆಯತ್ತ ಸಾಗುತ್ತಿದೆ. ಈ ಭಾಗದಲ್ಲಿ ಮಾರ್ಚ್ 12ರಂದು ಪೂರ್ವ ಮುಂಗಾರು ಮಳೆ ಪ್ರವೇಶಿಸಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಬಳ್ಳಾರಿ, ಮಂಡ್ಯ, ಹಾಸನ, ಕೋಲಾರ, ತುಮಕೂರು, ಕೊಡಗು, ಚಾಮರಾಜನಗರ ಜಿಲ್ಲೆಗಳು ಹಾಗೂ ಕರಾವಳಿ ಎಲ್ಲ ಜಿಲ್ಲೆಗಳಿಗೆ ಮಾರ್ಚ್ 14ರವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಬಿಸಿಲ ಧಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ, ಹೀಟ್ ವೇವ್ ಜನರನ್ನು ಹೈರಾಣಾಗಿಸಲಿದೆ. ಮುಂದಿನ ದಿನಗಳಲ್ಲಿ ಆಗಾಗ ಪೂರ್ವ ಮುಂಗಾರು ಮಳೆ ತಂಪೆರೆಯಲಿದೆ.












Click it and Unblock the Notifications