ಹಿಜಾಬ್ V/s ಕೇಸರಿ ಶಾಲು: ರಾಷ್ಟ್ರ ಮಟ್ಟದಲ್ಲೂ ಪರ-ವಿರೋಧ ಚರ್ಚೆ
ನವದೆಹಲಿ, ಫೆಬ್ರವರಿ 5: ಕರ್ನಾಟಕದ ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್ V/s ಕೇಸರಿ ಶಾಲು ವಿವಾದ ರಾಜಕೀಯ ರಂಗದಲ್ಲಿ ಸಖತ್ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಸುದ್ದಿಯಾದ ಇದೇ ವಿವಾದ ಶನಿವಾರ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದೆ.
ರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದದ ಕುರಿತು ಪರ-ವಿರೋಧ ಚರ್ಚೆಗಳು ತೀವ್ರಗೊಂಡಿದೆ. ಕೇಂದ್ರದ ಕೆಲವು ನಾಯಕರು ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವು ಕೇಂದ್ರ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಮೊದಲು ಶುರುವಾಗಿದ್ದ ಈ ಹಿಜಾಬ್ ವಿವಾದ ಇಂದು ದೇಶದಲ್ಲಿ ಮತೀಯವಾದಕ್ಕೆ ತಿರುಗಲು ಕಾರಣವಾದ ಅಂಶವೇನು?. ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡಿಂಗ್ ಆಗಿರುವ ಇದೇ ವಿವಾದದ ಕುರಿತು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಯಾವ ಅಭಿಪ್ರಾಯ ಮಂಡಿಸುತ್ತಿದ್ದಾರೆ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ
ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ, ಅವರು ಬೇಧ-ಭಾವ ಮಾಡುವುದಿಲ್ಲ. ಆದರೆ ವಿದ್ಯಾರ್ಥಿಗಳ ಶಿಕ್ಷಣದ ಹಾದಿಯಲ್ಲಿ ಹಿಜಾಬ್ ಅನ್ನು ಅಡ್ಡ ಹಾಕುವುದರ ಮೂಲಕ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಹಿಜಾಬ್ ಕುರಿತು ಬೆಂಬಲ ವ್ಯಕ್ತಪಡಿಸಿದ್ದಾರೆ.
|
ಹಿಜಾಬ್ ಧರಿಸುವ ಹಕ್ಕಿನ ಪರ ಶಶಿ ತರೂರ್ ಬೆಂಬಲ
"ರಾಷ್ಟ್ರೀಯ ಮತ್ತು ಕರ್ನಾಟಕದಲ್ಲಿ, #ಹಿಜಾಬ್ ಸಮಸ್ಯೆಯ ಕುರಿತು ಸಿಎಂ ಮತ್ತು ಕಾಲೇಜು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಆಡಳಿತ ಪಕ್ಷದ ಪೂರ್ವಾಗ್ರಹಗಳ ಬಲಿಪೀಠಕ್ಕೆ ಈ ಹೆಣ್ಣುಮಕ್ಕಳ ಶಿಕ್ಷಣ ಬಲಿಯಾಗದಿರುವುದು ಅತ್ಯಗತ್ಯ. ನಾವು ವಿದ್ಯಾರ್ಥಿನಿಯರು ಮತ್ತು ಅವರ ಕಲಿಯುವ ಹಕ್ಕಿನೊಂದಿಗೆ ನಿಲ್ಲುತ್ತೇವೆ," ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಕಾಲೇಜು ಪ್ರಾಂಶುಪಾಲರಿಗೆ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಹಿಜಾಬ್ ವಿವಾದಕ್ಕೆ ಬ್ರೇಕ್ ಹಾಕುವಂತೆ ಸಿದ್ದರಾಮಯ್ಯ ಒತ್ತಾಯ
"ಸಂವಿಧಾನವು ಯಾವುದೇ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ ಅಂದರೆ ಅವರ ಧರ್ಮದ ಪ್ರಕಾರ ಯಾವುದೇ ಬಟ್ಟೆಯನ್ನು ಧರಿಸಬಹುದು. 'ಹಿಜಾಬ್' ಧರಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಪ್ರವೇಶಿಸುವುದನ್ನು ನಿಷೇಧಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸುವುದು ಸಂಘ ಪರಿವಾರದ ಮುಖ್ಯ ಅಜೆಂಡಾ. ನರೇಂದ್ರ ಮೋದಿ ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಈ ಘಟನೆಯ ಅರಿವಿಲ್ಲವೇ?. ಕರ್ನಾಟಕದ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಾ ಸಂಘವು ಹಿಜಾಬ್ ಹೆಸರಿನಲ್ಲಿ ರಾಜ್ಯದಾದ್ಯಂತ ಕೋಮು ಸೌಹಾರ್ದತೆ ಸೃಷ್ಟಿಸಲು ಯತ್ನಿಸುತ್ತಿದೆ. ಇದಕ್ಕೆ ತಕ್ಷಣ ಬ್ರೇಕ್ ಹಾಕಬೇಕು ಮತ್ತು ಜನರನ್ನು ಪ್ರಚೋದಿಸುವವರನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಶಾಲೆಗಳಲ್ಲಿ ಸಮವಸ್ತ್ರದ ನಿಮಯ ಪಾಲಿಸಿ
ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ನೀವು ಹಿಜಾಬ್ ಗಾಗಿ ಬರ್ತಿನಿ ಅಂದರೆ ! ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ ಅಥವಾ ಪರದೆ ಅಕಾರದ ಟೋಪಿ ಬೇಕಾದರೂ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬ ಪೈಜಾಬ ಹಾಕಿಕೊಂಡಾದರು ಹೋಗಿ. ನೀವು ಹೋಗಬೇಕಾದ ಸ್ಥಳ ಶಾಲಾ ಕಾಲೇಜಲ್ಲ , ಮದರಸಾ!, ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.












Click it and Unblock the Notifications