ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್: ಮಹಾ ಸಿಎಂ ಏಕನಾಥ್ ಶಿಂಧೆ ಸ್ಫೋಟಕ ಹೇಳಿಕೆ
ಮುಂಬೈ, ಮೇ13: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಯಲಿದೆ. ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎನ್ನುವ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿತ್ತು. ಇದೀಗ ಸರ್ಕಾರ ಪತನಕ್ಕೆ ಮತ್ತೊಂದು ಸುಳಿವು ದೊರೆತಿದೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿರುವುದು ಲೋಕಸಭಾ ಚುನಾವಣಾ ಹೊತ್ತಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಹೌದು, ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸುಳಿವು ನೀಡಿದ್ದಾರೆ. ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್ ಮಾಡಲು ಆಹ್ವಾನವಿದೆ ಎಂದಿರುವ ಅವರು, 'ನಾಥ್' ಮಾದರಿಯಲ್ಲಿ ಆಪರೇಷನ್ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯಲ್ಲಿ ಆಪರೇಷನ್ಗೆ ಕರ್ನಾಟಕದಿಂದಲೂ ಆಹ್ವಾನವಿದೆ ಎಂದು ಸ್ಪೋಟಕ ಹೇಳಿಕೆಯನ್ನ ಏಕನಾಥ್ ಶಿಂಧೆ ಅವರು ನೀಡಿದ್ದಾರೆ.

'ಮಹಾರಾಷ್ಟ್ರ ಮಾದರಿ'ಯಲ್ಲಿ ಕರ್ನಾಟಕದಲ್ಲೂ ಆಪರೇಷನ್ ನಡೆಯುವ ಸುಳಿವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಶುರುವಾಗಿದ್ಯಾ ಎಂಬ ಅನುಮಾನ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ.
ನಾನು ಇತ್ತಿಚೇಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ 'ನಾಥ' ಆಪರೇಷನ್ ಮಾಡೋದಿದೆ ಎಂದು ಅಲ್ಲಿಯ ನಾಯಕರು ಹೇಳಿದ್ದಾರೆ. 'ನಾಥ ಆಪರೇಷನ್' ಅಂದ್ರೆ ಏನು? ಅಂತ ನಾನು ಅವರನ್ನು ಕೇಳಿದೆ. ಆಗ ಅವರು ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರವನ್ನು ಪತನ ಮಾಡಿದ್ದೀರಾ, ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದು ಹೇಳಿದ್ದಾರೆ. ಅದಕ್ಕೆ ಲೋಕಸಭಾ ಚುನಾವಣೆ ಮುಗಿದ ಮೇಲೆ ನಾನು ಕರ್ನಾಟಕಕ್ಕೆ ಮತ್ತೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಸಿದ್ದರಾಮಯ್ಯ
ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರು ಎನ್.ಡಿ. ಎ ಈ ಬಾರಿ ಸೋಲಲಿದೆ. ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈಗಾಗಲೇ ಕಳೆದ ಒಂದು ವರ್ಷದಿಂದ ಇಂಥ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ. ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಆಗಲೂ ಸಾಧ್ಯವಿಲ್ಲ ಎಂದರು. ರಾಜಕೀಯ ಧೃವೀ ಕಾರಣವಾಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಗೆಲ್ಲಲಿದ್ದು ನಮ್ಮವರೇ ಪ್ರಧಾನಮಂತ್ರಿಯಾಗಲಿದ್ದಾರೆ ಎಂದರು.












Click it and Unblock the Notifications