ಕಾರ್ಗಿಲ್ ವಿಶೇಷ: ನರಕದಂತಿದ್ದ ದ್ರಾಸ್ ಈಗ ಹೇಗಿದೆ?
ದ್ರಾಸ್ (ಜಮ್ಮು ಮತ್ತು ಕಾಶ್ಮೀರ), ಜು. 23 : ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಲೇಖನಗಳನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರ ಕಥೆಗಳನ್ನು ಕಾರ್ಗಿಲ್ನಿಂದಲೇ ಒನ್ಇಂಡಿಯಾ ನಿಮಗೆ ನೀಡಲಿದೆ.
ಕಾರ್ಗಿಲ್ ಯುದ್ಧ ನಡೆದ ನೆಲ ಈಗಿನವರೆಗೆ ಕೇವಲ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಗ್ರೌಂಡ್ ಜೀರೋ ನೆಲವನ್ನು ಮೆಟ್ಟಿದ ಮೊದಲ ಆನ್ ಲೈನ್ ಪೋರ್ಟಲ್ ಒನ್ಇಂಡಿಯಾ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಒನ್ಇಂಡಿಯಾದ ಪ್ರತಿನಿಧಿ ರೀಚಾ ಬಾಜಪೈ ಬರೆಯುತ್ತಿದ್ದು ಈ ಸರಣಿಯ ಲೇಖನ ಇಲ್ಲಿದೆ.

ಕುರಿಕಾಯುವ ವ್ಯಕ್ತಿ 1999ರ ಮೇ 3ರಂದು ಪಾಕಿಸ್ತಾನ ಸೇನೆಯ ಚಲನವಲನದ ಮಾಹಿತಿ ನೀಡಿದ ಬಳಿಕ ಭಾರತೀಯ ಸೇನೆ ಆ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲು ಆರಂಭಿಸಿತ್ತು. ಪ್ಯಾಟ್ರೋಲಿಂಗ್ ಮಾಡುತ್ತಿದ್ದ ಭಾರತೀಯ ಸೇನೆಗೆ ಪಾಕಿಸ್ತಾನದ ಕಿತಾಪತಿ ಗೊತ್ತಾಯಿತು. ಈ ಹೊತ್ತಿಗೆ ಪಾಕ್ ಸೇನೆ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ದಾಟಿ ಭಾರತಕ್ಕೆ ನುಸುಳಿರುವುದು ಖಚಿತವಾಯಿತು. ಬಳಿಕ ನಡೆದದ್ದು ಇತಿಹಾಸ.[ಪಾಕ್ ಕುತಂತ್ರದ ಬಗ್ಗೆ ಮೊದಲು ಮಾಹಿತಿ ನೀಡಿದ ವ್ಯಕ್ತಿ]
ಈ ಸಂದರ್ಭದಲ್ಲಿ ಭಾರತದ ಐದು ಸೈನಿಕರನ್ನು ಪಾಕ್ ಸೇನೆ ಹತ್ಯೆಗೈದ ವಿಚಾರ ಒಂದು ವಾರದ ಬಳಿಕ ಬೆಳಕಿಗೆ ಬಂತು. ಈ ವೇಳೆಗೆ ಪಾಕ್ ಸೇನೆ ದ್ರಾಸ್, ಮುಷ್ಕೋ,ಕಾಕ್ಸರ್ ಪ್ರದೇಶಗಳಿಗೆ ನುಗ್ಗಿಯಾಗಿತ್ತು.
ಈಗ ದ್ರಾಸ್ ಹೇಗಿದೆ?
ಕಾರ್ಗಿಲ್ ಯುದ್ದದ ಬಳಿಕ ದ್ರಾಸ್ ಈಗ ಬಹಳಷ್ಟು ಅಭಿವೃದ್ಧಿಯಾಗಿದೆ. ಉರಿ ಲೆಹ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 1 ದ್ರಾಸ್ ಮೂಲಕವೇ ಹಾದು ಹೋಗಿರುವುದರಿಂದ ಇದೀಗ ಪ್ರವಾಸಿ ತಾಣವಾಗಿಯೂ ಬದಲಾಗಿದೆ. 15 ವರ್ಷದ ಹಿಂದೆ ಇಲ್ಲಿ ಯಾವುದೇ ದೂರವಾಣಿ ಸಂಪರ್ಕ ಇರಲಿಲ್ಲ. ಈಗ ಮೊಬೈಲ್ ಸಂಪರ್ಕದ ಜೊತೆಗೆ ಡಿಟಿಎಚ್, ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಹೊಂದಿದೆ.
ಪ್ರವಾಸಿಗಳನ್ನು ಸೆಳೆಯುವುದಕ್ಕಾಗಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ದ್ರಾಸ್ನಲ್ಲಿ ಹಾಕಿಕೊಂಡಿದೆ. ನಾಲ್ಕು ಶಾಲೆಗಳಿದ್ದ ಇಲ್ಲಿ ಈಗ ಕಾಲೇಜುಗಳು ಸಹ ಸ್ಥಾಪನೆಯಾಗಿದೆ. ಜೊತೆಗೆ ಗ್ರಾಮಸ್ಥರಿಗಾಗಿ ಆಸ್ಪತ್ರೆಗಳನ್ನು ತೆರೆಯಲಾಗಿದೆ.['ದಿಕ್ಕೆಟ್ಟು ಓಡುತ್ತಿದ್ದ ನನ್ನನ್ನು ಜವಾನ ತಡೆಗಟ್ಟಿದ್ದ']
ಈ ಎಲ್ಲಾ ಬೆಳವಣಿಗೆಯಿಂದ ದ್ರಾಸ್ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ. "1999ರ ಯುದ್ದವಾದ ಬಳಿಕ ನಾವು ಒಬ್ಬಂಟಿಯಾಗಿದ್ದೇವೆ ಎಂದು ಭಾವಿಸಿದ್ದೆ. ಆದರೆ ಕೆಲ ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯದಿಂದಾಗಿ ನಾವು ಸಂತೋಷವಾಗಿದ್ದೇವೆ" ಎಂದು ಸೈಬರ್ ಅಂಗಡಿಯ ಮಾಲೀಕ ಝಾಕಿರ್ ಹೇಳುತ್ತಾರೆ.
ಕಿರಾಣಿ ಅಂಗಡಿ ಮಾಲೀಕ ಶಫೀಕ್ ಅಹ್ಮದ್ "ದ್ರಾಸ್ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿ ಒತ್ತು ನೀಡಿದ್ದರಿಂದ ಇಲ್ಲಿ ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಿದೆ. ಲಡಾಖ್ಗೆ ಈ ದಾರಿಯ ಮೂಲಕವೇ ಹೋಗಬೇಕಾಗಿದ್ದರಿಂದ ಪ್ರತಿದಿನ ಇಲ್ಲಿ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ" ಎಂದು ಇಲ್ಲಿಯ ಬದಲಾವಣೆ ಬಗ್ಗೆ ವಿವರಿಸುತ್ತಾರೆ.
ಇಲ್ಲಿನ ಸ್ಥಳೀಯ ಭಾಷೆಯಲ್ಲಿ 'ಬಾಲ್ಟಿಕ್ ದ್ರಾಸ್' ಅಂದರೆ ನರಕವಂತೆ. ಈ ಬಗ್ಗೆ ಶಫೀಕ್ "15 ವರ್ಷದ ಹಿಂದೆ ನೀವು ಇಲ್ಲಿಗೆ ಬಂದಿದ್ದರೆ ದ್ರಾಸ್ ನರಕದಂತೆ ಕಾಣುತ್ತಿತ್ತು. ಆದರೆ ಜಮ್ಮು ಕಾಶ್ಮೀರ ಸರ್ಕಾರ ಇಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಬಳಿಕ ದ್ರಾಸ್ ಪರಿಸ್ಥಿತಿಯೇ ಬದಲಾಗಿದೆ. ಆದರೂ ಸರ್ಕಾರ ಮತ್ತಷ್ಟು ಅಭಿವೃದ್ಧಿ ಮಾಡಿ ವಿಶ್ವದ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಾಡಿಸಬೇಕು" ಎಂದು ಅವರು ದ್ರಾಸ್ ಅಭಿವೃದ್ಧಿಯಾದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ.












Click it and Unblock the Notifications