ಸಮವಸ್ತ್ರ ಧರಿಸಿಲ್ಲವೆಂದು ಕತ್ತರಿಯಿಂದ ಚರ್ಮ ಕತ್ತರಿಸಿದ ವ್ಯವಸ್ಥಾಪಕ!
ಕಾನ್ಪುರ, ನವೆಂಬರ್ 18: ಸಮವಸ್ತ್ರ ಧರಿಸಿಲ್ಲ ಎಂಬ ಕಾರಣಕ್ಕೆ ಶಾಲೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರೊಬ್ಬರು ವಿದ್ಯಾರ್ಥಿಯೊಬ್ಬರ ತೊಡೆ ಭಾಗದ ಚರ್ಮವನ್ನು ಕತ್ತರಿಯಿಂದ ಕತ್ತರಿಸಿದ ವಿಕೃತ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ವಿದ್ಯಾರ್ಥಿಯೊಬ್ಬ ಯೂನಿಫಾರ್ಮ್ ಬದಲು ಜೀನ್ಸ್ ಧರಿಸಿ ಶಾಲೆಗೆ ಬಂದಿದ್ದ. ಯೂನಿಫಾರ್ಮ್ ಧರಿಸದ ಆತನಿಗೆ ಶಿಕ್ಷೆ ನೀಡಲೆಂದು ಕರೆದ ವ್ಯವಸ್ಥಾಪಕ ಮೊದಲು ಆತನ ಜೀನ್ಸ್ ಅನ್ನು ಕತ್ತರಿಸಿ, ನಂತರ ಆತನ ತೊಡೆ ಭಾಗದ ಚರ್ಮವನ್ನೂ ಕತ್ತರಿಸಿ ವಿಕೃತಿ ಮೆರೆದಿದ್ದಾನೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿಯ ತಂದೆ ವಿನೋದ್ ಪಾಲ್ ಎನ್ನುವವರು, 'ನನ್ನ ಮಗ ಯೂನಿಫಾರ್ಮ್ ಧರಿಸಿಲ್ಲ ಎಂಬುದು ತಪ್ಪು. ಆದರೆ ಆತನನ್ನು ಮನೆಗೆ ಕಳಿಸಬಹುದಿತ್ತು, ಅಥವಾ ಮತ್ತೆ ಈ ರೀತಿ ಆಡಬೇಡ ಎಂದು ಬುದ್ಧಿವಾದ ಹೇಳಬಹುದಿತ್ತು. ಆದರೆ ಅದನ್ನೆಲ್ಲ ಬಿಟ್ಟು ಆತನ ಚರ್ಮ ಕತ್ತರಿಸಿರುವುದು ಎಷ್ಟು ಸರಿ? ಆ ವ್ಯವಸ್ಥಾಪಕರ ವಿರುದ್ಧ ಕ್ರಮಕೈಗೊಳ್ಳಲೇಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ವ್ಯವಸ್ಥಾಪಕನ ವಿರುದ್ಧ ಭಾರತೀಯ ದಂಡಸಂಹಿತೆ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications