ಕಂದಹಾರ್ ಶೈಲಿ ಹೈಜಾಕ್ ಬೆದರಿಕೆ, ವಿ.ನಿಲ್ದಾಣಗಳಲ್ಲಿ ಕಟ್ಟೆಚ್ಚರ
ನವದೆಹಲಿ, ಜ.4: ಕಂದಹಾರ್ ಶೈಲಿ ವಿಮಾನ ಹೈಜಾಕ್ ನಡೆಸಲು ಉಗ್ರರು ಸಂಚು ರೂಪಿಸುವ ಸುದ್ದಿ ಹೊರಬಿದ್ದಿದೆ. ದೆಹಲಿಯಿಂದ ಕಾಬೂಲಿಗೆ ತೆರಳುವ ವಿಮಾನವನ್ನು ಅಪಹರಿಸುವ ಸಾಧ್ಯತೆ ಕಂಡು ಬಂದಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ದೆಹಲಿ-ಕಾಬೂಲ್ ನಡುವೆ ಸಂಚರಿಸುವ ಏರ್ ಇಂಡಿಯಾ ಪ್ರಯಾಣಿಕರ ವಿಮಾನವನ್ನು ಹೈಜಾಕ್ ಮಾಡಲು ಸಂಚು ರೂಪಿಸಿದ್ದಾರೆ. ಏರ್ ಇಂಡಿಯಾ ವಿಮಾನವು ಉಗ್ರರ ಹಿಟ್ಲಿಸ್ಟ್ ನಲ್ಲಿದೆ ಎಂದು ಗೃಹ ಇಲಾಖೆಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. [ಕಂದಹಾರ್ ಪ್ರಕರಣ ಅಡ್ವಾಣಿಗೆ ಮೊದಲೇ ಗೊತ್ತಿತ್ತು]
ಗುಪ್ತಚರ ಇಲಾಖೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ದೇಶದ ಇತರೆ ವಿಮಾನ ನಿಲ್ದಾಣಗಳಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. [ಭಾರತದೊಳು ನುಗ್ಗುವ ಉಗ್ರರ ಯತ್ನ ವಿಫಲ, ಬೋಟ್ ಸ್ಫೋಟ ]
ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ: ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರಹೋಗುವ ಪ್ರಯಾಣಿಕರು, ವಾಹನಗಳು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಸಿಐಎಸ್ಎಫ್, ಸಿಆರ್ಪಿಎಫ್ ಸೇರಿದಂತೆ ವಿವಿಧ ಶ್ರೇಣಿಯ ಭದ್ರತಾಧಿಕಾರಿಗಳನ್ನು ಒದಗಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಗಣರಾಜ್ಯೋತ್ಸವ ವೇಳೆ ದೇಶದಲ್ಲಿ ಭಾರೀ ದುಷ್ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿರುವುದನ್ನು ಪತ್ತೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳಲ್ಲಿ ಬಿಗಿಭದ್ರತೆ ಹೆಚ್ಚಿಸಲಾಗಿದೆ. [ಸುರಕ್ಷಿತ ಸ್ಥಳಕ್ಕಾಗಿ ಹುಡುಕುತ್ತಿದ್ದರೇ ಪಾಕ್ ದುರುಳರು?]
ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ ಉಗ್ರರು ನಿಲ್ದಾಣ ಪ್ರವೇಶಿಸುವ ಸಾಧ್ಯತೆಯಿದೆ. ಭಾರತದಲ್ಲಿರುವ ಕೆಲವು ಉಗ್ರರನ್ನು ಬಿಡುಗಡೆ ಮಾಡಿಕೊಳ್ಳುವ ಉದ್ದೇಶದಿಂದಲೇ ವಿಮಾನ ಅಪಹರಿಸುವ ಸಂಚು ರೂಪಿಸಿದ್ದಾರೆಂಬುದು ಗುಪ್ತಚರ ಇಲಾಖೆಯ ಮಾಹಿತಿ ನೀಡಿದೆ.
ಕರಾವಳಿಯಲ್ಲೂ ಕಟ್ಟೆಚ್ಚರ: ಪೋರಬಂದರಿನ ಬಳಿ ಪಾಕಿಸ್ತಾನಕ್ಕೆ ಸೇರಿದೆ ಎನ್ನಲಾದ ಬೋಟ್ ಅಗ್ನಿಗೆ ಆಹುತಿಯಾದ ಘಟನೆ ನಂತರ ಕರ್ನಾಟಕ ಸೇರಿದಂತೆ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಧ್ವಂಸಗೊಂಡ ಬೋಟ್ ನ ಅವಶೇಷಗಳ ಹುಡುಕಾಟ ಮುಂದುವರೆದಿದೆ. ಶೀಘ್ರದಲ್ಲೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಕರಾವಳಿ ಕಾವಲು ಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications