ಮಹದಾಯಿ ವಿವಾದ: ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಸ್ಥಗಿತಕ್ಕೆ ಗೋವಾದಿಂದ ರಾಜ್ಯಕ್ಕೆ ನೋಟಿಸ್
ಪಣಜಿ, ಜ 10: ಕರ್ನಾಟಕ - ಗೋವಾ ನಡುವಿನ ಮಹದಾಯಿ ನದಿ ನೀರು ವಿವಾದ ಮತ್ತೆ ಮತ್ತೆ ಭುಗಿಲೇಳುತ್ತಲೇ ಇದೆ. ಮಹದಾಯಿ ನದಿಯ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗೋವಾ ತಕರಾರು ತೆಗೆದಿದೆ.
ಗೋವಾ ಅಭಯಾರಣ್ಯದ ಮುಖ್ಯ ವನ್ಯಜೀವಿ ಅಧಿಕಾರಿ ಕರ್ನಾಟಕ ಸರ್ಕಾರಕ್ಕೆ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಟಾಪ್ ವರ್ಕ್ ನೋಟಿಸ್ ನೀಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕಳಸಾ ಬಂಡೂರಿ ಯೋಜನೆ: ಕರ್ನಾಟಕ ಮತ್ತು ಗೋವಾ ನಡುವಿನ ಈ ಮಹದಾಯಿ ವಿವಾದವೇನು?
ಗೋವಾದ ಮಹದೇಯಿ ಬಚಾವೋ ಅಭಿಯಾನದ ಹಿನ್ನೆಲೆ ಸಿಎಂ ಪ್ರಮೋದ್ ಸಾವಂತ್, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸದಸ್ಯರ ಸಭೆ ನಡೆಸಿ ನೀರು ತಿರುವು ವಿಚಾರದಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸಿದ್ದರು. ಬಳಿಕ ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ಮೇಲೆ ರಾಜ್ಯವು ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ತಿರುಗಿಸುವ ಯೋಜನೆಯಲ್ಲಿದೆ. ಇದೇ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕದ ನಡುವೆ ನದಿ ನೀರು ವಿವಾದವಿದೆ.
ಎರಡು ಅಣೆಕಟ್ಟುಗಳ ನಿರ್ಮಾಣಕ್ಕಾಗಿ ಕರ್ನಾಟಕ ಸಲ್ಲಿಸಿದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರವು ಇತ್ತೀಚೆಗೆ ಅನುಮೋದನೆ ನೀಡಿದೆ. ಇದಾದ ಬೆನ್ನಲ್ಲೇ ಗೋವಾ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಯೋಜನೆಯನ್ನು ತಡೆಯಲು ಪ್ರಯತ್ನಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸರ್ವಪಕ್ಷ ನಿಯೋಗವನ್ನು ಕಳುಹಿಸುವುದಾಗಿ ಘೋಷಿಸಿತ್ತು.
ಸಭೆ ಬಳಿಕ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಪ್ರಮೋದ್ ಸಾವಂತ್, ಗೋವಾದ ಮುಖ್ಯ ವನ್ಯಜೀವಿ ಅಧಿಕಾರಿ ಸೋಮವಾರ ಕರ್ನಾಟಕ ಸರ್ಕಾರಕ್ಕೆ ಕೆಲಸ ನಿಲ್ಲಿಸುವ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಗೋವಾದ ಕೆಳಭಾಗದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯದ ಮೂಲಕ ಕರ್ನಾಟಕವು ಮಹದಾಯಿ ನದಿಯಿಂದ ನೀರನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ಗೋವಾ ಸರ್ಕಾರ ವಾದಿಸುತ್ತಿದೆ.
"ಪಣಜಿಯಲ್ಲಿ ಮಹದೇ ಬಚಾವೋ ಅಭಿಯಾನದ ಸದಸ್ಯರೊಂದಿಗೆ ಸಭೆಯನ್ನು ನಡೆಸಿದೆ. ಮಹದಾಯಿಗೆ ಸಂಬಂಧಿಸಿದಂತೆ ಗೋವಾದ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರವು ನಡೆಸುತ್ತಿರುವ ಎಲ್ಲಾ ಪ್ರಯತ್ನಗಳ ಬಗ್ಗೆ ಅವರಿಗೆ ವಿವರವಾಗಿ ವಿವರಿಸಲಾಗಿದೆ ಎಂದು ಸಾವಂತ್ ಟ್ವೀಟ್ ಮಾಡಿದ್ದಾರೆ.
ಅಭಿಯಾನದ ಅಧ್ಯಕ್ಷೆ ನಿರ್ಮಲಾ ಸಾವಂತ್ ಮತ್ತು ಪರಿಸರವಾದಿ ರಾಜೇಂದ್ರ ಕೇರ್ಕರ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅಡ್ವೊಕೇಟ್ ಜನರಲ್ ದೇವಿದಾಸ್ ಪಂಗಮ್, ಕರ್ನಾಟಕ ಸರ್ಕಾರದ ಡಿಪಿಆರ್ಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.