'ಸುಪ್ರೀಂ' ಕೇಸು ವಹಿಸುವ ವಿಚಾರದ ಅರ್ಜಿ ಕೈಗೆತ್ತಿಕೊಳ್ಳದ ನ್ಯಾ ಚೆಲಮೇಶ್ವರ್
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್ ಮತ್ತೊಮ್ಮೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಕ್ಕೆ ನಿರಾಕರಿಸಿದ್ದಾರೆ.
ತಮ್ಮ ತಂದೆ ಶಾಂತಿಭೂಷಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಪ್ರಶಾಂತ್ ಭೂಷಣ್ ಕೋರಿದ್ದರು. ಆ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ನ ವಿಚಾರಣೆಗೆ ಬರುವ ಪ್ರಕರಣಗಳನ್ನು ಕೊಲಿಜಿಯಂ ಅಥವಾ ನ್ಯಾಯಮೂರ್ತಿಗಳ ಗುಂಪನ್ನು ರಚಿಸಿ, ಆ ಮೂಲಕವೇ ವಿಲೇವಾರಿಗೆ ಹಂಚಿಕೆ ಆಗಬೇಕು. ಹೀಗೆ ಮಾಡಿದರೆ ಪಾರದರ್ಶಕತೆ ಕಾಯ್ದುಕೊಳ್ಳಬಹುದು ಎಂದಿತ್ತು.
ಆ ಅರ್ಜಿ ವಿಚಾರಣೆಗೆ ಪ್ರಶಾಂತ್ ಭೂಷಣ್ ಅವರು ನ್ಯಾಯಮೂರ್ತಿ ಚೆಲಮೇಶ್ವರ್ ರ ಪೀಠಕ್ಕೆ ಮನವಿ ಮಾಡಿದ್ದರು. ಆರಂಭದಲ್ಲಿ ಭೂಷಣ್ ಅವರು ನ್ಯಾ.ಚೆಲಮೇಶ್ವರ್ ಗೆ ಈ ವಿಚಾರದ ಬಗ್ಗೆ ಗಮನ ಸೆಳೆದಿದ್ದರು. ಇದು ತುರ್ತು ಸನ್ನಿವೇಶ ಎಂದು ಕೂಡ ತಿಳಿಸಿದ್ದರು. ಈ ವಿಚಾರವನ್ನು ಚೆಲಮೇಶ್ವರ್ ಪೀಠಕ್ಕೆ ಸಲ್ಲಿಸುತ್ತೇನೆ. ಏಕೆಂದರೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಒಂದು ವ್ಯವಸ್ಥೆಯ ಮುಖ್ಯಸ್ಥರನ್ನೇ ಪ್ರಶ್ನಿಸುವುದರಿಂದ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಪ್ರವೇಶಿಸುವಂತಿಲ್ಲ ಎಂದಿದ್ದರು.

ಅಂದ ಹಾಗೆ ಚೆಲಮೇಶ್ವರ್ ಮಾತನಾಡಿ, ನಾನು ಈ ವಿಚಾರದಲ್ಲಿ ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ. ಈಚೆಗೆ ಚೆಲಮೇಶ್ವರ್ ಹಾಗೂ ಕುರಿಯನ್ ಜೋಸೆಫ್ ಪತ್ರ ಬರೆದಿದ್ದರು. ಸುಪ್ರೀಂ ಕೋರ್ಟ್ ವ್ಯವಹಾರಗಳ ಬಗ್ಗೆ ಹಾಗೂ ಉನ್ನತ ಅಧಿಕಾರಿಗಳು ಕಾನೂನು ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಆರೋಪ ಮಾಡಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ನನ್ನ ವಿರುದ್ಧ ಕೆಲವರು ಪಟ್ಟು ಹಿಡಿದು, ಕೆಲವು ಆಯ್ಕೆ ಮಾಡಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ನನ್ನಿಂದ ಇದಕ್ಕಿಂತ ಹೆಚ್ಚು ಮಾಡಲು ಸಾಧ್ಯವಿಲ್ಲ. ನನ್ನ ಕ್ಷಮಿಸಿ, ನನ್ನ ಕಷ್ಟವನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ನ್ಯಾ. ಚಲಮೇಶ್ವರ್ ಅವರು ಭೂಷಣ್ ಗೆ ಹೇಳಿದ್ದಾರೆ.
ದೇಶ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ ಮತ್ತು ತನ್ನದೇ ಕೆಲಸ ಮಾಡುತ್ತದೆ. ಮುಂದಿನ ಇಪ್ಪತ್ನಾಲ್ಕು ಗಂಟೆಯಲ್ಲಿ ನನ್ನ ಮತ್ತೊಂದು ಆದೇಶ ವಾಪಸಾಗುವುದು ನನಗಿಷ್ಟವಿಲ್ಲ. ಆ ಕಾರಣಕ್ಕೆ ನಾನಿದನ್ನು ಮಾಡಲಾರೆ. ದಯವಿಟ್ಟು ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ ನ್ಯಾ.ಚಲಮೇಶ್ವರ್.
ಇದೀಗ ಪ್ರಶಾಂತ್ ಭೂಷಣ್ ಮುಖ್ಯ ನ್ಯಾಯಮೂರ್ತಿಗಳ ಬಳಿ ತಮ್ಮ ಅಹವಾಲು ಇಟ್ಟಿದ್ದಾರೆ. ಚೆಲಮೇಶ್ವರ್ ತಮ್ಮ ಅರ್ಜಿ ಪ್ರಕರಣ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಈ ಸಮಸ್ಯೆಗೆ ಕೋರ್ಟ್ ಪರಿಹಾರ ದೊರಕಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.












Click it and Unblock the Notifications