ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂಬ ವಿನಾಯ್ತಿ ಬೇಡ: ರಾಹುಲ್
"ಸಾಮರ್ಥ್ಯದ ಆಧಾರದಲ್ಲಿ ನಾನೇನು ಅಂತ ತೀರ್ಮಾನ ಮಾಡಿ" ಅನ್ನೋ ಮೂಲಕ ಟೀಕಾಕಾರರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಸವಾಲು ಹಾಕಿದ್ದಾರೆ. ಎಲ್ಲ ಕಡೆಯಿಂದಲೂ ನಿರಂತರವಾಗಿ ನನ್ನ ಮೇಲೆ ದಾಳಿ ಮಾಡುವ ಮೂಲಕ ರಾಜಕೀಯ ನಾಯಕನಾಗಿ ಬೆಳೆಯಲು ಆರೆಸ್ಸೆಸ್ 'ಸಹಾಯ' ಮಾಡಿದೆ ಎಂದು ಅವರು ಹೇಳಿದ್ದಾರೆ.
ಗಾಂಧಿ ಕುಟುಂಬಕ್ಕೆ ಸೇರಿದವರು ಅನ್ನೋ ಕಾರಣಕ್ಕೆ ಕಾಂಗ್ರೆಸ್ ನಲ್ಲಿ ಸಿಕ್ಕ ಮನ್ನಣೆ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲನೆಯದಾಗಿ ಪ್ರಧಾನಿಯಾಗಿದ್ದ ನನ್ನ ತಂದೆ (ರಾಜೀವ್ ಗಾಂಧಿ) ನಿಧನರಾದ ಮೇಲೆ ನಮ್ಮ ಕುಟುಂಬದಿಂದ ಸರಕಾರದಲ್ಲಿ ಯಾವುದೇ ಅಧಿಕಾರ ಹೊಂದಿಲ್ಲ ಎಂದಿದ್ದಾರೆ.
ಎರಡನೆಯದು, ಹೌದು, ನಾನು ಹುಟ್ಟಿದ ಕುಟುಂಬದ ಕಾರಣಕ್ಕೆ ಹೇಳಿದ್ ಮಾತನ್ನು ಕೇಳುವವರು ಇದ್ದಾರೆ. ಆದರೆ ನನ್ನ ಜತೆಗೆ ಸಮಸ್ಯೆಗಳ ಬಗ್ಗೆ ಮಾತನಾಡಿ. ವಿದೇಶಿ ನೀತಿ, ಅರ್ಥಶಾಸ್ತ್ರ, ಭಾರತದ ಅಭಿವೃದ್ಧಿ, ಕೃಷಿ ಬಗ್ಗೆ ಮುಕ್ತವಾಗಿ ಮಾತನಾಡಿ. ನಿಮಗೆ ಏನು ಪ್ರಶ್ನೆ ಕೇಳಬೇಕಿದೆಯೋ ಅದನ್ನು ಕೇಳಿ, ಆ ನಂತರ ನಾನೇನು ಅನ್ನೋದನ್ನು ತೀರ್ಮಾನ ಮಾಡಿ ಎಂದಿದ್ದಾರೆ ರಾಹುಲ್ ಗಾಂಧಿ.

ನನಗೆ ಅಚ್ಚರಿ ಆಗೋದೇನು ಅಂದರೆ, ಭಾರತದ ಪ್ರಧಾನಮಂತ್ರಿಗಳು ಈ ರೀತಿಯ ಸಂವಾದಕ್ಕೆ ಕಷ್ಟಪಡ್ತಾರೆ. ಅವರು ಇಲ್ಲಿ ಕೂರಲಾರರು. ಅವರೆಂದೂ ಹೀಗೆ ಮಾಡಿಲ್ಲ. ಅವೆಲ್ಲಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನು ಮುಕ್ತವಾಗಿ ಅರ್ಥ ಮಾಡಿಕೊಳ್ಳಲಾರರು ಎಂದು ರಾಹುಲ್ ಆರೋಪ ಮಾಡಿದ್ದಾರೆ.
ರಾಜಕೀಯ ವ್ಯವಸ್ಥೆಯಲ್ಲಿ ಹದಿನಾಲ್ಕು- ಹದಿನೈದು ವರ್ಷದಿಂದ ಕೆಲಸ ಮಾಡ್ತಾ ಇದ್ದೀನಿ. ನನ್ನ ವಿರುದ್ಧ ಬಹಳ ದಾಳಿಗಳಾಗಿವೆ. ಅವುಗಳಿಂದ ಕಲಿತಿದ್ದೇನೆ. ಬೇರೊಬ್ಬರ ಆಲೋಚನೆಗಳನ್ನು ಕೇಳಿಸಿಕೊಳ್ತೀನಿ, ಗೌರವಿಸುತ್ತೀನಿ. ಅವೆಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ದ್ವೇಷದ ಮೂಲಕ ನೋಡುತ್ತಾರೆ. ನಾನು ನಿಜವಾಗಲೂ ಯೋಚಿಸುತ್ತೀನಿ. ನನಗೆ ಆ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಅಂತಿಮವಾಗಿ ನಿಮಗೆ ಬಿಟ್ಟಿದ್ದು: ನಾನು ಬಂದ ಕುಟುಂಬದ ಕಾರಣಕ್ಕೆ ಖಂಡಿಸುತ್ತೀರೋ ಅಥವಾ ನನ್ನ ಸಾಮರ್ಥ್ಯದ ಆಧಾರದಲ್ಲಿ ಗುರುತ್ತಿಸುತ್ತೀರೋ ಅದು ನಿಮ್ಮ ಆಯ್ಕೆಗೆ ಬಿಟ್ಟಂಥ ವಿಚಾರ. ಅದಕ್ಕೆ ನಾನೇನೂ ಮಾಡುವುದಕ್ಕೆ ಆಗಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications