ರಾಜಸ್ಥಾನ ಬಿಜೆಪಿ ನಾಯಕರ ಜೊತೆ ಶಾ, ನಡ್ಡಾ ಚರ್ಚೆ: ಪ್ರಮುಖ ವಿಚಾರಗಳೇನು?
ನವದೆಹಲಿ, ಅಕ್ಟೋಬರ್ 22: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜಸ್ಥಾನ ಬಿಜೆಪಿ ಘಟಕದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರವನ್ನು ರೂಪಿಸುವ ಹಾಗೂ ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿವೆ.
ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಈಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಾಯಕರು ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ರಾಜ್ಯ ಭೇಟಿಯ ಸಿದ್ಧತೆಗಳ ಬಗ್ಗೆಯೂ ಚರ್ಚಿಸಿದ್ದಾರೆ.

ರಾಜ್ಯ ಬಿಜೆಪಿಯೊಳಗಿನ ಗುಂಪುಗಾರಿಕೆ ಸಮಸ್ಯೆಯನ್ನು ಬಗೆಹರಿಸಿ ಅಶೋಕ್ ಗೆಹಲೋಟ್ ಸರ್ಕಾರವನ್ನು ಸೋಲಿಸಲು ಪಣತೊಡಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ರಾಜಸ್ಥಾನ ನಾಯಕರಿಗೆ ಸೂಚಿಸಲಾಗಿದೆ.
ಈ ಸಭೆಯ ನಂತರ ನಡ್ಡಾ ಅವರು ಹಿರಿಯ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಬಿಜೆಪಿ ಕೋರ್ ಕಮಿಟಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನ ಹಾಗೂ ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚಿಸಲಾಗಿದೆ.
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳಲ್ಲಿ, ಒಂದು ತಿಂಗಳುಗಳ ಕಾಲ 'ಜನಾಕ್ರೋಶ' ಎಂಬ ರ್ಯಾಲಿಗಳು ಸೇರಿದಂತೆ ವರ್ಷವಿಡೀ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ರ್ಯಾಲಿಗಳ ಮೂಲಕ ಕೇಸರಿ ಪಕ್ಷವು ದಕ್ಷಿಣ ರಾಜಸ್ಥಾನದ ಬುಡಕಟ್ಟು ಜನಸಮುದಾಯವನ್ನು ತಲುಪುವ ಗುರಿ ಹೊಂದಿದೆ. ಇದು ಮುಂಬರುವ ಗುಜರಾತ್ ಚುನಾವಣೆಗೂ ಸಹಾಯವಾಗಲಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಕಾಳಜಿಯನ್ನು ಹೊಂದಿದೆ ಎಂಬುದನ್ನು ಈ ರ್ಯಾಲಿಗಳ ಮೂಲಕ ತಿಳಿಸಿಕೊಡಲಾಗುತ್ತದೆ.

ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಈ ಸಭೆಗಳು ನಡೆದಿವೆ. ಈ ವೇಳೆ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ, ರಾಜ್ಯಾಧ್ಯಕ್ಷ ಸತೀಶ್ ಪುನಿಯಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನೆ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್, ಓಂ ಪ್ರಕಾಶ್ ಮಾಥುರ್, ರಾಜ್ಯ ಸಹ ಉಸ್ತುವಾರಿ ವಿಜಯ ರಹತ್ಕರ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯ ಕೋರ್ ಕಮಿಟಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ರಾಜಸ್ಥಾನ ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯ: ನೂತನ ಸಾರಥಿ ನಡೆ ಏನು?
ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಹೊಂದಿರುವ ದೊಡ್ಡ ರಾಜ್ಯ ರಾಜಸ್ಥಾನ. ಆದರೆ, ರಾಜಸ್ಥಾನ ಕಾಂಗ್ರೆಸ್ ಘಟಕದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳೇನು ಗುಟ್ಟಾಗಿ ಉಳಿದಿಲ್ಲ. ಪಕ್ಷದ ಪ್ರಭಾವಿ ನಾಯಕರಾದ ಅಶೋಕ್ ಗೆಹಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಮೊದಲಿನಿಂದಲೂ ಸಂಘರ್ಷವಿದೆ. ಇದು ಕಾಂಗ್ರೆಸ್ನ ಹಳೆಯ ಹಾಗೂ ಹೊಸ ಪೀಳಿಗೆಯ ನಡುವಿನ ಗುದ್ದಾಟದಂತೆ ಭಾಸವಾಗುತ್ತಿದೆ. ಅಶೋಕ್ ಗೆಹಲೋಟ್ ಅವರು ಗಾಂಧಿ ಪರಿವಾರದ ಜೊತೆ ನಿಟಕ ಸಂಪರ್ಕ ಹೊಂದಿದವರು. ಸಚಿನ್ ಪೈಲಟ್ ಅವರು ಕಳೆದ ಸಾರಿಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದವರು.
ಪಕ್ಷದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನ ರಾಜಕಾರಣವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಖರ್ಗೆ ಅವರು ಯಾರ ಪರವಾಗಿ ನಿಂತರೂ ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಂಡಾಯದ ಕಿಡಿ ಹೊತ್ತಿಕೊಳ್ಳುವಂತೂ ಶತಸಿದ್ಧ. ಹೀಗಾಗಿ, ಖರ್ಗೆ ಅವರು ಅಳೆದು ತೂಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.












Click it and Unblock the Notifications