Jharkhand Assembly Election 2024: ಜಾರ್ಖಂಡ್ ಚುನಾವಣೆಯಲ್ಲಿ ಗದ್ದುಗೆ ಏರಲಿರುವ ಪಕ್ಷ ಯಾವ್ದು ಗೊತ್ತಾ.?
Jharkhand Assembly Polls 2024: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ಒಂದೆ ದಿನ ಅಷ್ಟೇ ಬಾಕಿಯಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ರಾಜಕೀಯ ನಾಯಕರು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಮೈತ್ರಿಕೂಟ ಪಕ್ಷಗಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಬಿಜೆಪಿ 2019ರ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ.
ಕಳೆದ 5 ವರ್ಷಗಳಿಂದ ಜಾರ್ಖಂಡ್ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮೈತ್ರಿಕೂಟದ ಜೆಎಂಎಂ ಪಕ್ಷಕ್ಕೆ ಈ ಬಾರಿ ಅಧಿಕಾರ ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಮತ್ತೊಂದೆಡೆ 2019ರಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಿಜೆಪಿ ಮೈತ್ರಿಕೂಟ ಮುಂದಾಗಿದೆ. ಕಳೆದ ಎರಡು ಚುನಾವಣೆಯಲ್ಲಿ ಜೆಎಂಎಂ ಗೆಲ್ಲಿಸಿದ್ದ ಬುಡಕಟ್ಟು ಜನಾಂಗದ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಆದ್ದರಿಂದ 2 ಮೈತ್ರಿಕೂಟಗಳ ನಡುವೆ ಭಾರೀ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.

ನವೆಂಬರ್ 13 & 20ರಂದು 2 ಹಂತದಲ್ಲಿ ಜಾರ್ಖಂಡ್ನಲ್ಲಿ 81 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ಇನ್ನು ಮೊದಲ ಹಂತದಲ್ಲಿ ನವೆಂಬರ್ 13ರಂದು 43 ಕ್ಷೇತ್ರಗಳಿಗೆ ಮತ್ತು ನವೆಂಬರ್ 20ರಂದು 2ನೇ ಹಂತದಲ್ಲಿ 38 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 81 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 41 ಸ್ಥಾನಗಳ ಅವಶ್ಯಕತೆಯಿದೆ.
ಇದೀಗ ಅಧಿಕಾರದಲ್ಲಿರುವ ಮಹಾಘಟಬಂಧನ್ನಲ್ಲಿ ಜೆಎಂಎಂ, ಕಾಂಗ್ರೆಸ್, ರಾಷ್ಟ್ರೀಯ ಜನತಾದಳ ಮತ್ತು ಕಮ್ಯುನಿಷ್ಟ್ ಪಕ್ಷಗಳಿವೆ. ಉಳಿದಂತೆ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಆಲ್ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್, ಜನತಾದಳ, ಲೋಕ ಜನಶಕ್ತಿ ಪಕ್ಷಗಳಿವೆ. ಜಾರ್ಖಂಡ್ ವಿಧಾನಸಭೆಯಲ್ಲಿ ಜನರನ್ನು ಸೆಳೆಯಲು ಈ ಬಾರಿ ಬಿಜೆಪಿ ಇನ್ನಿಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುವ ಹಠದಲ್ಲಿದೆ.
ಇದೀಗ ಇರುವ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದು, ಬಿಜೆಪಿಗೆ ಇದೇ ಪ್ರಮುಖ ಅಸ್ತ್ರವಾಗಿದೆ. ಎಲ್ಲಾ ಪ್ರಚಾರ ವೇದಿಕೆಗಳಲ್ಲೂ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳು ಈ ವಿಷಯವನ್ನು ಬಳಸಿಕೊಂಡಿವೆ. ಅಲ್ಲದೇ, ಸರ್ಕಾರದ ಜನ ವಿರೋಧಿ ನೀತಿ, ಭ್ರಷ್ಟಾಚಾರ, ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶಿ ಒಳನುಸುಳುಕೋರರ ಭೀತಿ, ಮುಖ್ಯಮಂತ್ರಿ ಹೇಮಂತ್ ವಿರುದ್ಧದ ಪ್ರಕರಣ ಮುಂತಾದವುಗಳನ್ನಿಟ್ಟುಕೊಂಡು ನಿರಂತರವಾಗಿ ಬಿಜೆಪಿ ವಾಗ್ದಾಳಿ ಮಾಡುತ್ತಲೇ ಇದೆ.
81 ವಿಧಾನಸಭೆ ಕ್ಷೇತ್ರಗಳಲ್ಲಿ 28 ಸ್ಥಾನಗಳು ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ಕ್ಷೇತ್ರಗಳಾಗಿದ್ದು, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂನ ಹೇಮಂತ್ ಸೊರೇನ್ ಹೆಚ್ಚು ಪ್ರಬಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಹೇಮಂತ್ ಸೊರೇನ್ ಅವರ ಬಂಧನಕ್ಕೆ ಬಿಜೆಪಿಯೇ ಕಾರಣ ಎಂದು ಹೇಳುವ ಮೂಲಕ ಹೆಚ್ಚು ಮತ ಪಡೆಯಬಹುದು ಎಂಬುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.
2011ರ ಜನಗಣತಿ ಪ್ರಕಾರ ಜಾರ್ಖಂಡ್ನಲ್ಲಿ ಶೇಕಡ 30ಕ್ಕೂ ಹೆಚ್ಚು ಮಂದಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯಗಳು ಕಳೆದೆರಡು ಚುನಾವಣೆಗಳಲ್ಲಿ ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್ ಪರವಾಗಿರುವುದು ಮಹಾಘಟಬಂಧನ್ ಕೂಟಕ್ಕೆ ಬಲ ತಂದುಕೊಟ್ಟಿದೆ. ಅಲ್ಲದೆ, ಈ ಬಾರಿಯೂ ಈ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್ ಮೈತ್ರಿ ಕೂಟ ಮೆಯಾನ್ ಸಮ್ಮಾನ್ ಯೋಜನಾ, ಆಪ್ಕಿ ಯೋಜನಾ, ಆಪ್ಕಿ ಸರ್ಕಾರ್ ಯೋಜನೆಗಳನ್ನು ಜಾರಿಗೊಳಿಸಿದೆ.
ರಾಜ್ಯದ ಜನರಿಗಾಗಿ ಏಕರೂಪದ ಪಿಂಚಣಿ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಇವುಗಳು ಈ ಚುನಾವಣೆಯಲ್ಲಿ ಮೈತ್ರಿಕೂಟದ ಕೈ ಹಿಡಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರ್ನಾ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಬಗ್ಗೆ ಕಾಂಗ್ರೆಸ್ ಹಾಗೂ ಜೆಎಂಎಂ ಗೊತ್ತುವಳಿಯನ್ನು ಮಂಡಿಸಿದ್ದವು. ಇದು ಕೂಡ ವರವಾಗಲಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನಸಂಖ್ಯೆಯ ಪ್ರಮಾಣ ಹೆಚ್ಚಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡ 30ರಷ್ಟಿರುವ ಈ ಸಮುದಾಯ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಉಳಿದಂತೆ ಒಬಿಸಿ ಪ್ರಮಾಣ ಶೇಕಡ 46 ಹಾಗೂ ಸಾಮಾನ್ಯ ವರ್ಗ ಶೇಕಡ 16ರಷ್ಟಿದೆ. ಕಳೆದ ಚುನಾವಣೆಯಲ್ಲಿ ಎಸ್ಟಿ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಪ್ರದೇಶದಲ್ಲು ಜೆಎಂಎಂ ಗೆಲುವು ಸಾಧಿಸಿತ್ತು. ಅಲ್ಲದೇ ಜಾತಿ ಗಣತಿ ವಿಷಯವನ್ನಿಟ್ಟುಕೊಂಡು ಒಬಿಸಿ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮೈತ್ರಿಕೂಟ ಮುಂದಾಗಿದೆ.












Click it and Unblock the Notifications