ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?
ಶ್ರೀನಗರ, ಜೂನ್ 19: 2014 ರಲ್ಲಿ ಪ್ರಪ್ರಥಮ ಬಾರಿಕೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಬಿಜೆಪಿಗೆ ಆಡಳಿತ ನಡೆಸುವ ಅವಕಾಶ ಸಿಕ್ಕಿತ್ತು. ಸ್ವತಂತ್ರವಾಗಿ ಅಲ್ಲದಿದ್ದರೂ ಪಿಡಿಪಿ ಜೊತೆ ಮೈತ್ರಿ ಸರ್ಕಾರ. 'ಸಮ್ ಥಿಂಗ್ ಈಸ್ ಬೆಟರ್ ದ್ಯಾನ್ ನಥಿಂಗ್' ಎಂಬಂತೆ ಈ ಅವಕಾಶವನ್ನು ಸ್ವೀಕರಿಸಿತ್ತು ಬಿಜೆಪಿ.
ಕಣಿವೆಯಲ್ಲಿ ಹಲವು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಹಿಂಸೆ, ಭಯೋತ್ಪಾದನೆ, ಪ್ರತ್ಯೇಕತಾವಾದದ ಕೂಗು... ಇವನ್ನೆಲ್ಲ ತಹಬಂದಿಗೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟು) ಜೊತೆ ಕೈಜೋಡಿಸಿದ್ದ ಬಿಜೆಪಿ ತನ್ನ ಸೋಲನ್ನು ಒಪ್ಪಿಕೊಂಡಿದೆಯಾ?
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೆಹಬೂಬಾ ಮುಫ್ತಿ
ಕಣಿವೆಯಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ತರುವಲ್ಲಿ ಪಿಡಿಪಿ ನೇತೃತ್ವದ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬರ್ಥದಲ್ಲಿ ಬಿಜೆಪಿ ಮಾತನಾಡಿದೆ. ಪಿಡಿಪಿ ವೈಫಲ್ಯದೊಂದಿಗೆ ತನ್ನ ವೈಫಲ್ಯವನ್ನೂ ಪರೋಕ್ಷವಾಗಿ ಹೇಳಿಕೊಂಡಿದೆ ಬಿಜೆಪಿ!
ಬಿಜೆಪಿ-ಪಿಡಿಪಿ ಬ್ರೇಕಪ್: ಬಿಜೆಪಿಯದು ಕಪಟ ನಾಟಕವೇ?
ಅಷ್ಟಕ್ಕೂ ಬಿಜೆಪಿ ದಿಢೀರ್ ಅಂತ ತನ್ನ ಬೆಂಬಲವನ್ನು ವಾಪಸ್ ಪಡೆಯೋದಕ್ಕೆ ಅಸಲಿ ಕಾರಣ ಏನಿದ್ದೀತು?
ವಾನಿ ಹತ್ಯೆ ಮತ್ತು ನಂತರದ ಗಲಭೆ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಪ್ರತ್ಯೇಕತಾವಾದಿ ಬುರ್ಹಾನ್ ಮುಜಾಫರ್ ವಾನಿ ಎಂಬುವವನನ್ನು 2016 ರ ಜೂನ್ 8 ರಂದು ಭಾರತೀಯ ಸೇನೆ ಎನ್ ಕೌಂಟರ್ ವೊಂದರಲ್ಲಿ ಹೊಡೆದು ಸಾಯಿಸಿತ್ತು. ಇದರಿಂದಾಗಿ ವಾನಿ ಬೆಂಬಲಿಗರು ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದರು. ಎಷ್ಟರ ಮಟ್ಟಿಗೆ ಎಂದರೆ ವಾನಿ ಹತ್ಯೆ ವಿರೋಧಿಸಿ ಕಲ್ಲು ತೂರಾಟವಂತೂ ಸುಮಾರು ಆರು ತಿಂಗಳ ಕಾಲ ನಿರಂತರವಾಗಿ ನಡೆದಿತ್ತು.
ಅಷ್ಟೇ ಅಲ್ಲ, ಬರೋಬ್ಬರಿ 53 ದಿನ ಕಾಶ್ಮೀರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ವಾನಿ ಹತ್ಯೆ ನಂತರ ನಡೆದ ಹಿಂಸಾಚಾರದಲ್ಲಿ ಸುಮಾರು 96 ಜನ ಹತರಾದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರವನ್ನು ಸುದ್ದಿಯಾಗಿಸಿತ್ತು. ಇದು ಸರ್ಕಾರಕ್ಕೆ ಇರಿಸುಮುರಿಸುಂಟು ಮಾಡಿತ್ತು. ಆಗಲೂ ಬಿಜೆಪಿ-ಪಿಡಿಪಿ ಬ್ರೇಕಪ್ ಬಗ್ಗೆ ಮಾತುಗಳು ಕೇಳಿಬಂದವಾದರೂ, ಬಿಜೆಪಿ ಮಾತ್ರ ಮೈತ್ರಿ ಕಡಿದುಕೊಳ್ಳಲು ಮುಂದಾಗಿರಲಿಲ್ಲ. ಅಂಥ ಉದ್ವಿಗ್ನತೆಯ ಸಮಯದಲ್ಲೂ ಮೈತ್ರಿ ಮುರಿದುಕೊಳ್ಳಲು ಮುಂದಾಗದ ಬಿಜೆಪಿ ಈಗ ಇದ್ದಕ್ಕಿದ್ದಂತೆ ಈ ನಿರ್ಧಾರ ತೆಗೆದುಕೊಂಡಿದೆ!
ವಿಪಕ್ಷಗಳ ಕುಹಕ
ಕಣಿವೆಯಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಅದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನಿರಂತರವಾಗಿ ವಿಪಕ್ಷಗಳು ದೂರುತ್ತಿದ್ದವು. ಇದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರಕ್ಕೂ ಕೊಂಚ ಇರಿಸುಮುರಿಸುಂಟು ಮಾಡಿತ್ತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳಿಗೆ ಕೇಂದ್ರ ಸರ್ಕಾರವನ್ನು ಹಳಿಯುವ ಪ್ರಬಲ ಆಯುಧ 'ಕಾಶ್ಮೀರದ ಉದ್ವಿಗ್ನತೆ'ಯೇ ಆಗಬಹುದು ಎಂಬ 'ಹಿಂಟ್' ಸಿಕ್ಕುತ್ತಿದ್ದಂತೆಯೇ ಬಿಜೆಪಿ ನಾಯಕರು ಎಚ್ಚೆತ್ತುಕೊಂಡರು. ಆಗಿನಿಂದಲೇ ಬಹುಶಃ ಮೈತ್ರಿ ಕಡಿದುಕೊಳ್ಳಲು ಸೂಕ್ತ ಮುಹೂರ್ತ ಹುಡುಕುತ್ತಿದ್ದಿರಬೇಕು!
ಕತುವಾ ಪ್ರಕರಣ
ಜಮ್ಮು ಕಾಶ್ಮಿರದ ಕತುವಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವಂತೂ ಇಡೀ ದೇಶದ ಗಮನವನ್ನು ಕಾಶ್ಮೀರದತ್ತ ತಿರುಗಿಸಿತ್ತು. ಎಂಟು ವರ್ಷ ವಯಸ್ಸಿನ ಪುಟ್ಟ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನಡೆದ ಜಾಥಾವೊಂದರಲ್ಲಿ ಬಿಜೆಪಿಯ ಕೆಲ ಶಾಸಕರೂ ಕಾಣಿಸಿಕೊಂಡಿದ್ದರು. ಇದರಿಂದ ಪಿಡಿಪಿ ಮುಖಭಂಗ ಅನುಭವಿಸಿತ್ತು. ಆದರೆ ಪಿಡಿಪಿಗೆ ಬಿಜೆಪಿಯಲ್ಲದೆ ಬೇರೆ ಆಯ್ಕೆ ಇಲ್ಲ. ಆದ್ದರಿಂದಲೇ ಅದು ಸುಮ್ಮನಿತ್ತು. ಕತುವಾ ಪ್ರಕರಣದಿಂದಾಗಿ ಬಿಜೆಪಿ ವರ್ಚಸ್ಸು ಕಡಿಮೆಯಾದೀತು ಎಂಬ ಭಯ ದೆಹಲಿ ನಾಯಕರನ್ನೂ ಕಾಡಿತ್ತು.
ಯೋಧ ಔರಂಗಜೇಬ್ ಬಲಿದಾನ
ಇತ್ತೀಚೆಗೆ ಕಾಶ್ಮಿರದ ಗಡಿಯಲ್ಲಿ ಅಪಹರಣಕ್ಕೊಳಗಾಗಿ ಭಯೋತ್ಪಾದಕರಿಂದ ಚಿತ್ರಹಿಂಸೆ ಅನುಭವಿಸಿ ಔರಂಗಜೇಬ್ ಎಂಬ ಯೋಧ ಹುತಾತ್ಮರಾಗಿದ್ದರು. ಅದೂ ರಂಜಾನ್ ಹಬ್ಬದ ಸಮಯದಲ್ಲೇ ಕಾಶ್ಮೀರದಲ್ಲಿ ಈ ಘಟನೆ ನಡೆದಿತ್ತು. ಅದಕ್ಕು ಮುನ್ನವೂ ಇಬ್ಬರು ಸೈನಿಕರು ಭಯೋತ್ಪಾದಕರ ದಾಳಿಗೆ ಹುತಾತ್ಮರಾಗಿದ್ದರು. ಅಂದರೆ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂಬುದನ್ನು ಇದು ಸಾಬೀತುಪಡಿಸಿತ್ತು. ಇದು ವಿಪಕ್ಷಗಳಿಗೆ ಬಿಜೆಪಿಯನ್ನು ಹಳಿಯಲು ಸಿಕ್ಕ ಪ್ರಬಲ ಅಸ್ತ್ರವಾಗಿತ್ತು. ಏಕೆಂದರೆ ಅಪನಗದೀಕರಣದಿಂದಾಗಿ ಸಾಕಷ್ಟು ಭಯೋತ್ಪಾದಕ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ ಎಂದು ಹಲವು ಬಾರಿ ಬಿಜೆಪಿ ಹೇಳಿಕೊಂಡಿತ್ತು!
ಶುಜಾತ್ ಬುಕಾರಿ ಹತ್ಯೆ
ಕಳೆದ ವಾರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಖ್ಯಾತ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಯೂ ಬಿಜೆಪಿ-ಪಿಡಿಪಿ ಸರ್ಕಾರದ ಇಮೇಜ್ ಅನ್ನು ಕಡಿಮೆ ಮಾಡಿತ್ತು. 'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಬುಖಾರಿ ಅವರಿಗೆ ಪ್ರಾಣ ಬೆದರಿಕೆಯಿರುವುದು ಗೊತ್ತಿದ್ದರೂ ಸರಿಯಾದ ರಕ್ಷಣೆ ನೀಡಲಿಕ್ಕಾಗಲಿಲ್ಲವೇ ಎಂಬ ಪ್ರಶ್ನೆ ಎದ್ದಿತ್ತು.
ಈ ಘಟನೆಯಂತೂ ಜಮ್ಮು-ಕಾಶ್ಮೀರ ಸರ್ಕಾರ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂಬ ಅಭಿಪ್ರಾಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿಕೊಟ್ಟಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಬಿಜೆಪಿಗೂ ಮುಖಭಂಗವಾಗಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಪಿಡಿಪಿಯೊಂದಿಗೆ ಬೆಂಬಲ ಕಡಿದುಕೊಳ್ಳದಿದ್ದರೆ ಸಾಕಷ್ಟು ಟೀಕೆಗಳನ್ನು ಕೇಳಬೇಕಾಗುತ್ತದೆ ಎಂಬ ಭೀತಿಯಲ್ಲಿದ್ದ ಬಿಜೆಪಿಗೆ ಅತ್ಯುತ್ತಮ ನೆಪವಾಗಿ ಸಿಕ್ಕಿದ್ದು ಶುಜಾತ್ ಹತ್ಯೆ ಮತ್ತು ಔರಂಗಜೇಬ್ ಪ್ರಕರಣ ಎಂದರೆ ತಪ್ಪಾಗಲಾರದು!
ಬಿಜೆಪಿ ಯೋಚನೆ ಏನು?
ಹಾಗೆ ಹೇಳುವುದಕ್ಕೆ ಹೋದರೆ ಜಮ್ಮು-ಕಾಶ್ಮೀರದ ಉದ್ವಿಗ್ನತೆಗೆ ಪಿಡಿಪಿಯಷ್ಟೇ ಸಮಾನ ಕಾರಣ ಬಿಜೆಪಿಯೂ ಹೌದು. ಆದರೆ ಇದೀಗ ಬೆಂಬಲ ವಾಪಸ್ ಪಡೆಯುವ ಮೂಲಕ ತಾನು ನಿರ್ದೋಷಿ ಎಂದು ತೋರಿಸಿಕೊಳ್ಳುವುದಕ್ಕೆ ಬಿಜೆಪಿ ಹೊರಟಿದೆಯಾ? ತನಗೆ ಅಧಿಕಾರಕ್ಕಿಂತ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವುದು ಮುಖ್ಯ ಎನ್ನುವ ಮೂಲಕ ಜನರ ವಿಶ್ವಾಸ ಗಳಿಸುವ ಯತ್ನ ಮಾಡುತ್ತದೆಯಾ? ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ತೆಗೆದುಕೊಂಡ ಈ ಮಹತ್ವದ ನಿರ್ಧಾರ, 2019 ರ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರೀತು ಎಂಬುದು ಈಗ ಕುತೂಹಲದ ವಿಷಯ.