ಜಮ್ಮು ಕಾಶ್ಮೀರ ಇನ್ನು ಭಯೋತ್ಪಾದಕರ ತಾಣವಲ್ಲ, ಪ್ರವಾಸಿ ತಾಣವಾಗಿದೆ ಎಂದ ಗೃಹ ಸಚಿವಾಲಯ
ನವದೆಹಲಿ, ಜ. 03: ಇಷ್ಟು ವರ್ಷ ಭಯೋತ್ಪಾದಕರ ತಾಣವಾಗಿದ್ದ ಜಮ್ಮು ಮತ್ತು ಕಾಶ್ಮೀರವು ಈಗ ಪ್ರವಾಸಿಗರ ತಾಣವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.
ಕಳೆದ ವರ್ಷ 2022ರಲ್ಲಿ 22 ಲಕ್ಷ ಪ್ರವಾಸಿಗರು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ತರಬೇತಿಗಾಗಿ ಭಾರತೀಯ ಸೇನೆಗೆ ಸೇರಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಬ್ಯಾಚ್ನ ಅಗ್ನಿವೀರರು
ಮಂಗಳವಾರ ಗೃಹ ಸಚಿವಾಲಯ 'ವರ್ಷಾಂತ್ಯದ ವಿಮರ್ಶೆ 2022' ಬಿಡುಗಡೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳ ಸಂಖ್ಯೆ 2018 ರಲ್ಲಿ 417 ರಿಂದ 2021 ರಲ್ಲಿ 229 ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದೆ.
ಜೊತೆಗೆ ಭದ್ರತಾ ಪಡೆಗಳ ಹುತಾತ್ಮರ ಸಂಖ್ಯೆ 2018 ರಲ್ಲಿ 91 ಇದ್ದು, 2021 ರಲ್ಲಿ 42ಕ್ಕೆ ಇಳಿದಿದೆ ಎಂದು ತಿಳಿಸಿದೆ.
"ಜಮ್ಮು ಕಾಶ್ಮಿರ ಈ ಮೊದಲು ಭಯೋತ್ಪಾದಕರ ತಾಣವಾಗಿತ್ತು. ಇಂದು ಕಾಶ್ಮೀರ ಕಣಿವೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಮೊದಲು ಪ್ರತಿ ವರ್ಷ ಗರಿಷ್ಠ ಆರು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, ಈ ವರ್ಷ ಇಲ್ಲಿಯವರೆಗೆ 22 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ" ಎಂದು ವರ್ಷಾಂತ್ಯದ ವಿಮರ್ಶೆ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಯಾವುದೇ ಕಲ್ಲು ತೂರಾಟದ ಘಟನೆಗಳು ನಡೆದಿಲ್ಲ ಎಂದು ಸಚಿವಾಲಯ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿಯ ಪಥವನ್ನು ಮುನ್ನಡೆಸುತ್ತಿದೆ. ಸುಮಾರು 42,000 ಜನರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಆದರೆ ಈಗ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆಯ ಮೇಲೆ ಭದ್ರತಾ ಪಡೆಗಳ ಸಂಪೂರ್ಣ ನಿಯಂತ್ರಣವಿದೆ ಎಂದು ಹೇಳಿದೆ.
ಭಯೋತ್ಪಾದಕ ಘಟನೆಗಳು ಶೇಕಡಾ 54 ರಷ್ಟು ಕಡಿಮೆಯಾಗಿದೆ. ಭದ್ರತಾ ಪಡೆಗಳ ಸಾವಿನಲ್ಲಿ ಶೇಕಡಾ 84 ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕರ ನೇಮಕಾತಿಯಲ್ಲಿ ಶೇಕಡಾ 22 ರಷ್ಟು ಕಡಿಮೆಯಾಗಿದೆ ಎಂದು ವರದಿ ಮಾಹಿತಿ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ಟೋಬರ್ 5, 2022 ರಂದು ಶ್ರೀನಗರದಲ್ಲಿ ಸುಮಾರು 2,000 ಕೋಟಿ ಮೌಲ್ಯದ 240 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಈ ಮೊದಲು, 370 ನೇ ವಿಧಿಯಿಂದಾಗಿ, ಗುಜ್ಜರ್-ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳು ಶಿಕ್ಷಣ, ಚುನಾವಣೆ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈಗ ಈ ವಿಧಿಯನ್ನು ತೆಗೆದುಹಾಕಲಾಗಿದ್ದು, ಎಲ್ಲರಿಗೂ ಮೀಸಲಾತಿ ಸಿಗುತ್ತಿದೆ ಎಂದು ಹೇಳಿದೆ.