ರಾಹುಲ್ ಗಾಂಧಿ ಎಫೆಕ್ಟ್: ಜೈನರಿನ್ನು ಅಲ್ಪಸಂಖ್ಯಾತರು
ಅಂದಹಾಗೆ ಜೈನರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಸಿಂಗ್ ಜತೆ ಭಾನುವಾರವಷ್ಟೇ ಚರ್ಚಿಸಿದ್ದರು. ಮಾರನೆಯ ದಿನವೇ ಸಿಂಗ್ ನೇತೃತ್ವದ ಸಂಪುಟ ಈ ನಿರ್ಧಾರವನ್ನು ಪ್ರಕಟಿಸಿದೆ. ಶೀಘ್ರವೇ ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಲಾಗುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಕೆ ರೆಹಮಾನ್ ಖಾನ್ ಹೇಳಿದ್ದಾರೆ.
ದೇಶದಲ್ಲಿ ಜೈನರ ಜನಸಂಖ್ಯೆ ಸುಮಾರು 50 ಲಕ್ಷವಿದ್ದು, ಇವರು ಇನ್ನು ಮುಂದೆ ಸರ್ಕಾರಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಲಾಭ ಪಡೆಯಲಿದ್ದಾರೆ. ಜೈನ ಸಮುದಾಯವು ದೇಶದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಪಡೆದ 6ನೇ ಸಮುದಾಯವಾಗಿದೆ. ಮುಸ್ಲಿಂ, ಕ್ರೈಸ್ತರು, ಸಿಖ್, ಬೌದ್ಧರು, ಪಾರ್ಸಿಗಳ ನಂತರ ಜೈನರು ಅಲ್ಪಸಂಖ್ಯಾತರ ಸ್ಥಾನಮಾನ ಗಳಿಸಿಕೊಂಡಿದ್ದಾರೆ.
ಈಗಾಗಲೇ ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಜೈನರು ಅಲ್ಪಸಂಖ್ಯಾತ ಸ್ಥಾನಮಾನ ಪಡೆದಿದ್ದಾರೆ. ಇನ್ನು, ಈ ಸಮುದಾಯಕ್ಕೆ ಕೇಂದ್ರ ಸರ್ಕಾರದ ವಿಶೇಷ ಸೌಲಭ್ಯಗಳೂ ಪ್ರಾಪ್ತಿಯಾಗಲಿವೆ. ಹಾಗಾಗಿ ಕೇಂದ್ರ ಸರಕಾರವು ಕೈಗೊಂಡಿರುವ ಈ ನಿರ್ಣಯದಿಂದ ರಾಷ್ಟ್ರಮಟ್ಟದಲ್ಲೂ ಜೈನರಿಗೆ ಈ ಸ್ಥಾನಮಾನ ತಂದುಕೊಡಲಿದೆ. ( ಅಲ್ಪಸಂಖ್ಯಾತರ ಪಟ್ಟಿಗೆ ಜೈನ ಸಮುದಾಯ )