ಭಾರತದ 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಜಗದೀಪ್ ಧನಕರ್
ನವದೆಹಲಿ, ಆಗಸ್ಟ್ 11 : ಜಗದೀಪ್ ಧನಕರ್ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿಮುರ್ಮು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ವೆಂಕಯ್ಯ ನಾಯ್ಡು ಬೀಳ್ಕೊಡುಗೆ: ಕನ್ನಡದಲ್ಲೇ ಜೋಶಿ ಹಾರೈಕೆ
ಇನ್ನು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ, ಜಗದೀಪ್ ಧನಕರ್ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. "ಪೂಜ್ಯ ಬಾಪು ಅವರಿಗೆ ಗೌರವ ಸಲ್ಲಿಸುವಾಗ ರಾಜ್ ಘಾಟ್ನ ಪ್ರಶಾಂತ ಭವ್ಯತೆಯಲ್ಲಿ ಭಾರತ ಸೇವೆಯಲ್ಲಿ ಸದಾ ಇರುವಂತೆ ಆಶೀರ್ವಾದ, ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆದೆ" ಎಂದು ಜಗದೀಪ್ ಧನಕರ್ ಟ್ವೀಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಮಾರ್ಗರೇಟ್ ಆಳ್ವ ಅವರನ್ನು ಸೋಲಿಸುವ ಮೂಲಕ ಜಗದೀಪ್ ಧನಕರ್ ಆಗಸ್ಟ್ 6 ರಂದು ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ 182 ಮತಗಳನ್ನು ಪಡೆದರೆ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ 528 ಮತಗಳನ್ನು ಪಡೆದು ನಿರಾಯಾಸವಾಗಿ ಗೆಲುವು ಸಾಧಿಸಿದರು.
ಜಗದೀಪ್ ಧನಖರ್ ಶೇ.74.36 ಗಳಿಸಿದರು. 1997 ರಿಂದ ನಡೆದ ಕೊನೆಯ ಆರು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಅವರು ಅತಿ ಹೆಚ್ಚು ಅಂತರದ ಗೆಲುವು ಸಾಧಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಉಪರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸುತ್ತಾರೆ.
ಭೌತಶಾಸ್ತ್ರದಲ್ಲಿ ಪದವಿ ಪಡೆದಿರುವ ಜಗದೀಪ್ ಧನಕರ್ ನಂತರ ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ರಾಜಸ್ಥಾನ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್ ಎರಡರಲ್ಲೂ ವಕೀಲ ವೃತ್ತಿಯನ್ನು ಅಭ್ಯಾಸ ಮಾಡಿದ್ದಾರೆ. 1989 ರ ಲೋಕಸಭಾ ಚುನಾವಣೆಯಲ್ಲಿ ಜನತಾ ದಳ ಪಕ್ಷದ ಮೂಲಕ ಜುಂಜುನುದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
ಧನಕರ್ ಅವರನ್ನು 2019 ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಆಗಿ ನೇಮಿಸಲಾಯಿತು. ಎನ್ಡಿಎ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಅವರ ಹೆಸರು ಘೋಷಣೆಯಾದ ನಂತರ ಪಶ್ಚಿಮ ಬಂಗಾಳದ ರಾಜ್ಯಪಾಲ ಹುದ್ದೆಗೆ ಜುಲೈ 17 ರಂದು ರಾಜೀನಾಮೆ ನೀಡಿದ್ದರು.
Recommended Video