ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ: ಚೀನಾಕ್ಕೆ ಭಾರತದ ಖಡಕ್ ಸಂದೇಶ
ನವದೆಹಲಿ, ಅಕ್ಟೋಬರ್ 15: ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಹಿಂದಿನಿಂದಲೂ, ಈಗಲೂ ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗಗಳಾಗಿ ಉಳಿಯಲಿವೆ ಎಂದು ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ತನ್ನ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.
ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಖ್ ಮತ್ತು ಅರುಣಾಚಲ ಪ್ರದೇಶ ರಾಜ್ಯವನ್ನು ತಾನು ಪರಿಗಣಿಸಿಯೇ ಇಲ್ಲ ಎಂಬ ಚೀನಾದ ಹೇಳಿಕೆಗೆ ಗುರುವಾರ ತಿರುಗೇಟು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಈ ಕುರಿತು ನಮ್ಮ ನಿಲುವು ಸ್ಪಷ್ಟ ಹಾಗೂ ಸ್ಥಿರ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗಳು ಹಿಂದೆ, ಈಗ ಮತ್ತು ಭವಿಷ್ಯದಲ್ಲಿ ಕೂಡ ಭಾರತದ ಅವಿಭಾಜ್ಯ ಅಂಗಗಳಾಗಿ ಇರಲಿವೆ ಎಂದು ಹೇಳಿದರು.

'ಅರುಣಾಚಲ ಪ್ರದೇಶದ ಕುರಿತಾದ ನಮ್ಮ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ಅರುಣಾಚಲ ಪ್ರದೇಶ ಕೂಡ ಭಾರತದ ಅವಿಭಾಜ್ಯ ಮತ್ತು ಪರಭಾರೆ ಮಾಡಲಾಗದ ಭಾಗ. ಇದನ್ನು ಉನ್ನತ ಮಟ್ಟದಲ್ಲಿ ಸೇರಿದಂತೆ ಚೀನಾಕ್ಕೆ ಅನೇಕ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಮನವರಿಕೆ ಮಾಡಲಾಗಿದೆ' ಎಂದರು.












Click it and Unblock the Notifications