ಜಮ್ಮು ಕಾಶ್ಮೀರ: ಮನೆಯಲ್ಲೇ ಉಳಿದ 12 ಲಕ್ಷ ವಿದ್ಯಾರ್ಥಿಗಳು
ಶ್ರೀನಗರ, ನವೆಂಬರ್, 1: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಶಾಲೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತುದ್ದು, 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಜುಲೈ 9ರಿಂದ ನಿರಂತರವಾಗಿ ಪ್ರತಿಭಟನೆಗಳು ಮತ್ತು ದಾಳಿಗಳು ನಡೆಯುತ್ತಿದ್ದು, ಪ್ರತ್ಯೇಕವಾದಿ ಮುಖಂಡರು 25ಕ್ಕೂ ಹೆಚ್ಚು ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಶಾಲೆಗಳನ್ನು ಧ್ವಂಸ ಮಾಡಿದ್ದಾರೆ.
ಸರ್ಕಾರ ನಡೆಸುತ್ತಿರುವ ಕಬಮರ್ಗ್ ನಲ್ಲಿರುವ ಐಶ್ ಮುಕಮ್ ಸರ್ಕಾರಿ ಪ್ರೌಢಶಾಲೆ ಮತ್ತು ಜವಹರ್ ನವೋದಯ ವಿದ್ಯಾಲಯ ಶಾಲೆಗಳ ಮೇಲೂ ದಾಳಿ ಮಾಡಲಾಗಿದೆ.
ಒಂದೆಡೆ ಪ್ರತ್ಯೇಕವಾದಿ ಮುಖಂಡರು ಸರ್ಕಾರಿ ಶಾಲೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಉಗ್ರರೂ ಸಹ ಶಾಲೆಗಳಿಗೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದ್ದಾರೆ.
ಶಾಲೆಗಳನ್ನು ಪುನರಾರಂಭಿಸುವಂತೆ ಸರ್ಕಾರ ಆದೇಶ ನೀಡುತ್ತಿದ್ದರೂ, ಪ್ರತ್ಯೇಕವಾದಿ ಮುಖಂಡರು ಸರ್ಕಾರದ ಆದೇಶವನ್ನು ಧಿಕ್ಕರಿಸುತ್ತಿದ್ದು, ಪರಿಸ್ಥಿತಿ ತಿಳಿಗೊಳಿಸಲು ಅಡ್ಡಗಾಲು ಹಾಕುತ್ತಿದ್ದಾರೆ.
12 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ...
ಜುಲೈ 9 ರಿಂದ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಸರ್ಕಾರ ಬಹುತೇಕ ಪ್ರದೇಶಗಳಲ್ಲಿ ಕರ್ಫ್ಯು ವಿಧಿಸಿದೆ. ಇದರಿಂದಾಗಿ ಶಾಲೆಗಳಿಗೆ ಬೀಗ ಜಡಿಯಲಾಗಿದೆ.
ಇನ್ನು ಶಿಕ್ಷಕರ ಪರಿಸ್ಥಿತಿಯೂ ಸಹ ಶೋಚನೀಯ ಮಟ್ಟಕ್ಕೆ ತಲುಪಿದ್ದು, ಶಾಲೆ ತೆರೆಯದಿದ್ದರೆ ಜೀವನ ಸಾಗಿಸಲು ಸಾದ್ಯವಿಲ್ಲ. ಶಾಲೆ ತೆರೆದರೆ ಪ್ರತ್ಯೇಕವಾದಿಗಳು ಮತ್ತು ಉಗ್ರರ ಗುಂಡೇಟಿಗೆ ಬಲಿಯಾಗುವ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
ಕೆಲವು ಶಾಲೆಗಳು ಆರಂಭವಾಗಿದ್ದರು ಸಹ ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಶ್ರೀನಗರದ ಡಿಪಿಎಸ್ ಶಾಲೆಯಲ್ಲಿ ಹುರಿಯತ್ ಕಾನ್ಫರೆನ್ಸ್ ಮುಖಂಡ ಎಸ್. ಗಿಲಾನಿ ಮೊಮ್ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಗೆ ಮಾತ್ರ ಪ್ರತ್ಯೇಕವಾದಿಗಳು ಪ್ರತಿಭಟನೆ ತೋರುತ್ತಿಲ್ಲ.
12 ಲಕ್ಷ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಂದ ದೂರವಿರುವುದರಿಂದ ಇದು ಅವರ ಶೈಕ್ಷಣಕ ಜೀವನಕ್ಕೆ ಭಾರೀ ಪೆಟ್ಟು ನೀಡುವುದಂತು ಖಂಡಿತ.
ಇಷ್ಟು ದಿನ ಪ್ರತ್ಯೇಕವಾದಿಗಳು ಬೆದರಿಕೆ ಒಡ್ಡುತ್ತಿದ್ದರು ಈಗ ಉಗ್ರರು ಸಹ ಶಾಲೆಗಳ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ, ನಮ್ಮ ಮಕ್ಕಳ ಭವಿಷ್ಯ ಚಿಂತಾಜನಕವಾಗಿದೆ ಎಂದು ಪೋಷಕರು ಅಳಲುತೊಡಿಕೊಳ್ಳುತ್ತಿದ್ದಾರೆ.
ಪ್ರತ್ಯೇಕವಾದಿಗಳು ಶಾಲೆಗಳನ್ನು ತೆರೆಯದಂತೆ ಪ್ರತಿಭಟನೆಗಳನ್ನು ಮಾಡುತ್ತಲೇ, ಸರ್ಕಾರ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪರಿಸ್ಥಿತಿ ಶಾಂತಗೊಳಿಸುವ ನೆಪದಲ್ಲಿ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಪ್ರತ್ಯೇಕವಾದಿ ಮುಖಂಡರು ತಪ್ಪು ಹೇಳಿಕೆಗಳಿಂದ ವಿದ್ಯಾರ್ಥಿಗಳನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಿದೆ.