ಬಂಡಾಯ ಶಾಸಕರಿಗೆ ಗಾಳ, ಕಾಶ್ಮೀರದಲ್ಲಿ ಸೆಪ್ಟೆಂಬರ್ ಗೆ ಬಿಜೆಪಿ ಸರಕಾರ?
ಕಾಶ್ಮೀರ, ಜುಲೈ 3: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ - ಬಿಜೆಪಿ ಮೈತ್ರಿ ಸರಕಾರ ಪತನವಾಗಿದ್ದು, ಅಲ್ಲೀಗ ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ. ಇಲ್ಲಿ ಬಿಜೆಪಿ ಸರಕಾರ ರಚನೆಗೆ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದುಕೊಂಡಂತೆ ನಡೆದರೆ ಅಮರನಾಥ ಯಾತ್ರೆ ಮುಗಿಯುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸಲಿದೆ.
87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಬಹುಮತಕ್ಕೆ 44 ಸ್ಥಾನಗಳು ಅಗತ್ಯವಾಗಿವೆ. ಬಿಜೆಪಿ ಬಳಿಯಲ್ಲಿ 25 ಶಾಸಕರಿದ್ದು, ಇನ್ನುಳಿದ ಶಾಸಕರನ್ನು ಹೊಂದಿಸುವ ವಿಶ್ವಾಸದಲ್ಲಿ ಕಮಲ ಪಕ್ಷದ ನಾಯಕರಿದ್ದಾರೆ.

ಮುಖ್ಯವಾಗಿ ಪಿಡಿಪಿ ಪಕ್ಷದಲ್ಲಿ ಶಾಸಕರು ಬಂಡಾಯವೆದ್ದಿದ್ದು ಇವರನ್ನು ಬಿಜೆಪಿಗೆ ಕರೆ ತರುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ. ಪಿಡಿಪಿ ಮೆಹಬೂಬಾ ಮುಫ್ತಿಯವರ ಕೌಟುಂಬಿಕ ಪಕ್ಷವಾಗಿದೆ ಎಂದು ಹಲವು ಶಾಸಕರು ಅಸಮಧಾನ ಹೊಂದಿದ್ದು, ಇದೇ ಪರಿಸ್ಥಿಯ ಲಾಭ ಪಡೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ.
ಪಿಡಿಪಿ ನಾಯಕ ರಾಜಾ ಅನ್ಸಾರಿ ನೇತೃತ್ವದಲ್ಲಿ ಪಕ್ಷದ ಶಾಸಕರು ಬಂಡಾಯವೆದ್ದಿದ್ದು, ಸರಕಾರ ರಚನೆ ಸಂಬಂಧ ತಾವು ಬೇರೆ ಪಕ್ಷ ಸೇರಲು ಸಿದ್ದ ಎಂದು ಅವರು ಹೇಳಿದ್ದಾರೆ. ಮೆಹಬೂಬಾ ಮುಫ್ತಿಯವರಿಂದಲೇ ಬಿಜೆಪಿ ಮೈತ್ರಿ ಮುರಿದು ಬಿತ್ತು ಎಂದು ಅನ್ಸಾರಿ ದೂರಿರುವುದು ಅವರು ಪಕ್ಷ ಬಿಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸರಕಾರ ರಚನೆ ಯತ್ನದಿಂದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ದೂರ ಸರಿದಿರುವುದರಿಂದ ಅನ್ಸಾರಿ ಬಿಜೆಪಿ ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಿಜೆಪಿ ರಣತಂತ್ರ
25 ಶಾಸಕರನ್ನು ಹೊಂದಿರುವ ಬಿಜೆಪಿಗೆ ಸರಕಾರ ರಚನೆಗೆ 19 ಶಾಸಕರು ಬೇಕಾಗಿದ್ದಾರೆ. ಒಂದಷ್ಟು ಬಂಡಾಯವೆದ್ದಿರುವ ಪಿಡಿಪಿ ಶಾಸಕರನ್ನು ಪಕ್ಷದತ್ತ ಸೆಳೆದುಕೊಳ್ಳುವುದು ಬಿಜೆಪಿ ಯೋಜನೆಯಾಗಿದೆ.
ಇದಲ್ಲದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಲೋನ್ ರನ್ನು ಭೇಟಿಯಾಗಿದ್ದಾರೆ. ಪೀಪಲ್ಸ್ ಕಾನ್ಫರೆನ್ಸ್ ಬಳಿ ಇಬ್ಬರು ಶಾಸಕರು ಇರುವುದು ಗಮನಾರ್ಹ. ಇದರ ಜೊತೆಗೆ ಇನ್ನೊಂದಿಷ್ಟು ಪಕ್ಷೇತರ ಶಾಸಕರನ್ನು ಸೆಳೆದುಕೊಳ್ಳುವ ಯೋಜನೆಯನ್ನು ಬಿಜೆಪಿ ಹೊಂದಿರುವಂತೆ ಕಾಣಿಸುತ್ತಿದೆ.
ಬಿಜೆಪಿಗೆ ಜಮ್ಮು ಮತ್ತು ಲಡಾಕ್ ಭಾಗದಲ್ಲಿ ಮಾತ್ರ ಶಾಸಕರಿದ್ದಾರೆ. ಆದರೆ ಕಾಶ್ಮೀರ ಭಾಗದಲ್ಲಿ ಬಿಜೆಪಿಗೆ ಶಾಸಕರೇ ಇಲ್ಲ. ಪಿಡಿಪಿ ಶಾಸಕರನ್ನು ಸೆಳೆದು ಇಲ್ಲಿಯೂ ತಮ್ಮ ಝಂಡಾ ಊರುವ ದೂರದ ಆಲೋಚನೆಯೂ ಬಿಜೆಪಿ ನಾಯಕರ ತಲೆಯಲ್ಲಿ ಇದ್ದಂತೆ ಕಾಣಿಸುತ್ತಿದೆ.












Click it and Unblock the Notifications