ಮಾಯಾವತಿಯ ಆಪ್ತ ಇಂಜಿನಿಯರ್ ಡೈರಿ ಕಥೆ ಏನು?
ಲಕ್ನೋ, ನ.30 : ಒಂದು ಕಾಲದಲ್ಲಿ ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ನೋಯ್ಡಾದ ಕಳಂಕಿತ ಇಂಜಿನಿಯರ್ ಯಾದವ್ಸಿಂಗ್ ಬಳಿ ಇದ್ದ ಡೈರಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಆದಾಯ ತೆರಿಗೆ ದಾಳಿ ವೇಳೆ ಯಾದವ್ ಅವರ ಸಾವಿರಾರು ಕೋಟಿ ಆಸ್ತಿ ಜೊತೆಗೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಒಂದು ಡೈರಿ ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸರ ತಲೆಕೆಡಿಸಿದೆ.
ಇತ್ತೀಚೆಗೆ ಯಾದವ್ ಸಿಂಗ್ ನಿವಾಸ ಹಾಗೂ ಕಚೇರಿ ಮೇಲೆ ನೂರಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿ 100 ಕೋಟಿ ರೂ. ಮೌಲ್ಯದ ವಜ್ರಗಳು, 2 ಕೆಜಿ ಚಿನ್ನ ಹಾಗೂ 10 ಕೋಟಿ ರೂ.ಗಳ ನಗದು ಜಪ್ತಿ ಮಾಡಿದ್ದರು. ಈತನ ಆಸ್ತಿ ಮೌಲ್ಯ 1000 ಕೋಟಿ ರು ಮೀರಿದರೆ, ಈತನ ಹಗರಣದ ಮೊತ್ತ 900 ಕೋಟಿ ದಾಟುತ್ತದೆ. ಇನ್ನೇನು ಈ ಪ್ರಕರಣ ಸಿಬಿಐ ತನಿಖೆಗೆ ಒಳಪಡುವ ಲಕ್ಷಣಗಳಿವೆ. ಇಲ್ಲಿತನಕ ಐಟಿ ಇಲಾಖೆ ಹಾಗೂ ಪೊಲೀಸರಿಗೆ ಸಿಕ್ಕ ಮಾಹಿತಿ ವಿವರ ಇಲ್ಲಿದೆ...
ದಾಳಿ ವಿವರ:ಯಾದವ್ ಸಿಂಗ್ ನಿವಾಸಕ್ಕೆ ದಾಳಿ ಮಾಡಿದ ಕೃಷ್ಣಸೈನಿ ನೇತೃತ್ವದ ಅಧಿಕಾರಿಗಳ ತಂಡ, ಒಂದು ಕಾರಿನಲ್ಲಿ ಚೀಲಗಳಲ್ಲಿ ತುಂಬಿಟ್ಟಿದ್ದ 10 ಕೋಟಿ ನಗದು, ಇನ್ನೊಂದು ಕಾರಿನಲ್ಲಿದ್ದ ಭಾರೀ ಹಣ ವಶಪಡಿಸಿಕೊಂಡರು. ಕಾರಿನ ಬೆಲೆಯೇ 90 ಲಕ್ಷ ರು ಎಂದು ತಿಳಿದು ಬಂದಿದೆ.

ಇಂಜಿನಿಯರ್ನ ಬೆಡ್ರೂಂ ಶೋಧಿಸಿದಾಗ 100 ಕೋಟಿ ರೂ. ಮೌಲ್ಯದ ವಜ್ರಗಳು ಸಿಕ್ಕಿದವು ಎಂದು ಆದಾಯ ತೆರಿಗೆ ಡಿಜಿ ಕೃಷ್ಣಸೈನಿ ತಿಳಿಸಿದ್ದಾರೆ. 40 ನಕಲಿ ಕಂಪೆನಿಗಳ ಹೆಸರಿನಲ್ಲಿ ವ್ಯವಹಾರ ನಡೆದಿದೆ. ಬ್ಯಾಂಕ್ ಲಾಕರ್ಗಳ ತಪಾಸಣೆ ನಡೆದಿದೆ. ದ್ದು, ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಈ ಮಾಹಿತಿ ಬಂದರೆ ಅವುಗಳಲ್ಲಿ ಎಷ್ಟೆಷ್ಟು, ಚಿನ್ನ, ವಜ್ರ, ನಗದು ಇರಿಸಲಾಗಿದೆ ಎಂಬುದು ತಿಳಿಯಲಿದೆ ಎಂದು ಅವರು ಹೇಳಿದರು.
ಹಲವೆಡೆ ನಕಲಿ ಕಂಪೆನಿಗಳು: ಬಹುತೇಕ ಕಂಪನಿಗಳು ಯಾದವ್ನ ಪತ್ನಿ ಕುಸುಮಲತಾಳ ಹೆಸರಿನಲ್ಲಿವೆ. ಕೋಲ್ಕತಾದಲ್ಲೂ ಯಾದವ್ನ ನಕಲಿ ಕಂಪೆನಿ ಇದೆ. ಈ ಕಂಪೆನಿಗಳ ಷೇರ್ಗಳನ್ನೂ ಅಕ್ರಮವಾಗಿ ಖರೀದಿ-ಮಾರಾಟ ಮಾಡಲಾಗಿದೆ. ಗ್ರೇಟರ್ ನೊಯ್ಡಾದಲ್ಲಿ ಹಲವು ನಿವೇಶನಗಳನ್ನೂ ಖರೀದಿಸಿದ್ದಾನೆ.
ನೋಯ್ಡಾ, ಗಾಜಿಯಾಬಾದ್ ಮತ್ತು ದೆಹಲಿಯಲ್ಲಿರುವ 20 ಕಟ್ಟಡಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಯಾದವ್ ಪತ್ನಿ ಕುಸುಮಲತಾ ಹೆಸರಲ್ಲಿ ಸುಮಾರು 40 ನಕಲಿ ಕಂಪನಿಗಳಿರುವುದೂ ಬೆಳಕಿಗೆ ಬಂದಿದೆ. ಯಾದವ್ ಮತ್ತು ಆತನ ಸಹಚರರ 13 ಲಾಕರ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈತನ ಹಗರಣದ ಮೊತ್ತ ರು.900 ಕೋಟಿ ದಾಟಿರಬಹುದೆಂದು ಅಂದಾಜಿಸಲಾಗಿದೆ.
ಯಾದವ್ ಮೂಲವೇನು?: ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್ಪ್ರೆಸ್ವೇ ಪ್ರಾಧಿಕಾರದಲ್ಲಿ ಪ್ರಮುಖ ಇಂಜಿನಿಯರ್ ಯಾದವ್ ಸಿಂಗ್ ಒಂದು ಕಾಲದಲ್ಲಿ ಮಾಯಾವತಿಯ ಪರಮ ಆಪ್ತನಾಗಿದ್ದ ಅವರ ಆಸ್ಥಾನದ ನವರತ್ನ ಎಂದೇ ಜನ ಕರೆಯುತ್ತಿದ್ದರು.

ಅದರೆ, ಇದೇ ಯಾದವ್ಸಿಂಗ್ನನ್ನು 954 ಕೋಟಿ ರೂ. ಭಾರೀ ಹಗರಣದಲ್ಲಿ ಸಿಲುಕಿದಾಗ ಸಮಾಜವಾದಿ ಪಕ್ಷ ಆತನನ್ನು ಅಮಾನತು ಮಾಡಿತ್ತು. ರೆಡ್ ಕಾರ್ನರ್ ನೋಟಿಸ್ ಕೂಡಾ ಪಡೆದುಕೊಂಡಿದ್ದ ಯಾದವ್ ಮತ್ತೆ ಇಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಿ NCR ಪ್ರದೇಶದ ದೊಡ್ಡ ದೊಡ್ಡ ಕಾಮಗಾರಿಗಳ ನೇತೃತ್ವ ವಹಿಸಿದ. ಇದೆಲ್ಲವೂ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದ ಮೇಲೆ ನಡೆದ ಪವಾಡ.
ಡೈರಿ ಕಥೆ ಏನು?: ದಾಳಿ ವೇಳೆ ಸಿಕ್ಕ ಡೈರಿಯನ್ನು ಯಾರು ಡೀಕೋಡ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಈ ಡೈರಿಯಲ್ಲಿ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಉದ್ಯಮಿಗಳ ವಿವರಗಳು ಸಿಗಲಿವೆ. NCR ಪ್ರದೇಶ, ಹರ್ಯಾಣ, ಉತ್ತರಪ್ರದೇಶದ ಪ್ರಮುಖ ಕಾಮಗಾರಿಗಳ ಅವ್ಯವಹಾರಕ್ಕೆ ಪ್ರಮುಖ ಸಾಕ್ಷಿಯಾಗಲಿದೆ ಎಂದು ಐಟಿ ಪ್ರಧಾನ ನಿರ್ದೆಶಕ ಕೃಷ್ಣ ಸೈನಿ ಹೇಳಿದ್ದಾರೆ.
ಮನಿಲಾಂಡ್ರಿಂಗ್, ಅಕ್ರಮ ಆಸ್ತಿ ಗಳಿಕೆ ಮುಂತಾದ ಆರೋಪದ ಮೇಲೆ ಯಾದವ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ. ನೋಯ್ಡಾದ ಪ್ರಮುಖ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ರುವಾರಿಯಾಗಿದ್ದ ಯಾದವ್ ಸಿಂಗ್ ಬಂಧನದಿಂದ ರಿಯಲ್ ಎಸ್ಟೇಟ್ ಉದ್ಯಮ ಕೂಡಾ ಕಂಗಲಾಗಿರುವುದು ಸುಳ್ಳಲ್ಲ.











Click it and Unblock the Notifications