ನ್ಯಾಯಾಧೀಶ ಲೋಯಾ ಸಾವು 'ಅತ್ಯಂತ ಗಂಭೀರ' ಪ್ರಕರಣ : ಸುಪ್ರಿಂ ಕೋರ್ಟ್
ನವದೆಹಲಿ, ಜನವರಿ 12: ಒಂದು ಕಡೆ ನಾಲ್ವರು ಹಿರಿಯ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ಕರೆದು ಸರ್ವೋಚ್ಛ ನ್ಯಾಯಲಯದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಅಸಮಾಧನ ಹೊರಹಾಕಿದ್ದಾರೆ.
"ಪ್ರಕರಣಗಳನ್ನು ವಿಚಾರಣಾ ಪೀಠಗಳಿಗೆ ಹಸ್ತಾಂತರಿಸುತ್ತಿರುವುದರ ಸಂಬಂಧ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾಗೆ ನಾವು ಪತ್ರ ಬರೆದಿದ್ದೆವು. ಆದರೆ ನಮ್ಮ ಯತ್ನ ವಿಫಲವಾಯಿತು," ಎಂದು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮತ್ತು ಈ ಪತ್ರ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿಎಚ್ ಲೋಯಾ ಸಂಶಯಾಸ್ಪದ ಸಾವಿಗೆ ಸಂಬಂಧಿಸಿದ್ದು ಎಂದು ನ್ಯಾ. ರಂಜನ್ ಗೊಗೋಯಿ ಒಪ್ಪಿಕೊಂಡಿದ್ದಾರೆ.
ಒಂದೆಡೆ ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶ ಲೋಯಾ ಪ್ರಕರಣ ಬಿರುಗಾಳಿ ಎಬ್ಬಿಸಿದ್ದರೆ ಇತ್ತ ಸುಪ್ರಿಂ ಕೋರ್ಟ್ ಈ ಪ್ರಕರಣ 'ಅತೀ ಗಂಭೀರ 'ಎಂದು ಉಲ್ಲೇಖಿಸಿದೆ. ಪ್ರಕರಣದಲ್ಲಿ ಸ್ವತಂತ್ರ ತನಿಖೆ ನಡೆಸುವ ಕುರಿತು ಮಹಾರಾಷ್ಟ್ರ ಸರಕಾರದ ಪ್ರತಿಕ್ರಿಯೆಯನ್ನು ಸುಪ್ರಿಂ ಕೋರ್ಟ್ ಕೇಳಿದೆ.

ಎಚ್.ಬಿ ಲೋಯಾ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಗಳಾಗಿದ್ದರು.
ಇಂದು ಲೋಯಾ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ "ಪ್ರಕರಣದ ವಿಚಾರಣೆಯನ್ನು ಬೈ-ಪಾರ್ಟಿ ವಿಚಾರಣೆ ನಡೆಸಬೇಕು. ಎಕ್ಸ್ಪಾರ್ಟೆ ಬೇಡ," ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಎಂ ಶಾಂತನಗೌಡರ್ ಪ್ರಕರಣದ ಸ್ವತಂತ್ರ ತನಿಖೆ ನಡೆಸುವ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಜನವರಿ 15ರ ಗಡುವು ನೀಡಿದ್ದಾರೆ.
ಪ್ರಕರಣದ ವಿಚಾರಣೆ ಸಂಬಂಧ ಸುಪ್ರಿಂ ಕೋರ್ಟ್ ನಲ್ಲಿ ಇಂದು ಕಾವೇರಿದ ವಾದವೂ ನಡೆಯಿತು. ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಹೀಗಾಗಿ ಸುಪ್ರಿಂ ಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂದು ಬಾಂಬೆ ಲಾಯರ್ಸ್ ಅಸೋಸಿಯೇಷನ್ ಪ್ರತಿನಿಧಿಸುವ ವಕೀಲ ದುಷ್ಯಂತ್ ದವೆ ವಾದಿಸಿದರು.
ಇದೇ ವೇಳೆ ಅರ್ಜಿದಾರ ಬಿಆರ್ ಲೋನ್ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನನಗೂ ಸುಪ್ರಿಂ ಕೋರ್ಟ್ ಈ ಪ್ರಕರಣದ ಬಗ್ಗೆ ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂದು ಬಾಂಬೆ ಲಾಯರ್ಸ್ ಅಸೋಸಿಯೇಷನ್ ಸಲಹೆ ನೀಡಿದೆ ಎಂದು ಹೇಳಿದರು.
ಹೀಗಿದ್ದೂ ಅರ್ಜಿದಾರರ ಅರ್ಜಿಯ ಬಗ್ಗೆ ಗಮನ ಹರಿಸಲಾಗುವುದ ಜತೆಗೆ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ಇನ್ನೊಂದು ಕಡೆ ಕಾಂಗ್ರೆಸ್ ನಾಯಕ ತಹ್ಸೀನ್ ಪೂನವಾಲಾ ಪರ ವಕೀಲ ವರಿಂದರ್ ಕುಮಾರ್ ಶರ್ಮಾ ನ್ಯಾಯಧೀಶರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಪೋಸ್ಟ್ ಮಾರ್ಟಂ ರಿಪೋರ್ಟ್ ಮತ್ತು ಇತರ ದಾಖಲೆಗಳಲ್ಲು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಿ ವಕೀಲ ನಿಶಾಂತ್ ಆರ್. ಕಟ್ನೇಶ್ವರ್ಕರ್ ಗೆ ಸುಪ್ರಿಂ ಕೋರ್ಟ್ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಇದೇ ಜನವರಿ 15ಕ್ಕೆ ಮುಂದೂಡಿದೆ.
ಡಿಸೆಂಬರ್ 1, 2016ರಲ್ಲಿ ಲೋಯಾ ಕಾರ್ಡಿಯಿಕ್ ಅರೆಸ್ಟ್ ನಿಂದ ಸಾವನ್ನಪ್ಪಿದ್ದರು. ತಮ್ಮ ಸಹೋದ್ಯೋಗಿಯ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿತ್ತು.












Click it and Unblock the Notifications