ಬೆಂಗಳೂರು, ಮುಂಬೈನಲ್ಲೂ ಐಎಸ್ ಐಎಸ್ ನಿಂದ ಚಾಕು ದಾಳಿಗೆ ಸ್ಕೆಚ್
ಬೆಂಗಳೂರು, ಆಗಸ್ಟ್ 30: ಐಎಸ್ ಐಎಸ್ ಬಗ್ಗೆ ಅಭಿಮಾನ ಇರುವ ತಂಡಗಳು ಭಾರತದಲ್ಲಿ ವಿದೇಶೀಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳವು ಎಚ್ಚರಿಕೆ ನೀಡಿದೆ. ಐಎಸ್ ಐಎಸ್ ಭಾರತದೊಳಗೆ ಭರ್ಜರಿ ಎಂಟ್ರಿ ಕೊಡುವಂಥ ದಾಳಿ ನಡೆಸಲು ಸ್ಕೆಚ್ ಹಾಕಿದೆ.
ಬಾಂಗ್ಲಾ ದೇಶದಲ್ಲಿ ನಡೆದ ದಾಳಿ, ಭಾರತಕ್ಕೂ ಒಂದು ಎಚ್ಚರಿಕೆಯಾಗಿದೆ. ಐಎಸ್ ಐಎಸ್ ಜತೆಗೆ ಜಮಾತ್ ಉಲ್ ಮುಜಾಹಿದೀನ್ ಪಕ್ಕದ ದೇಶದವರೆಗೆ ಬಂದಿದೆ.[ಐಎಸ್ಐಎಸ್ ಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!]
ಭಾರತದಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿರುವುದರಿಂದ ಐಎಸ್ ಐಎಸ್ ಗೆ ಶಸ್ತ್ರಾಸ್ತ್ರಗಳನ್ನು ಒಳತರುವುದು ಕಷ್ಟವಾಗಿದೆ ಎಂದು ಇಂಟೆಲಿಜೆನ್ಸ್ ಬ್ಯುರೋ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಕಣ್ಣಂದಾಜಿಗೆ ಚಾಕು ಸುಲಭಕ್ಕೆ ದೊರಕುವುದಿಲ್ಲ. ಆದ್ದರಿಂದ ಚಾಕುವಿನ ಮೂಲಕ ದಾಳಿ ನಡೆಸುವುದಕ್ಕೆ ಯೋಚಿಸಲಾಗಿದೆ. ಅಂದಹಾಗೆ, ಚಾಕುವಿನಿಂದ ಮಾಡುವ ದಾಳಿ ಕೂಡ ಭಾರಿ ಪರಿಣಾಮ ಬೀರುತ್ತದೆ.[ಕರ್ನಾಟಕ- ಕೇರಳ ಗಡಿಯಲ್ಲಿ ಚಳಿ ಕಾಯಿಸುತ್ತಿರುವ ಐಎಸ್ಐಎಸ್]
ಈ ವರೆಗೆ ನಡೆದದ್ದಕ್ಕಿಂತ ಭಿನ್ನವಾದ ದಾಳಿಗಳನ್ನು ನಡೆಸಲು ಐಎಸ್ ಐಎಸ್ ಸೂಚನೆ ನೀಡಿದೆ. ಇದಕ್ಕೆ ಉದಾಹರಣೆ ಅಂದರೆ ಲಾರಿ ಹರಿಸಿ ಜನರನ್ನು ಕೊಲ್ಲುವುದು. ಆದರೆ ಪರಿಣಾಮ ಮಾತ್ರ ಭಯಂಕರವಾಗಿರುತ್ತದೆ.
ಚಾಕುವನ್ನು ಬಳಸಿ ದಾಳಿ ಮಾಡುವುದು ಐಎಸ್ ಐಎಸ್ ಗುರಿಯಲ್ಲಿದೆ. ಇದರ ಜತೆಗೆ ಜನರನ್ನು ಕೊಲ್ಲಲು ಕಲ್ಲುಗಳನ್ನು ಬಳಸುವ ಯೋಚನೆ ಕೂಡ ಇದೆ. ಕಟ್ಟಡಗಳ ಮೇಲಿಂದ ಜನರನ್ನು ದೂಡುವ ಉದ್ದೇಶ ಸಹ ಇದೆ ಎಂದು ಸಂಘಟನೆ ಹೇಳಿಕೊಂಡಿದೆ. ಭಾರತದಲ್ಲಿ ಚಾಕುವಿನಿಂದ ಮೊದಲ ದಾಳಿ ಶ್ರೀನಗರದ ದಾಲ್ ಲೇಕ್ ನಲ್ಲಿ ಮಾಡುವ ಸ್ಕೆಚ್ ಹಾಕಿದೆ.[ಐಎಸ್ ಐಎಸ್ ವಶದಿಂದ ಇಬ್ಬರು ಕನ್ನಡಿಗರ ರಕ್ಷಣೆ]
ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶೀಯರು ಇರುವುದರಿಂದ ಅದೇ ಉತ್ತಮ ಜಾಗ ಎಂಬುದು ಭಯೋತ್ಪಾದಕ ಸಂಘಟನೆ ಲೆಕ್ಕಾಚಾರ. ಅಲ್ಲಿಂದಲೇ ದಾಳಿ ಶುರು ಮಾಡುವುದಕ್ಕೆ ಜಾಗಗಳ ಪರಿಶೀಲನೆ ನಡೆಸುತ್ತಿದೆ. ಅದೇ ರೀತಿ ರಾಜಸ್ತಾನ, ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲೂ ಸ್ಥಳ ಪರಿಶೀಲನೆ ನಡೆಯುತ್ತಿದೆ.
ಐಎಸ್ ಐಎಸ್ ಉಗ್ರರ ಗುರಿ ವಿದೇಶೀಯರು. ಭಾರತದಲ್ಲಿ ನೀಡಿರುವ ಸೂಚನೆಗಳು ಅದನ್ನೇ ಬೊಟ್ಟು ಮಾಡುತ್ತವೆ. ತಂತ್ರಗಳನ್ನು ಪದೇಪದೇ ಬದಲಿಸುತ್ತಿರುವ ಐಎಸ್ ಐಎಸ್, ಗುಪ್ತಚರ ದಳದ ಕೆಲಸವನ್ನೂ ಮತ್ತೂ ಕಷ್ಟವಾಗುವಂತೆ ಮಾಡಿದೆ.[ಪ್ಯಾರಿಸ್ ಉಗ್ರರ ದಾಳಿ ಹಿಂದಿರುವವರು ಯಾರು?]
ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದಲೂ ಮಾಹಿತಿ ಹೆಕ್ಕಿ ತೆಗೆಯುತ್ತಿದೆ. ಜತೆಗೆ ಜಗತ್ತಿನ ವಿವಿಧ ತನಿಖಾ ಸಂಸ್ಥೆಗಳ ನೆರವನ್ನೂ ಪಡೆಯುತ್ತಿದೆ.