ವರ್ಷಾಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ: ಕೇಂದ್ರ
ನವದೆಹಲಿ, ನವೆಂಬರ್ 24: ಈ ವರ್ಷದ ಕೊನೆಯಾಗುವಷ್ಟರಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಯುಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಭಾರತ ಸೇರಿ ಹಲವಾರು ದೇಶಗಳಲ್ಲಿ ಲಾಕ್ಡೌನ್ ಮಾಡಿದ ಕಾರಣದಿಂದಾಗಿ ಎಲ್ಲಾ ವಿಮಾನಗಳ ಸಂಚಾರವು ಸ್ಥಗಿತಗೊಂಡಿತ್ತು. ಕೆಲವು ಅಗತ್ಯ ವಸ್ತುಗಳನ್ನು ಸಾಗಿಸುವ ವಿಮಾನಗಳು ಮತ್ರ ಸಂಚಾರ ಮಾಡುತ್ತಿದ್ದವು. ದೇಶದಲ್ಲಿ ಕೊರೊನಾ ಲಸಿಕೆಯನ್ನು ನೀಡಲು ಆರಂಭ ಮಾಡಿದ ಬಳಿಕ ಹಾಗೂ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಡಿಮೆ ಆಗುತ್ತಿದ್ದಂತೆ ಕೆಲವು ನಿರ್ಬಂಧಗಳೊಂದಿಗೆ ಅಂತಾರಾಷ್ಟ್ರೀಯ ವಿಮಾನಯಾನ ಆರಂಭ ಮಾಡಿದ್ದಾರೆ.
ಏರ್ ಬಬಲ್ ಯೋಜನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ವಿಮಾನಯಾನ ನಡೆಯುತ್ತಿದೆ. ಭಾರತವು ಪ್ರಸ್ತುತ ಇಂತಹ 25 ಒಪ್ಪಂದಗಳನ್ನು ಹೊಂದಿದೆ. ಏರ್ ಬಬಲ್ ವ್ಯವಸ್ಥೆಯ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾಗಳು ಒಪ್ಪಂದ ಮಾಡಿಕೊಂಡಿರುವ ದೇಶಗಳ ನಡುವೆ ಕೆಲವು ಷರತ್ತುಗಳೊಂದಿಗೆ ಹಾರಾಟ ನಡೆಸುತ್ತದೆ.

ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, "ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಆರಂಭ ಮಾಡಿದೆ," ಎಂದು ತಿಳಿಸಿದ್ದರು. "ಸರ್ಕಾರವು ಈಗ ಪರಿಸ್ಥಿತಿಯನ್ನು ಸಹಜತೆಗೆ ಮರಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕೊರೊನಾ ವೈರಸ್ ಸೋಂಕಿನ ಹೊಸ ಅಲೆಯಿಂದ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ," ಎಂದು ಕೂಡಾ ತಿಳಿಸಿದ್ದರು.
"ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಮೂರನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯ ನಿರ್ವಹಣೆ ಮಾಡುತ್ತಿದೆ. ವಿಶೇಷವಾಗಿ ಹಲವಾರು ಪ್ರಮುಖ ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದೆ ಎಂಬುವುದನ್ನು ಗಮನಿಸಬೇಕಾಗಿದೆ," ಎಂದು ಹೇಳಿದ್ದರು.
ಜನರ ಸಹಕಾರ ಕೋರಿದ್ದ ಜ್ಯೋತಿರಾದಿತ್ಯ ಸಿಂಧಿಯಾ
"ಪ್ರಪಂಚದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಮ್ಮ ಜಾಗವನ್ನು ನಾವು ಮರಳಿ ಪಡೆಯುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡುತ್ತೇವೆ. ಭಾರತದಲ್ಲಿ ಹಬ್ ಮಾಡಲಾಗುತ್ತದೆ. ಅದರ ಕಾರ್ಯ ನಡೆಯುವವರೆಗೂ ದಯವಿಟ್ಟು ನಮ್ಮೊಂದಿಗೆ ಸಹಕಾರ ನೀಡಿ. ನನ್ನನ್ನು ನಂಬಿರಿ. ನಾನು ನಿಮ್ಮ ಪರವಾಗಿ ಇದ್ಧೇನೆ. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಆದರೆ ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡೋಣ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕು ಹಿನ್ನೆಲೆಯಿಂದಾಗಿ ಲಾಕ್ಡೌನ್ ಆದ ಸಂದರ್ಭದಲ್ಲಿ ಸ್ಥಳೀಯ ವಿಮಾನಗಳನ್ನು ಕೂಡಾ ಸ್ಥಗಿತ ಮಾಡಲಾಗಿತ್ತು. ಕಳೆದ ತಿಂಗಳಿನಿಂದ ಪೂರ್ಣ ಸಾಮರ್ಥ್ಯದಲ್ಲಿ ಕೆಲವು ದೇಶೀಯ ವಿಮಾನಯಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಸ್ಥಗಿತ ಮಾಡಲಾಗಿದ್ದ ದೇಶೀಯ ವಿಮಾನಯಾನವನ್ನು ಎರಡು ತಿಂಗಳಿನ ಬಳಿಕ ಅಂದರೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ಮತ್ತೆ ಆರಂಭ ಮಾಡಲಾಗಿದೆ.
ಕೋವಿಡ್ ವೇಳೆ ನಿರ್ಬಂಧ ಸಡಿಲಿಕೆ ಮಾಡಿ ಗರಿಷ್ಠ 33 ಪ್ರತಿಶತದಷ್ಟು ಕಾರ್ಯ ನಿರ್ವಹಣೆ ಮಾಡಲು ಅನುಮತಿ ನೀಡಲಾಗಿತ್ತು. ಆ ಬಳಿಕ ಕಳೆದ ವರ್ಷ ಡಿಸೆಂಬರ್ನಲ್ಲಿ ಈ ಮಿತಿಯನ್ನು ಶೇಕಡ 80 ಕ್ಕೆ ಏರಿಕೆ ಮಾಡಲಾಯಿತು. ಆ ನಂತರ ದೇಶದಲ್ಲಿ ಕೊರೊನಾ ವೈರಸ್ ಸೋಂಖಿನ ಎರಡನೇ ಅಲೆಯು ಕಾಣಿಸಿಕೊಂಡಿತು. ಈ ವರ್ಷದ ಜೂನ್ನಲ್ಲಿ ಈ ದರವನ್ನು ಮತ್ತೆ ಶೇಕಡ 50 ಕ್ಕೆ ಇಳಿಕೆ ಮಾಡಲಾಗಿದೆ.












Click it and Unblock the Notifications