ಪಾಕ್ ಜೊತೆಗೆ ಶಾಂತಿ ಮಾತುಕತೆ ನಡೆಯಲಿದೆಯೇ?
ಬೆಂಗಳೂರು, ಜನವರಿ 12 : ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆಯನ್ನು ಮುಂದುವರೆಸುವ ಬಗ್ಗೆ ಭಾರತ ಬುಧವಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ.
ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ತನಕ ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜನವರಿ 15ರಂದು ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಲಾಗಿತ್ತು. [ಪಾಕ್ ಜೊತೆ ಶಾಂತಿ ಮಾತುಕತೆ ಇಲ್ಲ]

ಭಾರತದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡಿದೆ. ಸಂಚು ರೂಪಿಸಿದ ಮೂವರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪಾಕಿಸ್ತಾನ ಹೇಳಿದೆ. ಆದ್ದರಿಂದ, ಶಾಂತಿ ಮಾತುಕತೆ ಮುಂದುವರೆಯುವ ಸಾಧ್ಯತೆ ಇದೆ. [ವಾಕಿಟಾಕಿ ಮರೆತು ದಾರಿ ತಪ್ಪಿದ ಉಗ್ರರು!]
ಪಾಕ್ ಜೊತೆ ಮಾತುಕತೆ ನಡೆಸುವ ಬಗ್ಗೆ ಸೋಮವಾರದಿಂದ ನವದೆಹಲಿಯಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ರದ್ದುಗೊಳಿಸಲಾಗಿದೆ ಎಂದು ಸೋಮವಾರ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]
ಉಗ್ರರ ವಿರುದ್ಧ ಪಾಕ್ ತೆಗೆದುಕೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿವೆ ಎಂದು ಅನ್ನಿಸಿದರೆ ಮಾತ್ರ ಭಾರತ ಶಾಂತಿ ಮಾತುಕತೆ ಮುಂದುವರೆಸಲು ನಿರ್ಧರಿಸಿದೆ. ಗೃಹ ಮತ್ತು ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಬುಧವಾರ ನಡೆಯುವ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.












Click it and Unblock the Notifications