ಭಾರತೀಯ ಯೋಧ ಚಂದುಗೆ ಮಾನಸಿಕ ಹಿಂಸೆ ನೀಡಿತೇ ಪಾಕ್ ?
ಆತ ಇಂದು ಇರುವ ಸ್ಥಿತಿ, ಪಾಕಿಸ್ತಾನದಲ್ಲಿ ಆತ ಸೆರೆ ಸಿಕ್ಕ ಅವಧಿಯಲ್ಲಿ ಆತನಿಗೆ ನೀಡಲಾಗಿರುವ ಮಾನಸಿಕ ಹಿಂಸೆಯ ಕತೆಗಳನ್ನು ಬಿಚ್ಚಿಡುತ್ತಿವೆ.
ನವದೆಹಲಿ, ಜನವರಿ 30: ಕಳೆದ ಅಕಸ್ಮಾತ್ತಾಗಿ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ಅಲ್ಲಿನ ಸೈನಿಕರಿಗೆ ಸೆರೆಸಿಕ್ಕಿದ್ದ ಭಾರತೀಯ ಯೋಧ ಚಂದು ಚವಾಣ್ ಅವರನ್ನು ಇತ್ತೀಚೆಗೆ ಪಾಕಿಸ್ತಾನ ಬಿಡುಗಡೆಗೊಳಿಸಿರುವುದು ಸರಿ. ಆದರೆ, ಶತ್ರು ಪಾಳಯದಿಂದ ಪುನರ್ಜನ್ಮ ಹೊರಬಂದಿರುವ ಚಂದು ಈಗ ಹೇಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಮನ ಕರಗುವ ಚಿತ್ರಣ ಸಿಗುತ್ತದೆ.
ನಿಯಮಗಳ ಪ್ರಕಾರ, ಅಕಸ್ಮಾತ್ ಆಗಿ ಗಡಿ ದಾಟಿ ಬಂದ ನೆರೆದೇಶಗಳ ಸೈನಿಕರನ್ನು ವಿಚಾರಣೆ ನಡೆಸಿ ಕೆಲವಾರು ದಿನಗಳ ನಂತರ ಅವರ ಮಾತೃದೇಶಕ್ಕೆ ಹಸ್ತಾಂತರಿಸಬೇಕು. ಆದರೆ, ಚಂದು ವಿಚಾರದಲ್ಲಿ ಪಾಕಿಸ್ತಾನ ಹಾಗೆ ನಡೆದುಕೊಂಡಿಲ್ಲ ಎಂದು ಭಾರತೀಯ ಸೇನೆಯ ಕೆಲ ಅಧಿಕಾರಿಗಳು ತಿಳಿಸಿದ್ದಾರೆ. 22 ವರ್ಷ ವಯಸ್ಸಿನ ಚಂದುವನ್ನು ಬಿಡುಗಡೆ ಮಾಡಲು ಸುಮಾರು 4 ತಿಂಗಳ ಕಾಲಾವಕಾಶವನ್ನು ಪಾಕಿಸ್ತಾನ ತಗೆದುಕೊಂಡಿದೆ. ಆದರೆ, ಆ ಅವಧಿಯಲ್ಲಿ ಅವರನ್ನು ನಡೆಸಿಕೊಂಡಿರುವ ರೀತಿಗಳಿಂದಾಗಿ ಆತನ ಮಾನಸಿಕ ಸಮತೋಲವನ್ನೇ ಹಾಳಾಗಿದೆ ಎಂದಿದ್ದಾರೆ.[ಶತ್ರು ಪಾಳಯದಿಂದ ವಾಪಸ್ ಬಂದ ಸೈನಿಕರಿಗೆ ಸಿಗುವ ಸ್ವಾಗತ ಎಂಥದ್ದು?]
ಈ ಬಗ್ಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ''ಜನವರಿ 21ರಂದು ಪಾಕಿಸ್ತಾನದಿಂದ ಬಿಡುಗಡೆಗೊಂಡು ಭಾರತ ಪ್ರವೇಶಿಸಿರುವ ಚಂದುಗೆ ನಡೆಯಲೂ ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿದ್ದ. ಆತನ ಮೇಲೆ ಮಾನಸಿಕ ಕಿರುಕುಳವಾಗಿರುವುದು ಸ್ಪಷ್ಟವಾಗಿದ್ದು ಊಟ,ನಿದ್ರೆಗಳಿಲ್ಲದೆ ಆತ ಭಾರೀ ಸೊರಗಿದ್ದ. ಅಷ್ಟೇ ಅಲ್ಲ, ಸರಿಯಾಗಿ ಮಾತನಾಡಲೂ ಬರುತ್ತಿರಲಿಲ್ಲ. ಅದೆಲ್ಲಾ ಒಂದೆಡೆಯಾದರೆ, ಆತ ತಾನು ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದೇನೆ ಎಂಬುದನ್ನು ಅರಿಯಲು ಸುಮಾರು ಗಂಟೆಗಳ ನಂತರ ಆತನ ಅರಿವಿಗೆ ಬಂತು'' ಎಂದು ನುಡಿದಿದ್ದಾರೆ.
ಆತನ ದೇಹವನ್ನು ಪರೀಕ್ಷಿಸಲಾಗಿದ್ದು ಕಣ್ಣಿಗೆ ಕಾಣುವಂಥ ಯಾವುದೇ ಗಾಯಗಳು ಆತನ ಮೈಮೇಲೆ ಆಗಿಲ್ಲ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು, ''ಚಂದು ಮಾನಸಿಕ ಆಘಾತಕ್ಕೊಳಗಾಗಿರುವುದರಿಂದ ಆತನ ಬಾಯಿಂದ ಮಾತುಗಳು ಸ್ಪಷ್ಟವಾಗಿ ಹೊರಡುತ್ತಿಲ್ಲ. ತಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದರ ಅರಿವೂ ಆತನಿಗೆ ಆಗುತ್ತಿಲ್ಲ'' ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಚಂದು ಅವರು, ಗಡಿ ನಿಯಂತ್ರಣ ರೇಖೆಯ ಪೂಂಚ್ ಸೆಕ್ಟರ್ ನಲ್ಲಿ ಕಾವಲು ಕಾಯುತ್ತಿದ್ದಾಗ ಚವಾಣ್ ಅವರು, ಕಳೆದ ವರ್ಷ ಸೆಪ್ಟಂಬರ್ 29ರಂದು ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ್ದರು. ತಕ್ಕಮಟ್ಟಿಗೆ ಚೇತರಿಸಿಕೊಂಡಿರುವ ಈತನನ್ನು ಶೀಘ್ರದಲ್ಲೇ ವಿಚಾರಣೆಗೊಳಪಡಿಸಲಾಗುವುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಚಂದು ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲದ ಕಾರಣದಿಂದಾಗಿ ಆತನನ್ನು ಅವರ ಊರಿಗೆ ಇನ್ನೂ ಕಳುಹಿಸಲಾಗಿಲ್ಲ.