ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ: ಕವಚ್ 4.0 ಪರೀಕ್ಷೆ ಸಕ್ಸಸ್, ಏನಿದು?
Indian Railways: ಭಾರತೀಯ ರೈಲ್ವೆಯ ಸ್ವದೇಶಿ ಸುರಕ್ಷತಾ ತಂತ್ರಜ್ಞಾನ 'ಕವಚ್ 4.0' ಅನ್ನು ದೆಹಲಿ-ಹೌರಾ ಮಾರ್ಗದಲ್ಲಿ 160 ಕಿಲೋ ಮೀಟರ್ ವೇಗದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಹಾಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜಗಳಿವೆ ಹಾಗೂ ವಿಶೇಷತೆಗಳೇನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ರೈಲ್ವೆ ವಲಯದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮತ್ತೊಂದು ಬೃಹತ್ ಮೈಲಿಗಲ್ಲು ದಾಖಲಾಗಿದೆ. ರೈಲುಗಳು ಮುಖಾಮುಖಿ ಅಥವಾ ಹಿಂಬದಿಯಿಂದ ಡಿಕ್ಕಿಯಾಗುವುದನ್ನು ಸಂಪೂರ್ಣವಾಗಿ ತಡೆಯುವ ಸ್ವದೇಶಿ ತಂತ್ರಜ್ಞಾನದ ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ (ATP) ವ್ಯವಸ್ಥೆಯಾದ 'ಕವಚ್'ನ ಅತ್ಯಾಧುನಿಕ ಆವೃತ್ತಿ ಕವಚ್ 4.0 ಪ್ರಾಯೋಗಿಕ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ದೆಹಲಿ-ಹೌರಾ ಮುಖ್ಯ ರೈಲು ಮಾರ್ಗದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಕಾನ್ಪುರ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮೂಲಕ ಈ ಪ್ರಯೋಗವನ್ನು ನಡೆಸಲಾಗಿದೆ.

ಉತ್ತರ ಪ್ರದೇಶದ ಎನ್ಸಿಆರ್ ವಲಯಕ್ಕೆ ಒಳಪಡುವ ಚಿಪಿಯಾನಾ ಬುಜುರ್ಗ್ ಮತ್ತು ತುಂಡ್ಲಾ ನಡುವಿನ 175 ಕಿಲೋಮೀಟರ್ ಉದ್ದದ ಅತ್ಯಂತ ಪ್ರಮುಖ ಮತ್ತು ಜನನಿಬಿಡ ರೈಲ್ವೆ ಸೆಕ್ಷನ್ನಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಈ ಪ್ರಾಯೋಗಿಕ ಚಾಲನೆಯಲ್ಲಿ ಕಾನ್ಪುರ ಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ಗಂಟೆಗೆ ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಓಡಿಸಲಾಯಿತು. ಭಾರಿ ವೇಗದಲ್ಲೂ 'ಕವಚ್ 4.0' ತಂತ್ರಜ್ಞಾನವು ಯಾವುದೇ ಅಡೆತಡೆಗಳಿಲ್ಲದೆ, ಸ್ವಯಂಚಾಲಿತವಾಗಿ ರೈಲಿನ ಸುರಕ್ಷತೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಏನಿದು 'ಕವಚ್ 4.0' ಹಾಗೂ ಇದರ ವಿಶೇಷತೆಗಳೇನು?
ರೈಲ್ವೆ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾದ ಆರ್ಡಿಎಸ್ಒ (RDSO) ಅಭಿವೃದ್ಧಿಪಡಿಸಿರುವ 'ಕವಚ್ 4.0' ಹಿಂದಿನ ಆವೃತ್ತಿಗಳಿಗಿಂತ ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಕುರಿತ ಇನ್ನೂ ಹೆಚ್ಚಿನ ಅಂಶಗಳನ್ನು ಕೆಳಗೆ ನೀಡಲಾಗಿದೆ ಕಣ್ಣಾಡಿಸ
* ಸಿಗ್ನಲ್ ಜಂಪಿಂಗ್ ತಡೆ (SPAD): ಲೋಕೋ ಪೈಲಟ್ (ರೈಲು ಚಾಲಕ) ಯಾವುದೇ ಕಾರಣದಿಂದ ಕೆಂಪು ಸಿಗ್ನಲ್ ಅನ್ನು ಗಮನಿಸದೆ ರೈಲನ್ನು ಮುಂದೆ ಚಲಾಯಿಸಿದರೆ, ಈ ತಂತ್ರಜ್ಞಾನವು ತಕ್ಷಣವೇ ಕಾರ್ಯಪ್ರವೃತ್ತವಾಗಿ ರೈಲನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.
* ವೇಗದ ನಿಯಂತ್ರಣ: ತಿರುವುಗಳು ಅಥವಾ ಹಳಿ ದುರಸ್ತಿ ಕಾರ್ಯ ನಡೆಯುವ ನಿಗದಿತ ಸ್ಥಳಗಳಲ್ಲಿ ರೈಲಿನ ವೇಗವನ್ನು ತಾನಾಗಿಯೇ ಇಳಿಸುವ ಸಾಮರ್ಥ್ಯ ಇದಕ್ಕೆ ಇದೆ.
* ಮುಖಾಮುಖಿ ಡಿಕ್ಕಿ ತಡೆ: ಒಂದೇ ಹಳಿಯಲ್ಲಿ ಎರಡು ರೈಲುಗಳು ಎದುರುಬದುರಾಗಿ ಬಂದರೆ, ನಿರ್ದಿಷ್ಟ ದೂರದಲ್ಲೇ ಬ್ರೇಕ್ ಅನ್ವಯಿಸಿ ಭೀಕರ ಅಪಘಾತಗಳನ್ನು ತಪ್ಪಿಸುತ್ತದೆ.
* ಪ್ರತಿಕೂಲ ಹವಾಮಾನದಲ್ಲೂ ಸಹಕಾರಿ: ದಟ್ಟವಾದ ಮಂಜು ಅಥವಾ ಭಾರಿ ಮಳೆಯಂತಹ ಸಂದರ್ಭದಲ್ಲಿ ಸಿಗ್ನಲ್ಗಳು ಕಾಣಿಸದಿದ್ದರೂ, ಇಂಜಿನ್ ಒಳಗಿನ ಪರದೆಯ ಮೇಲೆ ಸಿಗ್ನಲ್ ವಿವರಗಳನ್ನು ಚಾಲಕನಿಗೆ ಸ್ಪಷ್ಟವಾಗಿ ತೋರಿಸುತ್ತದೆ.
ಹಂತ-ಹಂತವಾಗಿ ದೇಶಾದ್ಯಂತ ವಿಸ್ತರಣೆ
ಈ ಯಶಸ್ವಿ ಪರೀಕ್ಷೆಯು ಭಾರತೀಯ ರೈಲ್ವೆ ಇಲಾಖೆಗೆ ದೊಡ್ಡ ಬಲ ನೀಡಿದೆ. ದೇಶದ ಅತಿ ಹೆಚ್ಚು ನಿಬಿಡತೆ ಹೊಂದಿರುವ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳಲ್ಲಿ ಹಂತ-ಹಂತವಾಗಿ ಈ ಕವಚ್ 4.0 ವ್ಯವಸ್ಥೆಯನ್ನು ಅಳವಡಿಸಲು ರೈಲ್ವೆ ಸಚಿವಾಲಯ ಈಗಾಗಲೇ ಯೋಜಿಸಿದೆ. ಮುಂಬರುವ ದಿನಗಳಲ್ಲಿ ದೇಶದ ಪ್ರತಿ ಲೋಕೋ ಮೋಟಿವ್ (ಇಂಜಿನ್) ಮತ್ತು ಹಳಿಗಳ ಜಾಲಕ್ಕೆ ಕವಚ್ ಸುರಕ್ಷತಾ ಕವಚವನ್ನು ಅಳವಡಿಸುವ ಮೂಲಕ ಭಾರತೀಯ ರೈಲ್ವೆಯನ್ನು 'ಶೂನ್ಯ ಅಪಘಾತ' (Zero Accident) ವಲಯವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಯಶಸ್ವಿ ಪ್ರಯೋಗಕ್ಕಾಗಿ ರೈಲ್ವೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ತಂತ್ರಜ್ಞರ ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.












Click it and Unblock the Notifications