ಕೊರೊನಾ ರೋಗಿಗಳ ಜೀವ ಉಳಿಸಲು 'ಆಕ್ಸಿಜನ್ ಎಕ್ಸ್ಪ್ರೆಸ್' ರೈಲುಗಳ ಆರಂಭ
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ವೇಗ ಹೆಚ್ಚುತ್ತಿದ್ದಂತೆ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ಸೃಷ್ಟಿಯಾಗುತ್ತಿದೆ. ಲಿಕ್ವಿಡ್ ಆಕ್ಸಿಜನ್ ಕೊರತೆ ನೀಗಿಸುವುದಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ.
ದೇಶದ ವಿವಿಧ ನಗರಗಳಿಗೆ ಆಮ್ಲಜನಕ(ಆಕ್ಸಿಜನ್) ಮತ್ತು ದ್ರವರೂಪದ ಆಮ್ಲಜನಕ(ಲಿಕ್ವಿಡ್ ಆಕ್ಸಿಜನ್) ಸರಬರಾಜು ಮಾಡುವುದಕ್ಕೆ ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಭಾನುವಾರ ಘೋಷಿಸಿದೆ.
ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್ಡೆಸಿವಿರ್ ಎಲ್ಲಿ ಸಿಗುತ್ತೆ?
ವಿಜಾಗ್, ಜಮ್ಶೆಡ್ಪುರ್, ರೌರ್ಖೇಲಾ ಮತ್ತು ಬೋಕಾರೋ ಪ್ರದೇಶಗಳಲ್ಲಿ ಆಕ್ಸಿಜನ್ ಮತ್ತು ಲಿಕ್ವಿಡ್ ಆಕ್ಸಿಜನ್ ಅನ್ನು ತುಂಬಿಸಿಕೊಂಡು ಬರುವುದಕ್ಕಾಗಿ ಖಾಲಿ ಟ್ಯಾಂಕರ್ ಕಳುಹಿಸಲಾಗಿದೆ. ಮಹಾರಾಷ್ಟ್ರ ಮುಂಬೈನ ಕಾಳಂಬೋಲಿ ಮತ್ತು ಬಯೋಸರ್ ರೈಲ್ವೆ ನಿಲ್ದಾಣದಿಂದ ಖಾಲಿ ಟ್ಯಾಂಕರ್ ಅನ್ನು ವಿಶೇಷ ರೈಲುಗಳ ಮೂಲಕ ರವಾನಿಸಲಾಗಿದೆ.

ದೇಶದಲ್ಲಿ ಕೊರೊನಾವೈರಸ್ ಅಟ್ಟಹಾಸ:
ಕೊರೊನಾವೈರಸ್ ಸೋಂಕಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳಲ್ಲಿ 2,61,500 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 1501 ಮಂದಿ ಪ್ರಾಣ ಬಿಟ್ಟಿದ್ದು, 1,38,423 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಈವರೆಗೂ 1,28,09,643 ಸೋಂಕಿತರು ಗುಣಮುಖರಾಗಿದ್ದು, ಸಾವಿನ ಸಂಖ್ಯೆ 1,77,150ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 18,01,316 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.











Click it and Unblock the Notifications