ರಾಷ್ಟ್ರಪತಿ ಚುನಾವಣೆ: ಇವರೇ ವಿಪಕ್ಷಗಳ ಒಮ್ಮತದ ಅಭ್ಯರ್ಥಿ?
ನವದೆಹಲಿ, ಜೂನ್ 13: ರಾಜ್ಯಸಭಾ ಚುನಾವಣೆಯ ನಂತರ ಈಗ ದೇಶದ ಮೊದಲ ಪ್ರಜೆ ಯಾರೆಂದು ನಿರ್ಧರಿಸುವ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಈ ಸಂಬಂಧ ಕಸರತ್ತನ್ನು ಆರಂಭಿಸಿದೆ.
ರಾಷ್ಟ್ರಪತಿ ಚುನಾವಣೆ ಗೆಲ್ಲಲು ರಾಜ್ಯಸಭೆಯ ಸೀಟು ಕೂಡಾ ಲೆಕ್ಕಾಚಾರಕ್ಕೆ ಬರುವುದರಿಂದ, ಇತ್ತೀಚೆಗೆ ನಡೆದ ಚುನಾವಣೆಯಿಂದ ಎನ್ಡಿಎ ಮೈತ್ರಿಕೂಟಕ್ಕೆ ಕೊಂಚ ಮುನ್ನಡೆಯಾಗಿದೆ. ಪ್ರಾದೇಶಿಕ ಪಕ್ಷಗಳ ಪಾತ್ರ ನಿರ್ಣಾಯಕವಾಗಿರುವುದರಿಂದ ರಾಜಕೀಯ ಚಟುವಟಿಕೆ ಗರಿಗೆದರಲಾರಂಭಿಸಿದೆ.
ಎನ್ಸಿಪಿ ಪಟ್ಟಿ ಮಾಡಿದ ಮೋದಿ ಸರ್ಕಾರದ 8 ನ್ಯೂನ್ಯತೆಗಳು
ಜೂನ್ 15ರಂದು ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿರುವ ಮಮತಾ ಬ್ಯಾನರ್ಜಿ ಮಹತ್ವದ ಸಭೆಯನ್ನು ಕರೆದಿದ್ದಾರೆ. ಎನ್ಡಿಎ ಮೈತ್ರಿಕೂಟದಿಂದ ಹೊರತಾದ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಈಗಾಗಲೇ, ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಮೈತ್ರಿಕೂಟ ರಚನೆಗೆ ಸಂಬಂಧಿಸಿದಂತೆ ತಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷಗಳು ಒಮ್ಮತದಿಂದ ರಾಷ್ಟ್ರಪತಿಗೆ ಹುದ್ದೆಗೆ ಹಿರಿಯ ಮುಖಂಡರೊಬ್ಬರ ಹೆಸರನ್ನು ಅಂತಿಮಗೊಳಿಸಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
Oneindia Explainer: ಹೊಸ ರಾಷ್ಟ್ರಪತಿ ಆಯ್ಕೆ ಹೇಗೆ? ಏನಿದು electoral-college?
ಎನ್ಡಿಎ ಮೈತ್ರಿಕೂಟ ಶೇ. 48ರಷ್ಟು ಮತಗಳನ್ನು ಹೊಂದಿದೆ
ಸದ್ಯದ ಸೀಟಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಶೇ. 48ರಷ್ಟು ಮತಗಳನ್ನು ಹೊಂದಿದೆ. ಜೊತೆಗೆ, ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದ ಪ್ರಾದೇಶಿಕ ಪಕ್ಷಗಳ ಬೆಂಬಲ ಬಿಜೆಪಿಗೆ ಸಿಗುವ ಸಾಧ್ಯತೆಯಿದೆ. ಅದರಲ್ಲೂ ಪ್ರಮುಖವಾಗಿ, ವೈಎಸ್ಆರ್ ಕಾಂಗ್ರೆಸ್, ಬಿಜು ಜನತಾದಳ, ಎಐಎಡಿಎಂಕೆ ಮುಂತಾದ ಪಕ್ಷಗಳು ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸುವ ಸಾಧ್ಯತೆ ಇರುವುದರಿಂದ ಮೇಲ್ನೋಟಕ್ಕೆ ಬಿಜೆಪಿಯ ಅಭ್ಯರ್ಥಿ ಸುಲಭವಾಗಿ ಜಯ ಸಾಧಿಸಬಹುದು.
ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್
ವಿರೋಧ ಪಕ್ಷಗಳು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಕೆಲವೊಂದು ಆಂಗ್ಲ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸುತ್ತಿವೆ. ಆದರೆ, ಈ ಸಂಬಂಧ ಯಾವುದೇ ಅಧಿಕೃತ ಹೇಳಿಕೆಗಳು, ವಿರೋಧ ಪಕ್ಷದ ನಾಯಕರುಗಳಿಂದ ಬಂದಿಲ್ಲ. ಈ ಸಂಬಂಧ, ಕಳೆದ ವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು.
ಖರ್ಗೆಯವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು
ಯುಪಿಎ ಮೈತ್ರಿಕೂಟದ ಮುಖ್ಯಸ್ಥೆ ಸೋನಿಯಾ ಗಾಂಧಿ ಸೂಚನೆಯಂತೆ ಖರ್ಗೆಯವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು ಎಂಬ ಸುದ್ದಿಗಳಿವೆ. ವಿರೋಧ ಪಕ್ಷದ ಬಹುತೇಕ ಎಲ್ಲಾ ನಾಯಕರುಗಳು ಶರದ್ ಪವಾರ್ ಅವರ ಉಮೇದುವಾರಿಕೆಯನ್ನು ವಿರೋಧಿಸಲಾರರು. ಈ ವಿಚಾರದಲ್ಲಿ ಹಲವು ಸುತ್ತಿನ ಸರಣಿ ಸಭೆಗಳು ನಡೆದಿವೆ. ಆದರೆ, ಈ ಕುರಿತು ಖುದ್ದು ಶರದ್ ಪವಾರ್ ಆಗಲಿ, ಎನ್ಸಿಪಿ ಪಕ್ಷವಾಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥ ನಾನಾ ಪತೋಲ್
ಕಾಂಗ್ರೆಸ್, ಶಿವಸೇನೆ, ಟಿಎಂಸಿ, ಡಿಎಂಕೆ, ಆಮ್ ಆದ್ಮಿ ಪಕ್ಷಗಳು, ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ತಮ್ಮ ಸಹಮತವನ್ನು ತೋರಲಿವೆ ಎಂದು ಹೇಳಲಾಗುತ್ತಿದೆ. "ರಾಷ್ಟ್ರಪತಿ ಹುದ್ದೆಗೆ ಶರದ್ ಪವಾರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ, ನಮ್ಮ ಬೆಂಬಲವಿರಲಿದೆ"ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥ ನಾನಾ ಪತೋಲ್ ಹೇಳಿದ್ದಾರೆಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ. ಆದರೆ, ರಾಜಕೀಯವನ್ನು ಅರಿದು ಕುಡಿದಿರುವ ಶರದ್ ಪವಾರ್, ಗೆಲುವು ನಿಶ್ಚಿತ ಎಂದಾದರೆ ಮಾತ್ರ ಉಮೇದುವಾರಿಕೆ ಸಲ್ಲಿಸಬಹುದು ಎನ್ನುವ ಮಾತೂ ಕೇಳಿ ಬರುತ್ತಿದೆ.