ಗಡಿಯಾಚೆಗಿನ ಕಾರ್ಯಾಚರಣೆ ನಡೆದಿಲ್ಲ: ಭಾರತೀಯ ಸೇನೆ
ಕಾಶ್ಮೀರ, ಸೆಪ್ಟೆಂಬರ್ 22: ಸೆಪ್ಟೆಂಬರ್ 20, 21ರಂದು ಭಾರತೀಯ ಸೇನೆಯಿಂದ ಗಡಿಯಾಚೆಗಿನ ಕಾರ್ಯಾಚರಣೆ ನಡೆದು, ಇಪ್ಪತ್ತು ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿ, ವೆಬ್ ಸೈಟ್ ಒಂದರಲ್ಲಿ ಸುದ್ದಿಯಾಗಿಯೂ ಪ್ರಕಟವಾಗಿತ್ತು. ಆದರೆ ಅಂಥ ಯಾವುದೇ ಕಾರ್ಯಾಚರಣೆಯನ್ನು ಸೇನೆ ತಳ್ಳಿಹಾಕಿದೆ ಎಂದು ಮೂಲಗಳು ಒನ್ಇಂಡಿಯಾಗೆ ತಿಳಿಸಿವೆ.
ಸರಕಾರದ ಉನ್ನತ ಮೂಲಗಳೂ ಅಂಥ ಯಾವುದೇ ಕಾರ್ಯಾಚರಣೆಯನ್ನು ನಿರಾಕರಿಸಿವೆ. ಅಂಥ ಯಾವುದೇ ಕಾರ್ಯಾಚರಣೆ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿವೆ. ವೆಬ್ ಸೈಟ್ ನ ಮಾಹಿತಿ ಪ್ರಕಾರ ಹದಿನೆಂಟರಿಂದ ಇಪ್ಪತ್ತರಷ್ಟಿದ್ದ ಸೈನಿಕರ ಪಡೆ ಮಿಲಿಟರಿ ಹೆಲಿಕಾಪ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಹೋಗಿ ಇಪ್ಪತ್ತು ಭಯೋತ್ಪಾದಕರನ್ನು ಕೊಂದಿದೆ. ಇನ್ನೂರರಷ್ಟು ಮಂದಿ ಗಾಯಗೊಂಡಿದ್ದಾರೆ.[ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಇಪ್ಪತ್ತು ಉಗ್ರರ ಹತ್ಯೆ?]
ಪಾಕಿಸ್ತಾನ ಉಗ್ರಗಾಮಿಗಳು ಉರಿ ದಾಳಿ ನಡೆಸಿದರ ಪ್ರತೀಕಾರವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸಹ ತಿಳಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇದೇ ವರದಿಯ ಬಗ್ಗೆ ಬಿಸಿಬಿಸಿ ಚರ್ಚೆ ಸಹ ನಡೆದಿತ್ತು. ವಿಷಯ ತಜ್ಞರು, ಕೆಲವು ಪತ್ರಕರ್ತರು, ಇಂಥ ಯಾವುದೇ ಮಾಹಿತಿ ಇಲ್ಲ ಎಂದು ಖಾತ್ರಿ ಪಡಿಸಿದ್ದಾರೆ.
ಸೇನೆ ಇಂಥ ಯಾವುದೇ ದಾಳಿಯನ್ನು ನಡೆಸಿಲ್ಲ ಎಂದು ತಿಳಿಸ್ರಿವುದಾಗಿ ರಾಷ್ಟ್ರೀಯ ರಕ್ಷಣಾ ವಿಶ್ಲೇಷಕ ನಿತಿನ್ ಗೋಖಲೆ ಅವರು ಟ್ವೀಟರ್ ನಲ್ಲಿ ಹಾಕಿದ್ದಾರೆ. ಇನ್ನೂ ಮುಂಡುವರಿದು, ಇಂಥ ಕಾರ್ಯಾಚರಣೆ ಸಾಧ್ಯವಾಗಿದ್ದರೆ ಇಷ್ಟು ವರ್ಷ ಯಾಕೆ ನಡೆಸಿರಲಿಲ್ಲ ಎಂದು ಕೂಡ ಪ್ರಶ್ನಿಸಿದ್ದಾರೆ.[ದೇಶದ ಒಳಗೆ ನುಸುಳಲು ಯತ್ನಿಸುತ್ತಿದ್ದ ಪಾಕ್ ನ 10 ಉಗ್ರರ ಹತ್ಯೆ]
ಆದರೆ, ಸರಕಾರದಿಂದ ಗಡಿಯಾಚೆಗಿನ ಸೇನಾ ಕಾರ್ಯಾಚರಣೆ ವರದಿಯನ್ನು ಈ ವರೆಗೂ ನಿರಾಕರಿಸಿಲ್ಲ. ಆದರೆ ಸರಕಾರದ ಅಧಿಕಾರಿಗಳು 'ಇಂಥ ಯಾವುದೇ ದಾಳಿ ನಡೆದ ಬಗ್ಗೆ ಖಾತ್ರಿ ಇಲ್ಲ" ಅಂತಲೇ ಹೇಳುತ್ತಿದ್ದಾರೆ.