ಅಗತ್ಯಬಿದ್ದರೆ ಮತ್ತೆ ಸರ್ಜಿಕಲ್ ದಾಳಿ: ಸೇನೆ ಸ್ಪಷ್ಟನೆ
ನವದೆಹಲಿ, ಅಕ್ಟೋಬರ್, 15: ಉಗ್ರರ ಉಪಟಳ ಹೆಚ್ಚಾದಲ್ಲಿ ಮತ್ತೊಮ್ಮೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಲಾಗುವುದು ಎಂದು ಭಾರತೀಯ ಸೇನೆ ಉನ್ನತಾಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿಗೆ ಶುಕ್ರವಾರ (ಅ.14) ತಿಳಿಸಿದ್ದಾರೆ.
ಸೆ.29ರಂದು ಸರ್ಜಿಕಲ್ ದಾಳಿ ನಡೆಸಿರುವ ಬಗ್ಗೆ ಪುರಾವೆಗನ್ನು ಒದಗಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಭಾರತ ಸೇನೆ ಪ್ರಥಮ ಬಾರಿಗೆ ದಾಳಿ ಕುರಿತ ಮಾಹಿತಿಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ. ['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]
ಸರ್ಜಿಕಲ್ ದಾಳಿ ನಡೆದ ನಂತರ ಇದೇ ಮೊದಲ ಬಾರಿಗೆ ಭಾರತ ಸೇನೆ ಡಿಜಿಎಂಒ ರಣಬೀರ್ ಸಿಂಗ್ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
"ಭಾರತೀಯ ಸೇನೆ ವೈಸ್ ಚೀಫ್ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರೇ ಸ್ವಯಂ ಆಗಿ ಸಂಸದೀಯ ಸ್ಥಾಯಿ ಸಮಿತಿಗೆ ಸರ್ಜಿಕಲ್ ದಾಳಿ ಕುರಿತು ಮಾಹಿತಿ ನೀಡಿದ್ದಾರೆ" ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ತಿಳಿಸಿದರು.[ಉಗ್ರರ ದಾಳಿಯಲ್ಲಿ ಯೋಧ ಸಾವು, ಎಂಟು ಮಂದಿಗೆ ಗಾಯ]
"ಗಡಿರೇಖೆಯ ಕೆಲವು ಪ್ರದೇಶಗಳಲ್ಲಿ ಪಾಕಿಸ್ತಾನದ ಕೆಲವು ಉಗ್ರರು ಬೀಡುಬಿಟ್ಟಿದ್ದು, ಭಾರತದೊಳಗೆ ನುಸುಳಲು ಯತ್ನಿಸಿದ್ದರಿಂದ ದಾಳಿ ಮಾಡಬೇಕಾದ ಅನಿವಾರ್ಯತೆ ಎದುರಾಯಿತು" ಎಂದು ಅವರು ತಿಳಿಸಿದ್ದಾರೆ.
"ಉಗ್ರರ ಉಪಟಳ ಹೆಚ್ಚಾದರೆ ಅಗತ್ಯ ಬಿದ್ದಲ್ಲಿ ಮತ್ತೊಮ್ಮೆ ದಾಳಿ ಮಾಡಲು ಸಿದ್ದರಾಗಿದ್ದೇವೆ" ಎಂದು ಭಾರತದ ಡಿಜಿಎಂಒ ರಣಬೀರ್ ಸಿಂಗ್ ಪಾಕಿಸ್ತಾನದ ಡಿಜಿಎಂಒಗೆ ಎಚ್ಚರಿಕೆ ನೀಡಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ರಾವತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಾಳಿ ಕುರಿತು ಮಾಹಿತಿ ನೀಡುವಂತೆ ಕಾಂಗ್ರೆಸ್ ಸಂಸದರು ಒತ್ತಾಯಿಸಿದ್ದರಿಂದ ರಾವತ್ ಅವರೇ ಸ್ವತಃ ದಾಳಿಯ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಸರ್ಜಿಕಲ್ ಆಪರೇಷನ್ ಹೇಗೆ ನಡೆಯಿತು. ದಾಳಿಯಿಂದ ಉಗ್ರರ ಶಿಬಿರಗಳಿಗೆ ಎಷ್ಟು ನಷ್ಟ ಸಂಭವಿಸಿದೆ ಎಂಬ ಮಾಹಿತಿಯನ್ನೂ ಸಹ ತಿಳಿಸಲಾಗಿದ್ದು, ದಾಳಿ ನಂತರ ಭಾರತ ಸೇನೆಯ ಎಲ್ಲ ಸೈನಿಕರು ಕ್ಷೇಮವಾಗಿ ಹಿಂತುರಿಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಠಾಣ್ ಕೋಟ್ ವಾಯು ನೆಲೆ ಮೇಲಿನ ದಾಳಿ, ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಹೆಚ್ಚು ಸಶಕ್ತರಾಗಿದ್ದರು, ಇದು ದೇಶಕ್ಕೆ ಹೆಚ್ಚು ಮಾರಕ ಎಂದು ಪರಿಗಣಿಸಿ ಸರ್ಜಿಕಲ್ ದಾಳಿಗೆ ಸಿದ್ಧತೆ ನಡೆಸಲಾಗಿತ್ತು ಎಂದು ರಾವತ್ ತಿಳಿಸಿದರು.