India Weather: ಭಾರತದ ಹವಾಮಾನ ವರದಿ- ಏಪ್ರಿಲ್ 18ರ ನಂತರ ದೆಹಲಿ ಸೇರಿದಂತೆ ಹಲವೆಡೆ ಮಳೆ ಮುನ್ಸೂಚನೆ
ದೇಶದಲ್ಲಿ ಈಗ ಬೇಸಿಗೆ ಬಿಸಿಲಿನೊಂದಿಗೆ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಮತ್ತೆ ಬಿಸಿಲಿನ ಶಾಖ ಹೆಚ್ಚಾಗಲು ಪ್ರಾರಂಭಿಸಿದೆ. ಹಾಗಾದರೆ ದೇಶದ ಯಾವ ಭಾಗದಲ್ಲಿ ಮಳೆಯಾಗುವುದು? ಯಾವ ಭಾಗದಲ್ಲಿ ಹಿಮಪಾತವಾಗಲಿದೆ? ಯಾವ ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಲಿದೆ ಎನ್ನುವ ಸಂಪೂರ್ಣ ವರದಿ ಇಲ್ಲಿದೆ..
ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಮಧ್ಯ ಭಾರತದ ಹಲವು ಪ್ರದೇಶಗಳಲ್ಲಿ ಮುಂದಿನ 5 ದಿನಗಳವರೆಗೆ ಸುಡುವ ಬಿಸಿಲು ಮುಂದುವರಿಯಲಿದೆ. ಇಲ್ಲಿ ತಾಪಮಾನ ಎಂದಿಗಿಂತ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಬಹುದು. ಪ್ರಸ್ತುತ ದೆಹಲಿಯಲ್ಲಿ ಬಿಸಿ ಗಾಳಿ ಬಲವಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಇದರಿಂದ ಪರಿಹಾರ ಸಿಗುವ ಸಾಧ್ಯತೆ ಇಲ್ಲ.

ಏಪ್ರಿಲ್ 16ರಿಂದ ಪಶ್ಚಿಮದ ವಾಯುವ್ಯ ವಾಯುಭಾರ ಕುಸಿತವು ಸಕ್ರಿಯಗೊಳ್ಳುವ ಸಾಧ್ಯತೆಯಿದೆ. ಇದು ಏಪ್ರಿಲ್ 18-19 ರ ನಡುವೆ ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ಗುಡುಗು, ಬಲವಾದ ಗಾಳಿಯೊಂದಿಗೆ ಮಳೆ ತರಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ದೆಹಲಿ ಹವಾಮಾನ ವರದಿ
ದೆಹಲಿಯಲ್ಲಿ ಪ್ರಸ್ತುತ ಶಾಖದಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಇಲ್ಲ. ಆದರೆ ಏಪ್ರಿಲ್ 16ರಿಂದ ಪಶ್ಚಿಮದ ಮಳೆ ಮೋಡಗಳು ಸಕ್ರಿಯಗೊಳ್ಳುವ ನಿರೀಕ್ಷೆಯಿದ್ದು, ಏಪ್ರಿಲ್ 18-19ರ ನಡುವೆ ದೆಹಲಿ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಬಲವಾದ ಗಾಳಿ ಮತ್ತು ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ.

ರಾಜಸ್ಥಾನದಲ್ಲಿ ಬಿಸಿಗಾಳಿ ಅಬ್ಬರ
ಇತ್ತ ರಾಜಸ್ಥಾನದ ಗಡಿ ಪ್ರದೇಶಗಳಾದ ಜೈಸಲ್ಮೇರ್ ಮತ್ತು ಬಾರ್ಮರ್ಗಳಲ್ಲಿ ತಾಪಮಾನ ಹೆಚ್ಚಾಗಿದೆ. ಇಲ್ಲಿ ಹಗಲು ಮಾತ್ರವಲ್ಲದೆ ರಾತ್ರಿಗಳು ಸಹ ಜನರನ್ನು ಸುಡುತ್ತಿವೆ. ಕಳೆದ 24 ಗಂಟೆಗಳಲ್ಲಿ ಬಾರ್ಮರ್ನ ತಾಪಮಾನ 44 ಡಿಗ್ರಿ ಸೆಲ್ಸಿಯಸ್ಗೆ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚಾಗಿದೆ. ಏಪ್ರಿಲ್ 15-17 ರ ಹೊತ್ತಿಗೆ ತಾಪಮಾನ 45-46 ಡಿಗ್ರಿಗಳನ್ನು ತಲುಪಬಹುದು ಎನನ್ಲಾಗಿದೆ. ಈ ಭಾಗದಲ್ಲಿ ಹವಾಮಾನ ಇಲಾಖೆಯು ಶಾಖದ ಅಲೆಯ ಬಗ್ಗೆ ಹಳದಿ ಎಚ್ಚರಿಕೆಯನ್ನು ನೀಡಿದೆ.
ಯುಪಿ ಮತ್ತು ಮಧ್ಯ ಭಾರತದ ಹವಾಮಾನ ಸ್ಥಿತಿ
ಇನ್ನೂ ಉತ್ತರ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಸದ್ಯಕ್ಕೆ ಬಿಸಿ ಮತ್ತು ಶುಷ್ಕ ಹವಾಮಾನ ಇದೆ. ಆದರೆ ಏಪ್ರಿಲ್ 18ರ ನಂತರ ಹವಾಮಾನ ಸ್ವಲ್ಪ ಬದಲಾಗಬಹುದು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಧ್ಯ ಭಾರತದಲ್ಲಿ ವಿಶೇಷವಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಬಯಲು ಪ್ರದೇಶಗಳಲ್ಲಿ ಮಿಂಚು, ಬಲವಾದ ಗಾಳಿಯೊಂದಿಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಕಾಶ್ಮೀರ ಉತ್ತರಾಖಂಡದಲ್ಲಿ ಆಲಿಕಲ್ಲು ಮಳೆಯ ಎಚ್ಚರಿಕೆ
ಏಪ್ರಿಲ್ 18-19ರಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಆಲಿಕಲ್ಲು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಪ್ರಸ್ತುತ ತಾಪಮಾನದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಆದರೆ ಏಪ್ರಿಲ್ 19 ಮತ್ತು 20 ರ ನಂತರ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ತಾಪಮಾನವು 2-4 ಡಿಗ್ರಿಗಳಷ್ಟು ಕಡಿಮೆಯಾಗಬಹುದು. ಇದು ಸ್ವಲ್ಪ ಪರಿಹಾರವನ್ನು ನೀಡಲಿದೆ.
ದಕ್ಷಿಣ ಭಾರತದಲ್ಲಿ ಸಾಧಾರಣ ಮಳೆ ನಿರೀಕ್ಷೆ
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಮುಂದಿನ 5 ದಿನಗಳವರೆಗೆ ಗುಡುಗು, ಬಲವಾದ ಗಾಳಿ ಸಮೇತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ
ಒಡಿಶಾ, ಬಿಹಾರ, ಜಾರ್ಖಂಡ್, ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ನಾಗಾಲ್ಯಾಂಡ್ಗಳಲ್ಲಿ ಏಪ್ರಿಲ್ 18 ರವರೆಗೆ ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ.












Click it and Unblock the Notifications