ಫ್ರಾನ್ಸ್ ಅಧ್ಯಕ್ಷರ ಮೇಲೆ ವಾಗ್ದಾಳಿ: ಪಾಕ್, ಟರ್ಕಿ ವಿರುದ್ಧ ಭಾರತ ಕಿಡಿ
ನವದೆಹಲಿ, ಅಕ್ಟೋಬರ್ 29: ಫ್ರಾನ್ಸ್ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸಮರ್ಥಿಸಿಕೊಳ್ಳುವ ಮೂಲಕ ಪಾಕಿಸ್ತಾನ ಹಾಗೂ ಟರ್ಕಿಯ ವಾಗ್ದಾಳಿಗೆ ತುತ್ತಾಗಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಕ್ರಾನ್ ಅವರನ್ನು ಭಾರತ ಬೆಂಬಲಿಸಿದೆ.
ಫ್ರೆಂಚ್ ಅಧ್ಯಕ್ಷರ ವಿರುದ್ಧದ ವೈಯಕ್ತಿಕ ವಾಗ್ದಾಳಿಗಳನ್ನು ಖಂಡಿಸುತ್ತಿರುವ ಪ್ರಮುಖ ಯುರೋಪಿಯನ್ ದೇಶಗಳೊಂದಿಗೆ ಭಾರತ ಸೇರಿಕೊಂಡಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದರ ಕ್ಯಾರಿಕೇಚರ್ಗಳನ್ನು ತೋರಿಸುವ ಮೂಲಕ ಅವರನ್ನು ಅವಹೇಳನೆ ಮಾಡಿದ್ದಾರೆ ಎಂದು ಆರೋಪಿಸಿ ಫ್ರಾನ್ಸ್ನಲ್ಲಿ ಅ. 16ರಂದು 18 ವರ್ಷದ ಚೆಚೆನ್ ನಿರಾಶ್ರಿತನೊಬ್ಬ 47 ವರ್ಷದ ಶಾಲಾ ಶಿಕ್ಷಕ ಸಾಮ್ಯುಯೆಲ್ ಪಾಟಿ ಅವರ ಶಿರಚ್ಛೇದ ಮಾಡಿದ ಘಟನೆ ಬಳಿಕ ಫ್ರಾನ್ಸ್ ಹಾಗೂ ಮುಸ್ಲಿಂ ದೇಶಗಳ ನಡುವೆ ರಾಜಕೀಯ ಮತ್ತು ವ್ಯಾವಹಾರಿಕ ಬಿಕ್ಕಟ್ಟು ತಲೆದೋರಿದೆ.
ಈ ಹತ್ಯೆಯನ್ನು ಖಂಡಿಸಿದ್ದ ಮಕ್ರಾನ್, 'ನಾವು ಮುಂದುವರಿಸುತ್ತೇವೆ.. ನೀವು ಕಲಿಸಿದ ಸ್ವಾತಂತ್ರ್ಯವನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ ಮತ್ತು ಜಾತ್ಯತೀತತೆಯನ್ನು ತರುತ್ತೇವೆ. ಕಾರ್ಟೂನುಗಳನ್ನು, ಚಿತ್ರಗಳನ್ನು ನಾವು ಕೈಬಿಡುವುದಿಲ್ಲ, ಅದಕ್ಕೆ ಬೇರೆಯವರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಸುಮ್ಮನಿರುವುದಿಲ್ಲ' ಎಂದು ತೀಕ್ಷ್ಣವಾಗಿ ಹೇಳಿದ್ದರು.

ಇದಕ್ಕೆ ವಾಗ್ದಾಳಿ ನಡೆಸಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಫ್ರಾನ್ಸ್ ಅಧ್ಯಕ್ಷ ಮಕ್ರಾನ್ ಇಸ್ಲಾಮಿಕ್ ವಿರೋಧಿ ಕಾರ್ಯಸೂಚಿಯನ್ನು ನಡೆಸುತ್ತಿದ್ದಾರೆ. ಅವರು ಮಾನಸಿಕ ಆರೋಗ್ಯ ಪರೀಕ್ಷೆಗೆ ಒಳಪಡಬೇಕು' ಎಂದು ಟೀಕಿಸಿದ್ದರು.
'ಮಕ್ರಾನ್ ಅವರು ಮುಸ್ಲಿಂ ವಿರೋಧಿ ಭಾವನೆಗಳನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ' ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು.
'ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಕ್ರಾನ್ ವಿರುದ್ಧ ವೈಯಕ್ತಿಕ ದಾಳಿಗೆ ಬಳಸಿದ ಭಾಷೆಯನ್ನು ನಾವು ಕಟುವಾಗಿ ಖಂಡಿಸುತ್ತೇವೆ. ಇದು ಅಂತಾರಾಷ್ಟ್ರೀಯ ನಡವಳಿಕೆಯ ಬಹುಮುಖ್ಯ ಮೂಲ ಗುಣದ ಉಲ್ಲಂಘನೆಯಾಗಿದೆ. ಜಗತ್ತಿಗೆ ಆಘಾತ ಉಂಟುಮಾಡಿರುವ ಫ್ರೆಂಚ್ ಶಿಕ್ಷಕರ ಜೀವವನ್ನು ಬಲಿ ತೆಗೆದುಕೊಂಡ ಕ್ರೂರ ಭಯೋತ್ಪಾದನಾ ಕೃತ್ಯವನ್ನು ಸಹ ನಾವು ಖಂಡಿಸುತ್ತೇವೆ. ಅವರ ಕುಟುಂಬ ಹಾಗೂ ಫ್ರಾನ್ಸ್ನ ಜನರಿಗೆ ನಮ್ಮ ಸಂತಾಪಗಳನ್ನು ಸಲ್ಲಿಸುತ್ತೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆ ನೀಡಿದೆ.
'ಯಾವುದೇ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಭಯೋತ್ಪಾದನೆಗೆ ಸಮರ್ಥನೆ ಇರುವುದಿಲ್ಲ' ಎಂದು ಭಾರತ ಹೇಳಿಕೆ ನೀಡಿದೆ.












Click it and Unblock the Notifications