ರಷ್ಯಾ ಲಸಿಕೆ ತರಿಸಿಕೊಳ್ಳಲು ಭಾರತ ಆತುರಪಡುವುದು ಬೇಡ
ನವದೆಹಲಿ, ಸೆಪ್ಟೆಂಬರ್ 8: ಭಾರತ ಈಗ ಕೊರೊನಾ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೆಯ ಸ್ಥಾನಕ್ಕೇರಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಬಳಸಲು ಎರಡೂ ದೇಶಗಳು ಮುಂದಾಗಿವೆ. ಈ ಸಂಬಂಧ ಉಭಯ ದೇಶಗಳ ಸರ್ಕಾರಗಳು ಮಾತುಕತೆ ನಡೆಸುತ್ತಿವೆ.
Recommended Video
ರಷ್ಯಾ ನಡೆಸಿರುವ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಆರಂಭದ ಹಂತದಲ್ಲಿ ಸಿಕ್ಕಿರುವುದು ಸಣ್ಣ ಮಟ್ಟದ ಸುರಕ್ಷತಾ ದತ್ತಾಂಶ ಮತ್ತು ಸಣ್ಣ ಮಟ್ಟದ ಪ್ರತಿರೋಧಕ ಶಕ್ತಿಯ ವಿವರ ಮಾತ್ರ. ಅದು ಮೊದಲ ಹಂತದ್ದು. ಲಸಿಕೆಯ ಕ್ಲಿನಿಕಲ್ ಪರೀಕ್ಷೆಯನ್ನು ಹೆಚ್ಚಿಸುವುದರ ಬಗ್ಗೆ ಸರ್ಕಾರಗಳು ಮಾತುಕತೆ ನಡೆಸುತ್ತಿದ್ದರೆ ತೊಂದರೆಯಿಲ್ಲ. ಭಾರತ ಸರ್ಕಾರ ಅದನ್ನೇ ಈಗ ಮಾಡಬೇಕಿರುವುದು. ರಷ್ಯನ್ನರಿಗೆ ಲಸಿಕೆಯ ಪರವಾನಗಿ ಅಥವಾ ಪ್ರಮಾಣಪತ್ರ ಅಥವಾ ನೋಂದಣಿ ಇದ್ದ ಮಾತ್ರಕ್ಕೆ ಅದು ಭಾರತದಂತಹ ದೇಶದಲ್ಲಿ ಮುಖ್ಯವಾಗಿ ಬಳಸಲು ಸಿದ್ಧವಿದೆ ಎಂದರ್ಥವಲ್ಲ. ಲಸಿಕೆಯ ದಕ್ಷತೆಯನ್ನು ತಿಳಿಯುವ ಪ್ರಯೋಗದ ಫಲಿತಾಂಶ ಅಗತ್ಯವಾಗಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ
ವೆಲ್ಲೂರ್ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ನ ಗ್ಯಾಸ್ಟ್ರೋಇಂಟೆಸ್ಟೈನಲ್ ವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪ್ರೊಫೆಸರ್ ಗಗನದೀಪ್ ಕಾಂಗ್, ರಷ್ಯಾದಿಂದ ಔಷಧವನ್ನು ತರಿಸಿಕೊಂಡು ಭಾರತದಲ್ಲಿ ರೋಗಿಗಳಿಗೆ ಪ್ರಯೋಗಿಸುವ ವಿಚಾರದಲ್ಲಿ ಆತುರ ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ. ಮುಂದೆ ಓದಿ.
ಇನ್ನಷ್ಟು ವಾರ ಮುಂದುವರಿಯಲಿದೆ
ಭಾರತದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಏರಿಕೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ನೋಡಿದಾಗ ಮಹತ್ವದ ಬೆಳವಣಿಗೆಯೊಂದು ಘಟಿಸದೆ ಈ ಸಂಕಷ್ಟದ ಸ್ಥಿತಿ ದೂರವಾಗುತ್ತದೆ ಎಂದು ನಂಬಲು ಸಾಧ್ಯವಿಲ್ಲ. ನಮ್ಮ ಜನಸಂಖ್ಯೆ ಹಾಗೂ ಅದರ ಗಾತ್ರಕ್ಕೆ ಅನುಗುಣವಾಗಿ ನಾವು ಇನ್ನಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ನೋಡಲಿದ್ದೇವೆ. ಇದು ಅನಿರೀಕ್ಷಿತವೇನಲ್ಲ. ಇನ್ನಷ್ಟು ವಾರ ಇದು ಮುಂದುವರಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲಸಿಕೆ ದಕ್ಷತೆಯ ಹೆಚ್ಚು ಮುಖಗಳು
ಲಸಿಕೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಎನ್ನುವುದು ಅನೇಕ ವಿಭಿನ್ನ ಸಂಗತಿಗಳನ್ನು ಒಳಗೊಂಡಿದೆ. ಅದರ ಸುರಕ್ಷತೆ, ಪ್ರತಿರಕ್ಷಕಕ ಸಾಮರ್ಥ್ಯ ಹಾಗೂ ದಕ್ಷತೆ ಮೂರೂ ಪ್ರತ್ಯೇಕ ವಿಚಾರಗಳು. ಪ್ರತಿರಕ್ಷಣಾ ಪ್ರತಿಕ್ರಿಯೆ ಹೆಚ್ಚಿಸುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಎಂದರೆ ಲಸಿಕೆ ಹೆಚ್ಚು ಪ್ರತಿರಕ್ಷಾಜನಕವಾಗಿದೆ. ಹಾಗೆಯೇ ಪ್ರಭಾವಶಾಲಿ ಎಂದರೆ ಕಾಯಿಲೆಯ ವಿರುದ್ಧ ಲಸಿಕೆಯು ಸಕಾರಾತ್ಮಕ ಫಲಿತಾಂಶ ನೀಡಿರಬೇಕು. ಪ್ರಾಯೋಗಿಕ ದಕ್ಷತೆ ಕಂಡುಕೊಳ್ಳದ ಯಾವ ಲಸಿಕೆಯನ್ನೂ ನಾವು ಬಳಸಬಾರದು ಎಂದು ಕಾಂಗ್ ಸಲಹೆ ನೀಡಿದ್ದಾರೆ.
ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ
ಹೆಚ್ಚು ಪ್ರಮಾಣದಲ್ಲಿ ಪರೀಕ್ಷೆ ಅಗತ್ಯ
ನಾವು ಈ ಸಂದರ್ಭದಲ್ಲಿ ಹೆಚ್ಚಿನ ಸ್ಕ್ರೀನಿಂಗ್, ಜನರ ಪರೀಕ್ಷೆಯನ್ನು ಮಾಡಬೇಕಿದೆ. ಈಗ ನಡೆಸುತ್ತಿರುವ ಸಂಖ್ಯೆಗಿಂತಲೂ ಅಧಿಕ ಮಟ್ಟದಲ್ಲಿ ವ್ಯಾಪಕ ಪರೀಕ್ಷೆಗಳು ನಡೆಯಬೇಕು. ಮನುಷ್ಯರು ಮತ್ತು ಪ್ರಾಣಿಗಳ ಸಮುದಾಯವನ್ನು ನೋಡಿದಾಗ ಅಸಹಜವಾದುದು ಏನೋ ನಡೆಯುತ್ತಿದೆ ಎಂದು ಅನಿಸಿದರೂ ಅದರ ಸಮಸ್ಯೆ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.
ನಾಯಿಯಿಂದಲೂ ಹರಡಬಹುದು
ಚೀನಾ ಮತ್ತು ವನ್ಯಜೀವಿ ಮಾರಾಟದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಅದರಿಂದ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಆದರೆ ನಿಮ್ಮ ಮನೆಯ ನಾಯಿಯಿಂದಲೇ ಮತ್ತೊಂದು ಕಾಯಿಲೆ ಹರಡಲು ಶುರುವಾಗಬಹುದು. ವೈರಸ್ಗಳಿಗೆ ಯಾವ ಪ್ರಾಣಿಗಳೆಂದಿಲ್ಲ. ಅದು ಬೆಳೆದು ಮನುಷ್ಯರಿಗೆ ಹರಡಬಹುದು ಎಂದಿದ್ದರೆ, ಅದನ್ನು ತಿಂದರೆ ಮಾತ್ರವೇ ಕಾಯಿಲೆ ಹರಡುತ್ತದೆ ಎನ್ನಲಾಗದು. ಹೀಗಾಗಿ ಉಳಿವಿಗಾಗಿ ನಾವು ಗಡಿಗಳನ್ನು ಮೀರಿ ಜಾಗತಿಕ ಪ್ರಯತ್ನ ನಡೆಸಬೇಕಿದೆ ಎಂದು ಹೇಳಿದ್ದಾರೆ.