ಕೊನೆಯ ಕ್ಷಣದಲ್ಲಿ ಎದುರಾದ ನಿರಾಶೆ: ಸಂವಹನ ಕಳೆದುಕೊಂಡ ಚಂದ್ರಯಾನ 2 ನೌಕೆ
Recommended Video
ಬೆಂಗಳೂರು, ಸೆಪ್ಟೆಂಬರ್ 7: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯ ವಿಕ್ರಂ ಲ್ಯಾಂಡರ್ ಕೊನೆಯ ನಿರ್ಣಾಯಕ ಕ್ಷಣದಲ್ಲಿ ಸಂವಹನ ಕಡಿತ ಉಂಟಾಗಿ ತೀವ್ರ ನಿರಾಶೆ ಎದುರಾಯಿತು.
ಚಂದ್ರಯಾನ ನೌಕೆಯ ಡೇಟಾಗಳನ್ನು ವಿಶ್ಲೇಷಿಸಲಾಗುತ್ತಿದೆ. ಲ್ಯಾಂಡರ್ ಜತೆಗಿನ ಸಂವಹನ ಕಡಿತಗೊಂಡಿದೆ ಎಂಬ ಬೇಸರದ ಸಂಗತಿಯನ್ನು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು. ಇದರಿಂದ ಚಂದ್ರಯಾನದ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿ ಕಾದಿದ್ದ ಭಾರತೀಯರಲ್ಲಿ ನಿರಾಶೆ ಮೂಡಿತು. ಆದರೆ, ತನ್ನ ಯೋಜನೆಯ ಯಶಸ್ಸಿನ ಬಗ್ಗೆ ವಿಶ್ವಾಸ ಹೊಂದಿರುವ ಇಸ್ರೋ, ಸಂವಹನ ಸಂಪರ್ಕ ಸಿಗಲಿದೆ ಎಂಬ ಭರವಸೆ ಹೊಂದಿದೆ.
ಈ ಮಹತ್ತರ ವಿದ್ಯಮಾನವನ್ನು ನೇರಪ್ರಸಾರದಲ್ಲಿ ಕಣ್ತುಂಬಿಕೊಳ್ಳಲು ಇಸ್ರೋ ಕಚೇರಿಯಲ್ಲಿ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಇಸ್ರೋ ವಿಜ್ಞಾನಿಗಳ ಪರಿಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಈ ರೀತಿಯ ಸಂಕಟದ ಸಮಯದಿಂದ ಹೊರಬಂದು ಯಶಸ್ವಿಯಾಗುತ್ತೀರಿ ಎಂದು ಅವರಿಗೆ ಧೈರ್ಯ ತುಂಬಿದರು. 'ನಿಮ್ಮ ಜತೆ ನಾನಿದ್ದೇನೆ. ನಿಮ್ಮ ಮೇಲೆ ಭಾರತ ಭರವಸೆ ಹೊಂದಿದೆ. ಏರಿಳಿತಗಳು ಎಂದಿಗೂ ಇದ್ದೇ ಇರುತ್ತವೆ. ಇದೇನು ಸಣ್ಣ ಸಾಧನೆಯಲ್ಲ. ಭಾರತವು ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಹೊಂದಿದೆ' ಎಂದು ಮೋದಿ ಇಸ್ರೋ ವಿಜ್ಞಾನಿಗಳನ್ನು ಪ್ರಶಂಸಿಸಿದರು.

ನಿರೀಕ್ಷೆಯಂತೆ ಸಾಗಿದ್ದ ಲ್ಯಾಂಡರ್
ಸೆ. 7ರ ಮಧ್ಯರಾತ್ರಿ 1.37ರ ವೇಳೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ತನ್ನ ಅಂತಿಮ ಪ್ರಕ್ರಿಯೆಯನ್ನು ಆರಂಭಿಸಿತು. ಲ್ಯಾಂಡರ್ನ ವೇಗ ನಿರೀಕ್ಷೆಯಂತೆಯೇ ಹಂತ ಹಂತವಾಗಿ ತಗ್ಗುತ್ತಾ, ಲ್ಯಾಂಡರ್ ಚಂದ್ರನಿಗೆ ಸಮತಟ್ಟಾದ ರೀತಿಯಲ್ಲಿ ಇಳಿಯುತ್ತಾ 1.49ರ ವೇಳೆಗೆ 'ರಫ್ ಬ್ರೇಕಿಂಗ್ ಫೇಸ್'ಅನ್ನು ಯಶಸ್ವಿಯಾಗಿ ಪೂರೈಸಿತು. ಇಸ್ರೋ ವಿಜ್ಞಾನಿಗಳು ಸಮಾಧಾನದ ನಿಟ್ಟುಸಿರು ಬಿಡುವ ಜತೆಗೆ ಚಪ್ಪಾಳೆ ಸದ್ದು ಮೊಳಗಿಸುವ ಸಂತೋಷಪಟ್ಟರು.

ಕಡಿತಗೊಂಡ ಸಂವಹನ
ಬಳಿಕ ಫೈನ್ ಬ್ರೇಕಿಂಗ್ ಹಂತದಲ್ಲಿ ಲ್ಯಾಂಡರ್ ಸಾಗಿಸುವ ಕಾರ್ಯ ನಡೆಯಿತು. ಅರ್ಬಿಟರ್, ತನ್ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ನಿಂದ ಡೇಟಾಗಳನ್ನು ಸ್ವೀಕರಿಸುವುದನ್ನು 2.05ರ ಸುಮಾರಿಗೆ ಆರಂಭಿಸಿತು. ವಿಕ್ರಂ ಲ್ಯಾಂಡರ್ ಅಂದುಕೊಂಡಂತೆಯೇ ಚಂದ್ರನ ಮೇಲೆ ಇಳಿಯಿತೇ ಇಲ್ಲವೇ ಎಂಬ ಅಂತಿಮ ಖಚಿತತೆ ಬರುವವರೆಗೂ ಉಗುರು ಕಚ್ಚಿಕೊಂಡು ಕಾಯುವ ಚಡಪಡಿಕೆಯ ಸನ್ನಿವೇಶ ಸೃಷ್ಟಿಯಾಗಿತ್ತು. ವಿಕ್ರಂ ಲ್ಯಾಂಡರ್ ರವಾನಿಸಿದ ಮಾಹಿತಿಯನ್ನು ಸ್ವೀಕರಿಸಿದ ಬಳಿಕ ಅದನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಅಲ್ಲಿಂದ ಯಾವುದೇ ಸಂವಹನ ದೊರೆತಿಲ್ಲ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ 2.16ರ ಸುಮಾರಿಗೆ ತಿಳಿಸಿದರು. ಸಂವಹನ ಕಡಿತದಿಂದ ವಿಜ್ಞಾನಿಗಳಲ್ಲಿ ಆತಂಕ ಉಂಟಾಯಿತು.

2.1 ಕಿ.ಮೀ ದೂರದಲ್ಲಿ ಸಂವಹನ ಕಡಿತ
ಲ್ಯಾಂಡರ್ ಇಳಿಯುವಿಕೆಯ ಪ್ರಕ್ರಿಯೆ ಅರಂಭವಾದ 13 ನಿಮಿಷಗಳಲ್ಲಿ ಈ ಸಂವಹನ ಕಡಿತ ಉಂಟಾಯಿತು. ಅಗತ್ಯ ಮಟ್ಟಕ್ಕೆ ಲ್ಯಾಂಡರ್ ವೇಗವನ್ನು ತಗ್ಗಿಸುವುದು ಸಾಧ್ಯವಾಗದ ಕಾರಣ ಅದರ ಸುಗಮ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ. ಲ್ಯಾಂಡರ್ 6,048 ಕಿ.ಮೀ. ವೇಗ ಹೊಂದಿತ್ತು. ಅದನ್ನು ಗಂಟೆಗೆ 7 ಕಿ.ಮೀ. ವೇಗಕ್ಕೆ ಇಳಿಸಬೇಕಾಗಿತ್ತು. 3.844 ಲಕ್ಷ ಕಿ.ಮೀಯಷ್ಟು ದೂರ ಕ್ರಮಿಸಿದ್ದ ನೌಕೆಯು ತನ್ನ ಅಂತಿಮ ಗುರಿ ತಲುಪಲು ಕೇವಲ 2.1 ಕಿ.ಮೀ ದೂರವಿದೆ ಎನ್ನುವಾಗ ಸಂಪರ್ಕ ಕಡಿತಕೊಂಡಿತು.

ನಿರ್ಣಾಯಕವಾಗಿದ್ದ 15 ನಿಮಿಷ
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕೊನೆಯ 15 ನಿಮಿಷಗಳು ಅತ್ಯಂತ ನಿರ್ಣಾಯಕವಾಗಿತ್ತು. ಈ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು. ಉಳಿದೆಲ್ಲ ಹಂತಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಇಸ್ರೋ, ಅಂತಿಮ ಹಂತದಲ್ಲಿ ಸಂಪರ್ಕ ಕಡಿತದಿಂದ ನಿರಾಸೆ ಎದುರಿಸಿತು. ಸಂವಹನ ಕಡಿತವಾಗಿದ್ದರೂ ನಿಗದಿತ ಗುರಿಯಂತೆ ಲ್ಯಾಂಡರ್ ತನ್ನ ಗಮ್ಯ ತಲುಪಿರುವ ಸಾಧ್ಯತೆ ಎನ್ನುವ ಆಸೆ ವಿಜ್ಞಾನಿಗಳಲ್ಲಿ ಉಳಿದಿದೆ.












Click it and Unblock the Notifications