ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ
Recommended Video
ಬೆಂಗಳೂರು, ಸೆಪ್ಟೆಂಬರ್ 7: ನಿಜ. ಇಸ್ರೋ ಸೋತಿಲ್ಲ. ಚಂದ್ರಯಾನ-2 ನೌಕೆಯ ಲ್ಯಾಂಡರ್ ಜತೆಗಿನ ಸಂಪರ್ಕ ಕಡಿತ ವೈಫಲ್ಯವೂ ಅಲ್ಲ. ಈಗಲೂ ಇಸ್ರೋ ಮಾಡಿರುವ ಸಾಧನೆ ಇಡೀ ಜಗತ್ತು ಮೆಚ್ಚುವಂಥದ್ದು, ಚರಿತ್ರಾರ್ಹವಾದದ್ದು. ಏಕೆಂದರೆ, ಭಾರತದ ಚಂದ್ರಯಾನ-2 ಯೋಜನೆ ಈಗ ಕಳೆದುಕೊಂಡಿರುವುದು ಶೇ 5ರಷ್ಟು ಉದ್ದೇಶಿತ ಕಾರ್ಯವನ್ನು ಮಾತ್ರ. ಇನ್ನು ಶೇ 95ರಷ್ಟು ಕಾರ್ಯ ಸಫಲವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.
ಮಿಗಿಲಾಗಿ, ಇದುವರೆಗೆ ಹಲವು ದೇಶಗಳು ಅನೇಕ ಚಂದ್ರಯಾನ ಯೋಜನೆಗಳನ್ನು ಕೈಗೊಂಡಿವೆ. ಅವುಗಳ ಪ್ರಯತ್ನದಲ್ಲಿ ವಿಫಲವೂ ಆಗಿವೆ, ಸಫಲತೆಯನ್ನೂ ಕಂಡಿವೆ. ಈ ಎಲ್ಲ ಯೋಜನೆಗಳೂ ನಡೆದಿರುವುದು ಭೂಮಿಯಿಂದ ನಿಯಂತ್ರಿಸಲು ಸುಲಭವಾಗುವಂತಹ ಚಂದ್ರನ ಉತ್ತರ ಧ್ರುವದಲ್ಲಿ.
ಈ ಭಾಗದಲ್ಲಿಯೂ ಭಾರತ ತನ್ನ ಮೊದಲ ಚಂದ್ರಯಾನ ಯೋಜನೆಯನ್ನು ಯಶಸ್ವಿಯಾಗಿ ನಡೆಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ದಕ್ಷಿಣ ಧ್ರುವವನ್ನು ಇದುವರೆಗೂ ಯಾವ ದೇಶವೂ ಅಧ್ಯಯನಕ್ಕೆ ಒಳಪಡಿಸಿಲ್ಲ. ಇಲ್ಲಿ ನೌಕೆಯನ್ನು ಇಳಿಸಿ ಅಧ್ಯಯನ ಮಾಡಿದರೆ ಸೌರ ಮಂಡಲದ ಉಗಮದ ಬಗ್ಗೆ ಮಹತ್ವದ ಸುಳಿವು ಸಿಗಬಹುದು ಎಂಬ ಯೋಜನೆ ಮಾಡಿದ್ದೇ ಭಾರತದ ಹೆಮ್ಮೆ ಇಸ್ರೋ. ಈ ಪರಿಕಲ್ಪನೆ ನಮ್ಮ ವಿಜ್ಞಾನಿಗಳಲ್ಲಿ ಮೊಳೆತಿರುವುದು ಕೂಡ ಗಮನಾರ್ಹ.

3,83,998 ಕಿ.ಮೀ. ದೂರ ಸಾಗಿದ್ದ ನೌಕೆ
ತಾಂತ್ರಿಕ ಕಾರಣಗಳಿಂದ ಚಂದ್ರಯಾನ-2 ನೌಕೆಯ ಉಡಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿದ್ದನ್ನು ಹೊರತುಪಡಿಸಿದರೆ ಚಂದ್ರನ ಮೇಲ್ಮೈನಲ್ಲಿ ವಿಕ್ರಂ ಲ್ಯಾಂಡರ್ ಇಳಿಯುವ ಕೇವಲ 2.1 ಕಿ.ಮೀ.ವರೆಗಿನ ಭೂಮಿಯಿಂದ 3,83,998 ಕಿ.ಮೀ. ದೂರದ ಪ್ರಯಾಣವನ್ನು ವಿವಿಧ ತಾಂತ್ರಿಕ ಕಾರ್ಯಾಚರಣೆಗಳ ನಡುವೆ ಯಶಸ್ವಿಯಾಗಿ ಕ್ರಮಿಸಿದೆ ಎನ್ನುವುದನ್ನು ಮರೆಯುವಂತಿಲ್ಲ.

ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ
'ಯೋಜನೆ ಕಳೆದುಕೊಂಡಿರುವುದು ಶೇ 5ರಷ್ಟನ್ನು ಮಾತ್ರ. ಅದು ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ನ ರೂಪದಲ್ಲಿ. ಇನ್ನು ಉಳಿದ ಶೇ 95ರಷ್ಟು ಯಶಸ್ಸು ನಿಂತಿರುವುದು ಚಂದ್ರಯಾನ-2 ಆರ್ಬಿಟರ್ ಮೇಲೆ. ಅದು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಚಂದ್ರನನ್ನು ಸುತ್ತುತ್ತಿದೆ' ಎಂದು ಇಸ್ರೋದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವರ್ಷ ಆರ್ಬಿಟರ್ ಕಾರ್ಯಾಚರಣೆ
ಚಂದ್ರಯಾನದ ಆರ್ಬಿಟರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಅಲ್ಲಿ ತನ್ನ ಕಾರ್ಯಾಚರಣೆ ನಡೆಸಬಲ್ಲದು. ಚಂದ್ರದ ದಕ್ಷಿಣ ಧ್ರುವದ ವಿಶಿಷ್ಟ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಬಹುದು. ಮಾತ್ರವಲ್ಲ, ತನ್ನಿಂದ ಬೇರ್ಪಟ್ಟ ಲ್ಯಾಂಡರ್ ಈಗ ಎಲ್ಲಿದೆ, ಅದರ ಸ್ಥಿತಿಗತಿಗಳು ಹೇಗಿವೆ ಎಂಬ ಚಿತ್ರವನ್ನೂ ಅದು ತೆಗೆಯಬಲ್ಲದು. ಆರ್ಬಿಟರ್ ಅಂದುಕೊಂಡಂತೆ ಚಿತ್ರಗಳನ್ನು ತೆಗೆದು ಕಳುಹಿಸಿದರೆ ಈ ಯೋಜನೆ ಯಶಸ್ವಿಯಾದಂತೆಯೇ. ಚಂದ್ರನ ಮೇಲ್ಮೈನಲ್ಲಿ ಸಾಗಿ ಕಾರ್ಯಾಚರಣೆ ನಡೆಸಲಿದೆ ಎಂಬ ನಿರೀಕ್ಷೆ ಹೊಂದಿದ್ದ ರೋವರ್ ಮತ್ತು ಲ್ಯಾಂಡರ್ ಮಾತ್ರ ಹಿನ್ನಡೆ ಅನುಭವಿಸಿದಂತೆ ಆಗುತ್ತದೆ.

ಮತ್ತೆ ಸಂಪರ್ಕ ಸಿಕ್ಕರೂ ಅಚ್ಚರಿಯಿಲ್ಲ
ಇನ್ನು ವಿಕ್ರಂ ಲ್ಯಾಂಡರ್ ಸಂವಹನ ಕಳೆದುಕೊಂಡಿದೆಯಷ್ಟೇ. ಹಾಗೆಂದು ಚಂದ್ರನ ಮೇಲೆ ಇಳಿಯುವ ಗುರಿಯನ್ನು ತಲುಪಿಲ್ಲ ಎನ್ನಲಾಗದು. ಲ್ಯಾಂಡರ್ ಸುರಕ್ಷಿತವಾಗಿ ಇಳಿದು ರೋವರ್ ಕೂಡ ತನ್ನ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಎರಡೂ ಸಾಧನಗಳ ಜೀವಿತಾವಧಿ 14 ದಿನಗಳು ಮಾತ್ರ. ಚಂದ್ರನ ಮೇಲೆ ಬೀಳುವ ಸೂರ್ಯ ಕಿರಣಗಳ ಶಾಖವನ್ನೇ ಇಂಧನವಾಗಿ ಬಳಸಿಕೊಂಡು ಇವು ಅಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಈ 14 ದಿನಗಳಲ್ಲಿ ಅವುಗಳು ಪುನಃ ಭೂಮಿಯ ತನ್ನ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿದರೂ ಅಚ್ಚರಿಯಿಲ್ಲ. ಇಂತಹದ್ದೊಂದು ಭರವಸೆ ವಿಜ್ಞಾನ ಲೋಕದಲ್ಲಿದೆ. ಒಂದು ದಿನದ ಮಟ್ಟಿಗೆ ಸಂಪರ್ಕ ದೊರೆತರೂ ಈ ಯೋಜನೆಯ ಸಂಪೂರ್ಣ ಯಶಸ್ವಿಯಾದಂತೆಯೇ.
ಸದ್ಯದ ಮಟ್ಟಿಗೆ ಲ್ಯಾಂಡರ್ ಸ್ಥಿತಿಗತಿ ಏನಾಗಿದೆ ಎನ್ನುವುದು ತಿಳಿದಿಲ್ಲ. ಅದು ಸುರಕ್ಷಿತವಾಗಿ ಇಳಿದಿರಬಹುದು ಅಥವಾ ಚಂದ್ರನಿಗೆ ಅಪ್ಪಳಿಸಿರಬಹುದು. ಅಪ್ಪಳಿಸಿದ ಕಾರಣಕ್ಕೆ ಸಂವಹನ ಕಳೆದುಕೊಂಡಿರಬಹುದು. ಈ ಬಗ್ಗೆ ಆರ್ಬಿಟರ್ ಮತ್ತು ಲ್ಯಾಂಡರ್ ಅದುವರೆಗೆ ಕಳಿಸಿದ್ದ ಡೇಟಾಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಇಸ್ರೋ ಮಾಡುತ್ತಿದೆ.

ಇನ್ನೂ 13 ದಿನ ಬಾಕಿ ಇದೆ
ಲ್ಯಾಂಡರ್ ಮತ್ತು ಆರ್ಬಿಟರ್ ನಡುವೆ ಈಗಲೂ ಕೆಲವು ಸಂವಹನಗಳು ನಡೆಯುತ್ತಿವೆ. 'ರಫ್ ಬ್ರೇಕಿಂಗ್' ಹಂತವನ್ನು ಯಶಸ್ವಿಯಾಗಿ ದಾಟಿದ್ದ ಲ್ಯಾಂಡರ್, 'ಫೈನ್ ಬ್ರೇಕಿಂಗ್' ಹಂತದಲ್ಲಿ ಭೂಕೇಂದ್ರದೊಂದಿಗಿನ ಸಂವಹನ ಕಳೆದುಕೊಂಡಿತ್ತು. ಹೀಗಾಗಿ ಅದು ಮತ್ತೆ ಸಂವಹನಕ್ಕೆ ಸಿಗುವ ಸಂಭವಗಳಿವೆ. ಅತಿಯಾದ ತಾಪಮಾನದಲ್ಲಿ ಉಳಿದುಕೊಳ್ಳಬಲ್ಲ ಲ್ಯಾಂಡರ್, ಸೂರ್ಯನ ಸಂಪರ್ಕ ಇಲ್ಲದ ಚಂದ್ರನಲ್ಲಿ -180 ಸೆ. ವಾತಾವರಣದಲ್ಲಿ ಶೀತವನ್ನು ಸಹಿಸಿಕೊಳ್ಳಲಾರದು. ಅದರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಇನ್ನೂ 13 ದಿನಗಳು ಸಿಗಲಿವೆ.
2,379 ಕೆಜಿ ತೂಕದ ಆರ್ಬಿಟರ್ ಎಂಟು ವೈಜ್ಞಾನಿಕ ಪೇಲೋಡ್ಗಳನ್ನು (ಅಧ್ಯಯನ ಸಾಧನಗಳು) ಹೊಂದಿದ್ದು, ಇವು ಚಂದ್ರನ ಮೇಲ್ಮೈಅನ್ನು ಪರೀಕ್ಷಿಸಿ ಚಂದ್ರನ ಹೊರಭಾಗದ ವಾತಾವರಣವನ್ನು ಅಧ್ಯಯನ ಮಾಡಲಿವೆ. ಚಂದ್ರನ ಮೇಲ್ಮೈನಿಂದ 100 ಕಿ.ಮೀ. ದೂರದಲ್ಲಿ ಸುತ್ತಲಿದ್ದು, ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಸಹ ಪ್ರಯತ್ನ ಮುಂದುವರಿಸಲಿದೆ.

ಒಂದೆರಡಲ್ಲ ಭವಿಷ್ಯದ ಹೆಮ್ಮೆಯ ಯೋಜನೆಗಳು...
ಆರ್ಬಿಟರ್ ಕಳುಹಿಸುವ ಮಾಹಿತಿಗಳು ಇಸ್ರೋದ ಭವಿಷ್ಯದ ಯೋಜನೆಗಳಿಗೆ ನೆರವಾಗಲಿವೆ. 2022ರಲ್ಲಿ ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಗಗನಯಾನಿಗಳನ್ನು ಕಳುಹಿಸುವ 'ಗಗನಯಾನ' ಯೋಜನೆಯನ್ನು ಇಸ್ರೋ ರೂಪಿಸುತ್ತಿದೆ. ಜತೆಗೆ 2022-2023ರ ಅವಧಿಯಲ್ಲಿ ಮಂಗಳ ಗ್ರಹಕ್ಕೆ ಆರ್ಬಿಟರ್ ಮಿಷನ್ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಜತೆಗೆ 2020ರ ಅಂತ್ಯದಲ್ಲಿ ಚಂದ್ರಯಾನ-3ಗೆ ಯೋಜನೆಯನ್ನು ರೂಪಿಸಲಾಗಿದೆ. 2023ರ ವೇಳೆ ಶುಕ್ರಗ್ರಹದ ಯೋಜನೆ, ಸೂರ್ಯ ಯೋಜನೆ ಮತ್ತು ಭೂಮಿಯ ಕಕ್ಷೆಯಲ್ಲಿ ಭಾರತದ್ದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮಹತ್ವದ ಯೋಜನೆಗಳು ಇಸ್ರೋ ಮುಂದಿವೆ.











Click it and Unblock the Notifications