'ಅಕ್ರಮ ನುಸುಳುಕೋರರಿಗೆ ಆಶ್ರಯ ನೀಡೋಕೆ ಭಾರತ ಧರ್ಮಛತ್ರವಲ್ಲ!'
ರಾಯ್ಪುರ, ಆಗಸ್ಟ್ 04: "ಅಕ್ರಮ ನುಸುಳುಕೋರರಿಗೆಲ್ಲ ಆಶ್ರಯ ನೀಡುವುದಕ್ಕೆ ಭಾರತವೇನು, ಧರ್ಮಛತ್ರವಲ್ಲ" ಎಂದು ಛತ್ತಿಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ಎನ್ ಆರ್ ಸಿ(ರಾಷ್ಟ್ರೀಯ ಪೌರ ನೋಂದಣಿ) ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿ ಹೇಳಿದರು.
ಇತ್ತೀಚೆಗೆ ಪ್ರಕಟವಾದ ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಯ ಎರಡನೆಯ ಮತ್ತು ಅಂತಿಮ ಕರಡು ಪ್ರತಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಜನರ ಹೆಸರು ಬಿಟ್ಟು ಹೋಗಿರುವ ಕುರಿತು ಅವರು ಪ್ರತಿಕ್ರಿಯೆ ನೀಡಿದರು.
ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ
ಯಾರು ಭಾರತೀಯರಲ್ಲವೋ, ಯಾರಿಗೆ ತಾವು ಭಾರತೀಯರು ಅಂತ ಸಾಬೀತುಪಡಿಸುವುದಕ್ಕೆ ಸಾಧ್ಯವಿಲ್ಲೋ ಆಂಥವರು ದೇಶ ಬಿಟ್ಟು ಹೋಗಬೇಕು ಎಂದು ರಮಣ್ ಸಿಂಗ್ ಹೇಳಿದರು.
'ಅಸ್ಸಾಂ ನಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಜನರ ಹೆಸರು ನೋಂದಣಿಯಾಗಿಲ್ಲ ಎಂದು ಅದನ್ನೇ ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ. ಅವರು ಅಕ್ರಮ ನುಸುಳುಕೋರರಾಗಿದ್ದರೆ ದೇಶಬಿಟ್ಟು ತೊಲಗಲಿ. ಎಲ್ಲರಿಗೂ ಆಶ್ರಯ ನೀಡೋಕೆ ಭಾರತವೇನು ಅಧರ್ಮಛತ್ರವಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.