Get Updates
Get notified of breaking news, exclusive insights, and must-see stories!

ಪ್ರವಾದಿ ವಿರುದ್ಧ ಬಿಜೆಪಿಗರ ವಿವಾದಿತ ಹೇಳಿಕೆ; ಕತಾರ್ ಆಕ್ಷೇಪಕ್ಕೆ ಭಾರತೀಯ ರಾಯಭಾರಿಯಿಂದ ಸ್ಪಷ್ಟನೆ

ದೋಹ, ಜೂನ್ 5: ಬಿಜೆಪಿಯ ಕೆಲ ನಾಯಕರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಘಟನೆಗಳನ್ನು ಕತಾರ್ ದೇಶ ತುಸು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿಲುವಿನ ಸ್ಪಷ್ಟನೆ ಕೋರಿ ಕತಾರ್ ಸರಕಾರ ಭಾನುವಾರ ಭಾರತೀಯ ರಾಯಭಾರಿಗೆ ಕರೆ ಮಾಡಿದೆ. ಇದೇ ವೇಳೆ, ಕತಾರ್‌ನಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದ್ದು, ನಾಯಕರ ಟ್ವೀಟ್‌ಗಳು ಭಾರತದ ಸರಕಾರದ ಅಧಿಕೃತ ಹೇಳಿಕೆಗಳೆನಿಸುವುದಿಲ್ಲ ಎಂದು ತಿಳಿಸಿದ್ಧಾರೆ.

ಕತಾರ್‌ನ ವಿದೇಶಾಂಗ ಸಚಿವಾಲಯ ಬಿಜೆಪಿ ನಾಯಕರು ಮಾಡಿದ ನಿಂದನಾತ್ಮಕ ಟ್ವೀಟ್ ಕುರಿತು ಆಕ್ಷೇಪ ಎತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದವು. ಇದಕ್ಕೆ ಭಾರತೀಯ ರಾಯಭಾರಿ ಕಚೇರಿಯ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ನಮ್ಮದು ವಿವಿಧತೆಯಲ್ಲಿ ಏಕತೆ ಇರುವ ಸಂಸ್ಕೃತಿ. ಅದರಂತೆ ಭಾರತ ಸರಕಾರ ಎಲ್ಲಾ ಧರ್ಮಗಳನ್ನೂ ಗರಿಷ್ಠವಾಗಿ ಗೌರವಿಸುತ್ತದೆ. ಆಕ್ಷೇಪಾರ್ಯ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗಳ್ಳಲಾಗಿದೆ" ಎಂದು ತಿಳಿಸಿದ್ಧಾರೆ.

ರಾಯಭಾರಿ ದೀಪಕ್ ಮಿತ್ತಲ್ ಭಾನುವಾರ ಕತಾರ್ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿ ಸ್ಪಷ್ಟನೆ ಕೂಡ ನೀಡಿದ್ದಾರೆ. "ಟ್ವೀಟ್‌ಗಳು ಯಾವುದೇ ರೀತಿಯಲ್ಲೂ ಭಾರತ ಸರಕಾರದ ನಿಲುವನ್ನು ಪ್ರತಿಫಲಿಸುವುದಿಲ್ಲ. ಈ ಟ್ವೀಟ್‌ಗಳು ಯಾರೋ ಅಪ್ರಸ್ತುತ ಮಂದಿಯ ಅಭಿಪ್ರಾಯಗಳಾಗಿವೆ" ಎಂದು ಭಾರತೀಯ ರಾಯಭಾರಿ ಮನದಟ್ಟು ಮಾಡಿದರೆನ್ನಲಾಗಿದೆ.

India Clarifies after Qatar Summoned Indian Envoy Over BJP leaders remarks on Prophet

ಗಮನಾರ್ಹ ಎಂದರೆ, ಭಾರತದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸದ್ಯ ಕತಾರ್ ದೇಶದ ಪ್ರವಾಸದಲ್ಲೇ ಇದ್ದಾರೆ. ಇಂದು ಅವರು ಕತಾರ್ ಪ್ರಧಾನಿ ಶೇಖ್ ಖಾಲಿದ್ ಬಿನ್ ಖಲೀಫಾ ಬಿನ್ ಅಬ್ದುಲ್ ಅಜೀಜ್ ಅಲ್ ಠಾನಿ ಅವರನ್ನು ಭೇಟಿಯಾಗಿದ್ದರು.

ವಿವಾದಿತ ಹೇಳಿಕೆ ನೀಡಿದ್ದವರ ಉಚ್ಛಾಟನೆ:
ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಮತ್ತು ಡೆಲ್ಲಿ ಬಿಜೆಪಿಯ ಮಾಧ್ಯಮ ಮುಖ್ಯಸ್ಥರಾಗಿದ್ದ ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಎನಿಸುವಂಥ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಹೇಳಿಕೆ ನೀಡಿದ್ದರೆ, ಜಿಂದಾಲ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ವಿವಾದಾತ್ಮಕ ಹೇಳಿಕೆ ನೀಡಿದ್ದರು.

India Clarifies after Qatar Summoned Indian Envoy Over BJP leaders remarks on Prophet

ಇವರಿಬ್ಬರ ಹೇಳಿಕೆಗಳನ್ನು ಇಟ್ಟುಕೊಂಡು ಉತ್ತರಪ್ರದೇಶದ ಕಾನಪುರ್ ನಗರದಲ್ಲಿ ಜೂನ್ 3ರಂದು ಹಿಂಸಾಚಾರಗಳೂ ನಡೆದವು. ಇದು ಇನ್ನೂ ವಿಕೋಪಕ್ಕೆ ಹೋಗುವ ಮುನ್ನ ಇಂದು ಭಾನುವಾರ ಬಿಜೆಪಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಬಿಜೆಪಿ ಪಕ್ಷದ ಈ ಕ್ರಮವನ್ನು ಕತಾರ್ ಸರಕಾರ ಸ್ವಾಗತಿಸಿದೆ.

"ಹಲವು ವಿಚಾರಗಳಲ್ಲಿ ನೀವು ಪಕ್ಷದ ನಿಲುವಿಗಿಂತ ಭಿನ್ನವಾಗಿರುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತೀರಿ. ಇದು ಬಿಜೆಪಿಯ ಸಂವಿಧಾನದ ೧೦(ಎ) ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಇನ್ನಷ್ಟು ತನಿಖೆಯಾಗುವವರೆಗೂ ನಿಮ್ಮನ್ನು ಪಕ್ಷದಿಂದ ಅಮಾನತು ಮಾಡುವಂತೆ ಮತ್ತು ನಿಮಗೆ ವಹಿಸಲಾಗಿರುವ ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ಕೂಡಲೇ ಹಿಂಪಡೆಯುವಂತೆ ನನಗೆ ನಿರ್ದೇಶನ ಮಾಡಲಾಗಿದೆ" ಎಂದು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಕಾರ್ಯದರ್ಶಿ ಓಂ ಪಾಠಕ್ ಅವರು ವಕ್ತಾರೆ ನೂಪುರ್ ಶರ್ಮಾಗೆ ಪತ್ರ ಮುಖೇನ ತಿಳಿಸಿದ್ದರು.

ಇದಕ್ಕೆ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಕೂಡ ಹೇಳಿಕೆ ಬಿಡುಗಡೆ ಮಾಡಿ, "ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ನಿಂದಿಸುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವ ಯಾವುದೇ ವಿಚಾರಧಾರೆಯನ್ನೂ ಬಿಜೆಪಿ ವಿರೋಧಿಸುತ್ತದೆ. ಇಂಥ ವ್ಯಕ್ತಿಗಳನ್ನಾಗಲೀ ಅಥವಾ ತತ್ವವನ್ನಾಗಲೀ ಬಿಜೆಪಿ ಪುರಸ್ಕರಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+