ಡಿಸೆಂಬರ್ ಅಂತ್ಯದೊಳಗೆ ಭಾರತ-ಚೀನಾ ನಡುವೆ 14ನೇ ಸುತ್ತಿನ ಮಾತುಕತೆ
ನವದೆಹಲಿ, ಡಿಸೆಂಬರ್ 03: ಭಾರತ-ಚೀನಾ ನಡುವೆ ಡಿಸೆಂಬರ್ ಅಂತ್ಯದೊಳಗೆ 14ನೇ ಸುತ್ತಿನ ಮಾತುಕತೆ ನಡೆಯಲಿದೆ.
ಪೂರ್ವ ಲಖಾಡ್ನ ಗಡಿಯಲ್ಲಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿ ಹೊಂದಿರುವ ಭಾರತ ಮತ್ತು ಚೀನಾ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿವೆ.
ಉಭಯ ದೇಶಗಳ ನಡುವಿನ 14ನೇ ಸುತ್ತಿನ ಕಾರ್ಪ್ಸ್ ಕಮಾಂಡ್ ಮಟ್ಟದ ಮಾತುಕತೆ ಈ ತಿಂಗಳ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

2020ರ ಮೇನಲ್ಲಿ ಡ್ರ್ಯಾನಗ್ ದೇಶದ ಸೇನಾ ಪಡೆಗಳು ಪೂರ್ವ ಲಡಾಖ್ನಲ್ಲಿ ವಾಸ್ತವಿಕ ಗಡಿ ರೇಖೆ(ಎಲ್ಎಸಿ) ಉದ್ದಕ್ಕೂ ಭಾರತದ ವಿರುದ್ಧ ಪ್ರಚೋದನೆ ಪ್ರಾರಂಭಿಸಿತ್ತು. ಕಳೆದ ವರ್ಷ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆಯ ಸಾವಿನ ಸಂಖ್ಯೆಯೂ ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬೆಳವಣಿಗೆಗಳಿಂದ ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಎರಡೂ ದೇಶಗಳು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿವೆ. ಎರಡೂ ಕಡೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.
14ನೇ ಸುತ್ತಿನ ಮಾತುಕತೆಗೆ ಚೀನಾ ಆಹ್ವಾನ ನೀಡಿದೆ. ಡಿಸೆಂಬರ್ ದ್ವಿತೀಯಾರ್ಧದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ವಿಜಯ ಸೂಚಿಸುವ ಸುವರ್ಣ ಮಹೋತ್ಸವದಲ್ಲಿ ಸೈನಿಕರು ಭಾಗವಹಿಸಿದ್ದಾರೆ. ಇದು ಡಿಸೆಂಬರ್ 16ರ ವರೆಗೆ ನಡೆಯಲಿದ್ದು, ಆ ಬಳಿಕ ಮಾತುಕತೆಗೆ ಸಮಯ ನಿಗದಿ ಮಾಡಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಸಮಸ್ಯೆ ಬಗೆಹರಿಸಲು ಇದುವರೆಗೆ ಸೇನಾ ಹಿರಿಯ ಅಧಿಕಾರಿಗಳ ಮಟ್ಟದ 13 ಸುತ್ತಿನ ಮಾತುಕತೆ ನಡೆದಿದೆ. ಪ್ಯಾಂಗಾಂಗ್ ಲೇಕ್ ಘರ್ಷಣೆ ಸ್ಥಳಗಳಿಂದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವಿಕೆ, ಗೋಗ್ರಾ ಹೈಟ್ಸ್ ಪ್ರದೇಶದಿಂದ ಸೇನಾ ಪಡೆಗಳ ಹಿಂಪಡೆಯುವಿಕೆ ಪೂರ್ಣಗೊಂಡಿದೆ. ಹಾಟ್ ಸ್ಪ್ರಿಂಗ್ಸ್ನಲ್ಲಿ ಹಿಂತೆಗೆದುಕೊಳ್ಳುವ ಕುರಿತು ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮುಂದುವರೆದಿದೆ.
ಸುದೀರ್ಘ ಲಡಾಖ್ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದ 13ನೇ ಸುತ್ತಿನ ಮಿಲಿಟರಿ ಮಾತುಕತೆ ವಿಫಲವಾಗಿತ್ತು.
ಗಡಿ ಸಂಘರ್ಷ ಕೊನೆಗಾಣಿಸಬಹುದಾದ ಯಾವುದೇ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲು, ಚೀನಿ ಸೇನೆ ಸುತಾರಂ ತಯಾರಿಲ್ಲ ಎಂದು ಭಾರತೀಯ ಸೇನೆಯ ವಕ್ತಾರರು ತಿಳಿಸಿದ್ದಾರೆ. ಸೈನ್ಯ ಜಮಾವಣೆಯ ತನ್ನ ಪಟ್ಟನ್ನು ಚೀನಾ ಸಡಿಲಿಸದಿರುವುದೇ ಸಮಸ್ಯೆ ಮತ್ತು ಕಗ್ಗಂಟಾಗಲು ಕಾರಣ ಎನ್ನಲಾಗಿದೆ.
ಕೋರ್ ಕಮಾಂಡರ್ಗಳ 13ನೇ ಸುತ್ತಿನ ಮಾತುಕತೆ ವೇಳೆ ಗಡಿ ಬಿಕ್ಕಟ್ಟು ಶಮನಗೊಳಿಸಲು, ಭಾರತೀಯ ಸೇನೆ ನೀಡಿದ ಎಲ್ಲಾ ರಚನಾತ್ಮಕ ಸಲಹೆಗಳನ್ನು ಚೀನಿ ಸೇನೆ ತಿರಸ್ಕರಿಸಿದೆ. ಅಲ್ಲದೇ ಗಡಿ ಬಿಕ್ಕಟ್ಟಿಗೆ ಮೂಲ ಕಾರಣವಾದ ಸೈನ್ಯ ಜಮಾವಣೆ ಪ್ರಕ್ರಿಯೆಯನ್ನು ನಿಲ್ಲಿಸಲು ಡ್ರ್ಯಾಗನ್ ಒಪ್ಪುತ್ತಿಲ್ಲ ಎಂದು ಮೂಲಗಳು ತಿಳಿಸಿತ್ತು.
ಪರಸ್ಪರ ಸಂವಹನ ಪ್ರಕ್ರಿಯೆ ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಗಡಿ ಪರಿಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಉಭಯ ಸೇನೆ ಸಮ್ಮತಿ ಸೂಚಿಸಿವೆ. ಆದರೆ ಸಮಸ್ಯೆ ಪರಿಹಾರಕ್ಕೆ ಭಿನ್ನ ನಿಲುವುಗಳನ್ನು ಪ್ರದರ್ಶಿಸಿವೆ ಎಂಂಬ ಮಾಹಿತಿ ಬಂದಿದೆ. ಚೀನಿ ಸೇನೆ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇರುವುದಾಗಿ ಭಾರತೀಯ ಸೇನೆ ಹೇಳಿದೆ.
ಸೈನ್ಯ ಜಮಾವಣೆ ಮೂಲಕ ಗಡಿ ಸಮಸ್ಯೆಯನ್ನು ಜೀವಂತವಾಗಿರಿಸಿರುವುದು ಚೀನಿ ಸೇನೆಯ ಉದ್ದೇಶ ಇದ್ದಂತಿದೆ. ಭಾರತದೊಂದಿಗೆ ಒಂದು ಸುದೀರ್ಘ ಗಡಿ ಸಂಘರ್ಷಕ್ಕೆ ಚೀನಾ ಯೋಜನೆ ರೂಪಿಸಿದಂತಿದೆ. ಚೀನಾದ ಈ ಯೋಜನೆಗಳಿಗೆ ಹಲವು ಆಯಾಮಗಳಿರುವುದು ಸ್ಪಷ್ಟ. ಒಂದು, ಭಾರತದೊಂದಿಗಿನ ನಿರಂತರ ಗಡಿ ಸಂಘರ್ಷ ಜಾಗತಿಕವಾಗಿ ಗಮನ ಸೆಳೆಯುವಂತದ್ದು.
ಎರಡನೇಯದಾಗಿ ಒಂದು ವೇಳೆ ತಾನು ತೈವಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಿಳಿದರೆ, ಭಾರತವೂ ಸೇರಿದಂತೆ ಜಗತ್ತಿನ ಪ್ರಬಲ ರಾಷ್ಟ್ರಗಳ ಗಮನ ಆ ಕಡೆ ಸೆಳೆಯದಿರಲಿ ಎಂಬುದು ಡ್ರ್ಯಾಗನ್ ನಿಲುವು.












Click it and Unblock the Notifications