ರಾಜಸ್ಥಾನದಲ್ಲಿ ಪಕ್ಷೇತರರು, ಸಣ್ಣ ಪಕ್ಷಗಳ ಮೊರೆ ಹೋದ ಕಾಂಗ್ರೆಸ್, ಬಿಜೆಪಿ
ಜೈಪುರ, ಡಿಸೆಂಬರ್ 2: ರಾಜಸ್ಥಾನ ವಿಧಾನಸಭಾ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟಗೊಳ್ಳಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪಕ್ಷೇತರರು ಮತ್ತು ಸಣ್ಣ ಪಕ್ಷಗಳ ಬೆಂಬಲ ಪಡೆಯಲು ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ.
ಚುನಾವಣೆ ಘೊಷಣೆಯಾದಾಗ ಎರಡೂ ಪಕ್ಷಗಳಿಂದ ಸುಮಾರು 40 ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೂ ಅವರು ಬಂಡಾಯವೆದ್ದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇವರು ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಟಿಕೆಟ್ ಪಡೆದ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಹಲವಾರು ಎಕ್ಸಿಟ್ ಪೋಲ್ಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಭವಿಷ್ಯ ನುಡಿದಿದ್ದು, ಸರ್ಕಾರ ರಚನೆಯಲ್ಲಿ ಈ ಬಂಡಾಯ ಶಾಸಕರು ನಿರ್ಣಾಯಕ ಪಾತ್ರ ವಹಿಸಬಹುದು ಎನ್ನಲಾಗಿದೆ.

ಸಮಬಲದ ತೀರ್ಪು ಬಂದರೆ ಚುನಾವಣೆಯಲ್ಲಿ ಗೆಲ್ಲುವ ಸ್ವತಂತ್ರ ಮತ್ತು ಬಂಡಾಯ ಅಭ್ಯರ್ಥಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ವಿವಿಧ ಹಂತಗಳಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಎರಡು ಪಕ್ಷಗಳ ಮೂಲಗಳು ತಿಳಿಸಿವೆ. ರಾಜಸ್ಥಾನದ ಎಕ್ಸಿಟ್ ಪೋಲ್ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ.
ಮರುದಿನ ಬಳಿಕ ಶುಕ್ರವಾರ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರೂ ಮೂರು ಎಕ್ಸಿಟ್ ಪೋಲ್ಗಳು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ನೀಡಿವೆ. ಹೀಗಾಗಿ ಸಂಮಿಶ್ರ ಸರ್ಕಾರ ರಚನೆಯಾಗಬಹುದು ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷೇತರರ ಕಾಲು ಹಿಡಿಯಲು ಮುಂದಾಗಿವೆ.
ಈಗಾಗಲೇ ನಮ್ಮ ಪಕ್ಷದ ನಾಯಕರು ಸ್ವತಂತ್ರರು ಮತ್ತು ಬಂಡಾಯಗಾರರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲವೊಂದು ಪಕ್ಷವು ಸರ್ಕಾರ ರಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇ ತಂತ್ರವನ್ನು ಅನುಸರಿಸಿ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷದ ಬಂಡಾಯಗಾರರನ್ನು ನಾಯಕರು ಸಂಪರ್ಕಿಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಂಡಾಯಗಾರರ ಹೊರತಾಗಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ಅಗತ್ಯ ಬಿದ್ದರೆ ಸಣ್ಣ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿಯ ಸಾಧ್ಯತೆಗಳನ್ನು ನೋಡುತ್ತಿವೆ. ಇದರಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಭಾರತ ಆದಿವಾಸಿ ಪಕ್ಷ (ಬಿಎಪಿ), ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ), ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ಎಲ್ಪಿ), ಸಿಪಿಐ (ಎಂ) ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವ ಪಕ್ಷಗಳಾಗಿದ್ದು, ಇವುಗಳ ಸಖ್ಯ ಬಯಸಿವೆ.
ಬಿಜೆಪಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದಿಂದ ಕಣಕ್ಕಿಳಿದಿದ್ದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿದ್ದ ಮಾದರಿ ರಾಜಸ್ಥಾನದಲ್ಲಿ ತನ್ನ ಪಾಲುದಾರ ರಾಷ್ಟ್ರೀಯ ಲೋಕದಳಕ್ಕೆ (ಆರ್ಎಲ್ಡಿ) ಭಾರತ್ಪುರ ಕ್ಷೇತ್ರದ ಸ್ಥಾನವನ್ನು ಬಿಟ್ಟುಕೊಟ್ಟಿದೆ.
ರವೀಂದ್ರ ಸಿಂಗ್ ಭಾಟಿ (ಶಿಯೋ), ಚಂದ್ರಭಾನ್ ಸಿಂಗ್ ಆಕ್ಯ (ಚಿತ್ತೋರ್ಗಢ), ಯೂನುಸ್ ಖಾನ್ (ದೀದ್ವಾನಾ), ಕೈಲಾಶ್ ಮೇಘವಾಲ್ (ಶಹಪುರ), ಆಶಾ ಮೀನಾ (ಸವಾಯಿ ಮಾಧೋಪುರ್), ಆಶು ಸಿಂಗ್ ಸುರಪುರ (ಜೋತ್ವಾರಾ), ರೋಹಿತಾಶ್ವ್ ಶರ್ಮಾ (ಬನ್ಸೂರ್) ಬಿಜೆಪಿಯ ಬಂಡಾಯಗಾರರು. ವೀರೇಂದ್ರ ಬೇನಿವಾಲ್ (ಲುಂಕಾರನ್ಸರ್), ಗೋಪಾಲ್ ಬಹೇಟಿ (ಪುಷ್ಕರ್), ರಾಮಚಂದ್ರ ಸರದಾನ (ವಿರಾಟ್ ನಗರ) ಕಾಂಗ್ರೆಸ್ನಿಂದ ಬಂಡಾಯವೆದ್ದ ಬಳಗಕ್ಕೆ ಸೇರಿದ್ದಾರೆ.












Click it and Unblock the Notifications