ನಿತೀಶ್ ರಾಜೀನಾಮೆ, ರಾಷ್ಟ್ರಮಟ್ಟದ ಮೈತ್ರಿಕೂಟ ಕನಸು ನುಚ್ಚುನೂರು
ಬಿಜೆಪಿಯನ್ನು ಕಟ್ಟಿಹಾಕಲು ವಿಪಕ್ಷಗಳಿಗೆ ಇದ್ದ ಭರವಸೆಯೊಂದು ಬುಧವಾರ ಸಂಜೆ ನುಚ್ಚುನೂರಾಯಿತು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆಯೊಂದಿಗೆ ಆರ್ ಜೆಡಿ ಜತೆಗಿನ ಮೈತ್ರಿ ಕಡಿದುಕೊಂಡಿದ್ದು, ಆ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶದಲ್ಲಿ ನಡೆಸಬಹುದು ಎಂದುಕೊಂಡಿದ್ದ ಪ್ರಯೋಗದ ಅಂತ್ಯ ಕಂಡಿತು.
ಮುಂದಿನ ಲೋಕ್ಸಭೆ ಚುನಾವಣೆಗೆ ವಿರೋಧಪಕ್ಷಗಳೆಲ್ಲ ಒಗ್ಗೂಡಿ ದೊಡ್ಡ್ ಮೈತ್ರಿಕೂಟ ರಚಿಸಿಕೊಂಡು ಬಿಜೆಪಿ ಜತೆಗೆ ಬಡಿದಾಡಬೇಕು ಎಂದುಕೊಂಡಿದ್ದರು. ಆ ಪೈಕಿ ಜಟ್ಟಿ ಎನಿಸಿಕೊಂಡಿದ್ದ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟದ ಕಡೆಗೆ ಸರಿದುಬಿಟ್ಟರು. ನೆಲಮಟ್ಟದಲ್ಲಿ ಇರುವ ಪರಿಸ್ಥಿತಿ ಚೆನ್ನಾಗಿ ಅರಿತು, ಗೆಲ್ಲಬಹುದಾದ ತಂಡವನ್ನು ಸೇರಿದರು.

ಮೂಲಗಳ ಪ್ರಕಾರ, ಕಳೆದ ಕೆಲ ತಿಂಗಳಿಂದಲೇ ನಿತೀಶ್ ಕುಮಾರ್ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಮುಂದಿನ ಲೋಕ್ಸಭೆ ಚುನಾವಣೆಗೆ ಮತ್ತೆ ಮೋದಿ ಅಲೆ ಏಳುವ ಇಷಾರೆ ಸಿಕ್ಕಿಹೋಗಿದೆ. ಇನ್ನು ಲಾಲೂ ಪ್ರಸಾದ್ ಯಾದವ್ ಜತೆ ಗುರುತಿಸಿಕೊಳ್ಳುವುದು ಯಾವ ರೀತಿಯಲ್ಲೂ ಸಕಾರಾತ್ಮಕ ನಡೆ ಅಲ್ಲ.
ತೇಜಸ್ವಿ ವಿರುದ್ಧದ ಭ್ರಷ್ಟಾಚಾರ ಹಗರಣ ನಿತೀಶ್ ಪಾಲಿಗೆ ವರದಂತೆ ಸೃಷ್ಟಿಯಾದ ಸನ್ನಿವೇಶ. ಅದನ್ನೇ ಅಸ್ತ್ರ ಮಾಡಿಕೊಂಡ ನಿತೀಶ್, ಮೈತ್ರಿಕೂಟದಿಂದ ಹೊರ ನಡೆದುಬಿಟ್ಟರು. ಬುಧವಾರದ ರಾಜೀನಾಮೆ ನಿರ್ಧಾರ ಒಂದೆರಡು ದಿನದ್ದಲ್ಲ, ಹಲವು ತಿಂಗಳಿಂದ ಆಲೋಚನೆಯಲ್ಲಿದ್ದ ಯೋಜನೆ. ಇದೀಗ ಜಾರಿಗೆ ಬಂತು, ಅಷ್ಟೇ.
ಅಪನಗದೀಕರಣದ ನಡೆಯನ್ನು ಹೊಗಳಿದ್ದ ನಿತೀಶ್, ಎನ್ ಡಿಎ ಕಡೆಗೆ ಇಡಲು ಆರಂಭಿಸಿದ ಪ್ರಾರಂಭಿಕ ಹೆಜ್ಜೆ ಗುರುತು. ಇನ್ನು ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬೆಂಬಲಿಸಿದ್ದು ಮತ್ತೊಂದು ಇಷಾರೆ. ಭವಿಷ್ಯವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡ ನಿತೀಶ್, ತಮ್ಮ ದಾಳ ಉರುಳಿಸಿದ್ದಾರೆ.
ಮೊದಲಿಗೆ ನಿತೀಶ್ ಸರಕಾರಕ್ಕೆ ಹೊರಗಿನಿಂದ ಬಿಜೆಪಿ ಬೆಂಬಲಿಸುತ್ತದೆ ಎಂಬ ಮಾತಿತ್ತು. ಆ ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಸರಕಾರದಲ್ಲಿ ಭಾಗಿಯಾಗುವುದು ಖಾತ್ರಿ ಆಗಿದೆ. ಆ ಮೂಲಕ ನಿತೀಶ್ ಕುಮಾರ್ ಅಧಿಕೃತವಾಗಿ ಎನ್ ಡಿಎ ಮೈತ್ರಿಕೂಟಕ್ಕೆ ಹಿಂತಿರುಗಿದ್ದಾರೆ.












Click it and Unblock the Notifications