ರಾಮ ಮಂದಿರ ಟ್ರಸ್ಟ್ ಸದಸ್ಯರಿಗೆ ಪ್ರಧಾನಿ ಮೋದಿ ನೀಡಿದ ಮಹತ್ವದ ಸೂಚನೆ!
ನವದೆಹಲಿ, ಫೆ 22: ಹೊಸದಾಗಿ ಸ್ಥಾಪನೆಯಾಗಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆಂದು ವರದಿಯಾಗಿದೆ.
"ಸುಮಾರು ಮೂವತ್ತು ವರ್ಷಗಳ ಹಿಂದೆ ವಿಶ್ವಹಿಂದೂ ಪರಿಷತ್ ಸಿದ್ದಪಡಿಸಿದ್ದ ಮೂಲ ನೀಲನಕ್ಷೆಯಲ್ಲಿ ಸಣ್ಣ ಮಾರ್ಪಾಡು ಆಗುವ ಸಾಧ್ಯತೆಯಿದೆ" ಎಂದು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
"ಪ್ರಧಾನಿ ಮೋದಿಯವರನ್ನು ನಾವು ಮತ್ತು ಟ್ರಸ್ಟ್ ಅಧ್ಯಕ್ಷರಾದ ಮಹಾಂತ ನೃತ್ಯ ಗೋಪಾಲದಾಸ ಭೇಟಿಯಾಗಿದ್ದೆವು. ಆ ಸಂದರ್ಭದಲ್ಲಿ ಕೆಲವು ಮಹತ್ವದ ಸೂಚನೆಯನ್ನು ಅವರು ನೀಡಿದ್ದಾರೆ. ಅದರಂತೇ ನಡೆದುಕೊಳ್ಳಲಾಗುವುದು" ಎಂದು ರಾಯ್ ಹೇಳಿದ್ದಾರೆ.

"ದಶಕಗಳ ಅಯೋಧ್ಯೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ರಾಮ ಮಂದಿರ ಭವ್ಯವಾಗಿ ನಿರ್ಮಾಣವಾಗಬೇಕು. ರಾಮ ಮಂದಿರ ದೇಶವಾಸಿಗಳ ಸ್ವಾಭಿಮಾನದ ಮತ್ತು ಹೆಮ್ಮೆಯ ವಿಚಾರ" ಎಂದು ನಮ್ಮ ಭೇಟಿಯ ವೇಳೆ ಪ್ರಧಾನಿಗಳು ಹೇಳಿದ್ದಾರೆ ಎಂದು ರಾಯ್ ತಿಳಿಸಿದರು.
"ಮಂದಿರ ನಿರ್ಮಾಣದ ಕಾರ್ಯ ಅತ್ಯಂತ ಶಾಂತಿಯುತವಾಗಿ ನಡೆಯಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ ಕೆಲಸ ನಡೆಯಬಾರದು. ಎಲ್ಲರೂ ಶಾಂತಚಿತ್ತದಿಂದ ಈ ಮಹತ್ವದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎನ್ನುವ ಸೂಚನೆ ನಮಗೆ ಪ್ರಧಾನಿಗಳಿಂದ ಬಂದಿದೆ" ಎಂದು ಚಂಪತ್ ರಾಯ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವೇಗದ ಗತಿಯಲ್ಲಿ ನಡೆಸುವ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಏಳು ಸದಸ್ಯರು, ಐವರು ನಾಮನಿರ್ದೇಶನ ಸದಸ್ಯರು ಹಾಗೂ ಮೂವರು ಟ್ರಸ್ಟಿಗಳು ಇರಲಿದ್ದಾರೆ.











Click it and Unblock the Notifications