Cyclone Montha: ಈ ಭಾಗಗಳಲ್ಲಿ ಮುಂದಿನ ಎರಡು ದಿನ ರಣಭೀಕರ ಮಳೆ ಮುನ್ಸೂಚನೆ
Cyclone Montha: ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಇದೀಗ ಮುಂದಿನ ಎರಡು ದಿನ ಬಂಗಾಳಕೊಲ್ಲಿಯಲ್ಲಿ ಮೋಂಥಾ ಚಂಡಮಾರುತ ಪರಿಣಾಮ ಈ ಭಾಗಗಳಲ್ಲಿ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮೋಂಥಾ ಚಂಡಮಾರುತ ಪರಿಣಾಮ ಹಲವು ರಾಜ್ಯಗಳಲ್ಲಿ ಸಾಧಾರಣ ಮಳೆಯಾದ್ರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆ ಇದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ 'ಮೋಂಥಾ' ಚಂಡಮಾರುತ ತೀವ್ರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ (ಅಕ್ಟೋಬರ್ 27) ಘೋಷಣೆ ಮಾಡಿದೆ. ಇದು ಭಾರತದ ಪೂರ್ವ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ಮಂಗಳವಾರ ಬೆಳಗ್ಗೆ ವೇಳೆಗೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮೊಂತಾ ಚಂಡಮಾರುತ ಮಂಗಳವಾರ (ಅಕ್ಟೋಬರ್ 28) ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ಅಪ್ಪಳಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆಂಧ್ರ ಪ್ರದೇಶದ 23 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆಂಧ್ರಪ್ರದೇಶದ ಕಾಕಿನಾಡ ಬಳಿಯ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಭೂಕುಸಿತ ಉಂಟಾಗುವ ಸಾಧ್ಯತೆಯಿದ್ದು, ಈ ವೇಳೆ ಗಂಟೆಗೆ 90-100 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಬಹುದು ಎಂದು ತಿಳಿಸಿದೆ.
ಚಂಡಮಾರುತ ಅಪ್ಪಳಿಸುವ ಆತಂಕ ಹಿನ್ನೆಲೆ ಒಡಿಶಾ ಮತ್ತು ತಮಿಳುನಾಡು ಕಡಲ ತೀರದಲ್ಲೂ ನಿಗಾವಹಿಸಲಾಗಿದೆ. ಕಡಲ ತೀರ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಬಂಗಾಳಕೊಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಿದೆ.
ಇನ್ನೂ ಇಂದು (ಅಕ್ಟೋಬರ್ 27) ಆಂಧ್ರಪ್ರದೇಶದ ಹಲವೆಡೆ ಕಳೆದ ಕೆಲವು ಗಂಟೆಗಳಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಚಂಡಮಾರುತವು ಇದೀಗ ತೀವ್ರತೆ ಪಡೆದುಕೊಂಡಿದೆ. ಪರಿಣಾಮ ಕೆಲವೇ ಗಂಟೆಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ 65-201 ಮಿಲಿ ಮೀಟರ್ ಮಳೆ ಬೀಳುವ ಸಾಧ್ಯತೆಯಿದೆ.
ಇದೇ ವೇಳೆ ದಕ್ಷಿಣ ಒಡಿಶಾ, ಛತ್ತೀಸ್ಗಢ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶದಲ್ಲಿ ಎಲ್ಲೆಲ್ಲಿ ಮಳೆ?: ಆಂಧ್ರಪ್ರದೇಶದ ತಿರುಪತಿ, ನೆಲ್ಲೂರು, ವೈಎಸ್ಆರ್, ಕಡಪ, ಪ್ರಕಾಶಂ, ಚಿತ್ತೂರು, ನಂದ್ಯಾಲ, ಗುಂಟೂರು, ಕಾಕಿನಾಡ, ಅನಕಾಪಲ್ಲಿ, ವಿಶಾಖಪಟ್ಟಣಂ, ಏಲೂರು, ವಿಜಯನಗರಂ, ಶ್ರೀಕಾಕುಳಂ, ಶ್ರೀಕಾಕುಳಂ ಸೇರಿ ಹಲವೆಡೆ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಒಡಿಶಾದಲ್ಲಿ ಎಲ್ಲೆಲ್ಲಿ ಮಳೆ?: ಗಂಜಾಂ, ಗಜಪತಿ, ರಾಯಗಡ, ಮಲ್ಕಾನ್ಗಿರಿ, ಕೊರಾಪುಟ್, ನವರಂಗಪುರ, ಕಲಹಂಡಿ, ಕಂಧಮಾಲ್, ನುವಾಪಾದ ಸೇರಿದಂತೆ ಹಲವೆಡೆ ಭಾರೀ ಮಳಡೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಈ ಹಿಂದೆ ಶಕ್ತಿ ಚಂಡಮಾರುತ ಪರಿಣಾಮ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ.
ಮೋಂಥಾ ಚಂಡಮಾರುತದ ಪ್ರಭಾವ ಹಿನ್ನೆಲೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ 6 ಗಂಟೆಗಳಲ್ಲಿ ಮೋಂಥಾ ಚಂಡಮಾರುತವು ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಚಲಿಸಿದೆ. ಚೆನ್ನೈನಿಂದ 520 ಕಿ.ಮೀ ದೂರದಲ್ಲಿ, ಕಾಕಿನಾಡದಿಂದ 570 ಕಿಲೋ ಮೀಟರ್ ದೂರದಲ್ಲಿ, ವಿಶಾಖಪಟ್ಟಣದಿಂದ 600 ಕಿ.ಮೀ ದೂರದಲ್ಲಿ ಚಂಡಮಾರುತ ಅಪ್ಪಳಿಸಿರುವ ಬಗ್ಗೆ ವರದಿಯಾಗಿದೆ.












Click it and Unblock the Notifications