ಸತತ ಮೂರನೇ ವರ್ಷವೂ ದೇಶಾದ್ಯಂತ ಸಾಮಾನ್ಯ ಮುಂಗಾರು!
ಬೆಂಗಳೂರು, ಮೇ 31: ಈ ಬಾರಿ ಸಾಮಾನ್ಯ ಮುಂಗಾರನ್ನು ನಿರೀಕ್ಷಿಸಬಹುದಾಗಿದೆ. ರೈತರು ಹಾಗೂ ಆರ್ಥಿಕತೆಗೆ ಖುಷಿ ಕೊಡುವ ಮುಂಗಾರು ಈ ಬಾರಿ ಬರಲಿದೆ. ವಾಡಿಕೆ ಪ್ರಮಾಣದ ಮುಂಗಾರು ಸುರಿಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಪೂರ್ವ ಮತ್ತು ಈಶಾನ್ಯ ಭಾರತದ ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ನಿರೀಕ್ಷೆ ಇದೆಯಾದರೂ ಜೂನ್ 3ರ ಹೊತ್ತಿಗೆ ನೈಋತ್ಯ ಮುಂಗಾರು ಮಾರುತಗಳು ಇಡೀ ದೇಶ ವ್ಯಾಪಿಸುವ ಸಾಧ್ಯತೆ ಇದೆ.
ಮಾಯದಂಥ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ನೀರೋ ನೀರು
ಜುಲೈನಲ್ಲಿ ದೇಶಾದ್ಯಂತ ಸರಾಸರಿ ಶೇಕಡಾ 100ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. ಆಗಸ್ಟ್ನಲ್ಲಿ ಶೇಖಡಾ 94ರಷ್ಟು ಮಳೆ ಬೀಳಬಹುದು. ಒಟ್ಟಾರೆ ಈ ವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ದೀರ್ಘಾವಧಿಯಲ್ಲಿ ಸರಾಸರಿಯ ಶೇ.97ರಷ್ಟು ಮಳೆ ಬೀಳಲಿದೆ ಎಂದು ಇಲಾಖೆ ಅಂದಾಜಿಸಿದೆ.
ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಕೆಲವು ದಿನಗಳ ಹಿಂದೆ ಬಹುತೇಕ ಇದೇ ರೀತಿಯ ನಿರೀಕ್ಷೆ ಪ್ರಕಟಿಸಿತ್ತು. ಸ್ಕೈಮೇಟ್ ಪ್ರಕಾರ, ವರ್ಷದ ಸರಾಸರಿ ಅಂದಾಜು ಮಳೆ ಪ್ರಮಾಣ 887 ಮಿ.ಮೀ ಆಗಿದ್ದು, ಈ ಬಾರಿ ಶೇ.100ರಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿತ್ತು.
ಮುಂದಿನ 48 ಗಂಟೆಗಳಲ್ಲಿ ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ. ಜೂ.6ರ ಬಳಿಕ ಮಹಾರಾಷ್ಟ್ರ ಗೋವಾ ದಲ್ಲಿ ವರುಣನ ಆರ್ಭಟ ಹೆಚ್ಚಾಗಲಿದೆ. ವಾಯುವ್ಯ ಭಾರತ ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ದೆಹಲಿ, ಯಲ್ಲಿ ಶೇ.100 ರಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ.